ದುರಂಹಕಾರ ನಡೆಯಲ್ಲ: ಹೆಚ್‍ಡಿಕೆ ವಿರುದ್ಧ ಸಿಪಿವೈ ಏಕವಚನದಲ್ಲಿಯೇ ವಾಗ್ದಾಳಿ

Public TV
1 Min Read

ರಾಮನಗರ: ಜನರ ಜೊತೆ ನಮ್ಮ ದುರಂಹಕಾರ ನಡೆಯಲ್ಲ. ಅಭಿವೃದ್ಧಿ ಮಾಡಿದರಷ್ಟೇ ಜನ ಮತ ಹಾಕುತ್ತಾರೆ ಎಂಬ ಸತ್ಯ ಅವನಿಗೆ ಈಗ ಗೊತ್ತಾಗಿದೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಏಕವಚನದಲ್ಲಿಯೇ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.

ಫೆಬ್ರವರಿ 25ರಂದು ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜನರ ಕೈಗೆ ಸಿಗುತ್ತಿರಲಿಲ್ಲ. ಬೆಳಗ್ಗೆ 6 ಗಂಟೆಗೆ ಜನರು ಮನೆ ಬಳಿ ಹೋದರೂ ಸೇರಿಸುತ್ತಿರಲಿಲ್ಲ. ಆದರೆ ಅಧಿಕಾರ ಕಳೆದುಕೊಂಡಾಗ 6 ಗಂಟೆಗೆ ಚನ್ನಪಟ್ಟಣಕ್ಕೆ ಬರುತ್ತಿದ್ದಾರೆ. ಈಗ ಗೊತ್ತಾಗಿದೆ ಜನರ ಜೊತೆ ನಮ್ಮ ದುರಂಹಕಾರ ನಡೆಯಲ್ಲ. ಅಭಿವೃದ್ಧಿ ಮಾಡಿದರಷ್ಟೇ ಜನ ಮತ ಹಾಕುತ್ತಾರೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಬಂದಾಗ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಲ್ಲು ಗಿಂಜುತ್ತಾರೆ. ಹೂವಿನ ಹಾರ ಹಿಡಿದುಕೊಂಡು ಹೋಗುತ್ತಾರೆ. ಆದರೆ ಅಧಿಕಾರದಲ್ಲಿದ್ದಾಗ ಯಾರಿಗೆ ಅಧಿಕಾರ ಕೊಟ್ಟಿದ್ದಾನೆ? ವಿಧಾನಸೌಧ ಚನ್ನಪಟ್ಟಣದಿಂದ 60 ಕಿ.ಮೀ ಇದೆ. ಜೆಡಿಎಸ್‍ನವರು ಯಾರು ವಿಧಾನಸೌಧದ ಮೆಟ್ಟಿಲು ಹತ್ತಿದ್ದಾರೆ? ಮುಂದಿನ ಏಪ್ರಿಲ್ ನಂತರ ನನ್ನ ರಾಜಕೀಯ ಪ್ರಾರಂಭವಾಗಲಿದೆ. ಇಲ್ಲಿ ನಾನು ಶಾಸಕ, ಬೇರೆಯವರು, ಕುಮಾರಸ್ವಾಮಿಯವರು ಯಾಕೆ ಬರುತ್ತಾರೆ? ಎಂದು ಪ್ರಶ್ನಿಸಿದರು.

ಮುಂದಿನ ಏಪ್ರಿಲ್ ನಂತರ ಕ್ಷೇತ್ರ ಪ್ರವಾಸ ಮಾಡುತ್ತೇನೆ. ಪ್ರತಿಹಳ್ಳಿಗೂ ಭೇಟಿ ಕೊಡುತ್ತೇನೆ, ಪಕ್ಷ ಸಂಘಟನೆ ಮಾಡುತ್ತೇನೆ. ಚನ್ನಪಟ್ಟಣ ನನ್ನ ತವರೂರು, ನನಗೆ ರಾಜಕೀಯ ಜನ್ಮ ನೀಡಿದ ತಾಲೂಕು. ನನಗೆ ನೀವು ಬಿಡುವು ಮಾಡಿಕೊಟ್ಟಿದ್ದೀರಿ ಚನ್ನಪಟ್ಟಣದಿಂದ ರಾಜ್ಯ ಪ್ರವಾಸ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಸರ್ಕಾರ ನನಗೆ ವಿಧಾನಸೌಧದಲ್ಲಿ ಕಚೇರಿ ಕೊಟ್ಟಿದೆ, ಬೆಂಗಳೂರಿನಲ್ಲಿ ಬಂಗಲೆ ಕೊಟ್ಟಿದೆ. ಜನ ನನಗೆ ಮತಹಾಕದಿದ್ದರೂ ಸಹ ಸಚಿವನಾಗುವ ಶಕ್ತಿ ಕೊಟ್ಟಿದ್ದೀರಿ ಎಂದು ನುಡಿದರು.

Share This Article
Leave a Comment

Leave a Reply

Your email address will not be published. Required fields are marked *