ದೇವರ ಪ್ರಸಾದವನ್ನು ಕೊಟ್ಟುಬಿಡಿ – ಕೆಎಸ್ಆರ್‌ಟಿಸಿ ಚಾಲಕರಿಗೆ ಬ್ರೌನ್‌ ಶುಗರ್‌ ಕವರ್‌ ನೀಡ್ತಿದ್ದ ಆರೋಪಿ ಅರೆಸ್ಟ್‌

Public TV
1 Min Read

ಬೆಂಗಳೂರು: ಸಾರಿಗೆ ನೌಕರರನ್ನೇ ಬ್ರೌನ್‌ಶುಗರ್‌ ಕಳುಹಿಸಲು ಬಳಸಿಕೊಂಡಿದ್ದ ಖತರ್ನಾಕ್‌ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಕ್ರಮ್ ಖಿಲೇರಿ(25) ಬಂಧಿತ ಆರೋಪಿ. ಸಿಟಿ ಮಾರುಕಟ್ಟೆ ಠಾಣೆ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆಗ ಒಳಪಡಿಸಿದಾಗ ತನ್ನ ಕಾರ್ಯತಂತ್ರವನ್ನು ಬಾಯಿಬಿಟ್ಟಿದ್ದಾನೆ. ಈತನಿಂದ 90 ಗ್ರಾಂ ಬ್ರೌನ್ ಶುಗರ್, 6 ಸಾವಿರ ರೂ. ನಗದು, 2 ಮೊಬೈಲ್ ಮತ್ತು ದ್ವಿಚಕ್ರ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ.

ಸಾಗಾಟ ಹೇಗೆ?
ಬ್ರೌನ್‌ ಶುಗರ್‌ ಮಾರಾಟ ಮಾಡಲು ವಿಕ್ರಮ್‌ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಚಾಲಕ, ನಿರ್ವಾಹಕರನ್ನು ಬಳಸಿಕೊಳ್ಳುತ್ತಿದ್ದ. ಚಾಲಕರ ಬಳಿ ಬ್ರೌನ್‌ ಶುಗರ್‌ ಕವರ್‌ ನೀಡಿ ಇದು ದೇವರ ಪ್ರಸಾದವಾಗಿದ್ದು ಸ್ನೇಹಿತರಿಗೆ ಕಳುಹಿಸುತ್ತಿದ್ದೇನೆ. ಬಸ್‌ ನಿಂತ ಕೂಡಲೇ ಸ್ನೇಹಿತರು ನಿಲ್ದಾಣದಲ್ಲಿ ಇರುತ್ತಾರೆ. ಅವರಿಗೆ ಇದನ್ನು ಕೊಡಿ ಎಂದು ಹೇಳುತ್ತಿದ್ದ. ಈ ಕೆಲಸ ಮಾಡಲು ಚಾಲಕರಿಗೆ 100 ರೂ. ಪಾವತಿಸುತ್ತಿದ್ದ.

ನಿಲ್ದಾಣಕ್ಕೆ ಬಸ್‌ ಬರುವವರೆಗೂ ಆತ ಹೆಲ್ಮೆಟ್‌ನಲ್ಲಿ ಬ್ರೌನ್ ಶುಗರ್ ಬಚ್ಚಿಡುತ್ತಿದ್ದ. ಪೊಲೀಸರು ಸೇರಿದಂತೆ ಯಾರಿಗೂ ಅನುಮಾನ ಬರಬಾರದೆಂದು ಹೆಲ್ಮೆಟ್‌ನ ಸ್ಪಂಜ್‌ ಒಳಗಡೆ ಮಾದಕವಸ್ತುವನ್ನು ಇಟ್ಟುಕೊಳ್ಳುತ್ತಿದ್ದ. ಈತನ ದಂಧೆಯ ಬಗ್ಗೆ ಮಾಹಿತಿ ಇಲ್ಲದ  ಚಾಲಕರು ಮತ್ತು ನಿರ್ವಾಹಕರು ಡ್ರಗ್ಸ್‌ ಮಾರಾಟಕ್ಕೆ ಸಾಥ್‌ ನೀಡುತ್ತಿದ್ದರು.

ಬೆಂಗಳೂರಿನಲ್ಲಿ ಡ್ರಗ್ಸ್‌ ದಂಧೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಈಗ ಹಲವು ಆರೋಪಿಗಳನ್ನು ಬಂಧಿಸುತ್ತಿದ್ದಾರೆ. ಆರೋಪಿಗಳ ಬಂಧನವಾಗುತ್ತಿದ್ದಂತೆ ಈ ಜಾಲದ ವ್ಯಾಪ್ತಿ ಹೇಗಿದೆ? ಯಾರೆಲ್ಲ ಶಾಮೀಲಾಗಿದ್ದಾರೆ ಎನ್ನುವುದು ಬಯಲಾಗುತ್ತಿದೆ.

ವಿಕ್ರಮ್‌ ಖಿಲೇರಿ ಈ ಐಡಿಯಾ ನೋಡಿ ಪೊಲೀಸರೇ ಒಮ್ಮೆ ದಂಗಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಮಾಫಿಯಾ ಹೊರಬೀಳುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವ  ಕಾರ್ಯ ಚುರುಕುಗೊಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *