ದಿಶಾ ರವಿ ವಿಚಾರವಾಗಿ ನಾನು ಹೆಚ್ಚಿಗೆ ಹೇಳಲಾರೆ: ಬೊಮ್ಮಾಯಿ

Public TV
1 Min Read

ಬೆಂಗಳೂರು: ದಿಶಾ ರವಿ ವಿಚಾರವಾಗಿ ನಾನು ಹೆಚ್ಚಿಗೆ ಏನು ಹೇಳಲಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೆಹಲಿ ರೈತ ಪ್ರತಿಭಟನೆಯ ಟೂಲ್‍ಕಿಟ್ ಪ್ರಕರಣದಲ್ಲಿ ಬೆಂಗಳೂರಿನ ದಿಶಾ ರವಿ ಬಂಧನ ವಿಚಾರವಾಗಿ ಸ್ಥಳೀಯ ಪೊಲೀಸರಿಗೆ ಮಾಹಿತಿ ಇಲ್ಲ. ಬೇರೆ ಬೇರೆ ರೀತಿಯ ಪ್ರಕರಣಗಳಿರುತ್ತದೆ. ಪ್ರೋಟೋಕಾಲ್ ಕೆಲವೊಂದರಲ್ಲಿ ಅನುಸರಿಸಲ್ಲ. ನಾವು ಕೂಡ ರಾಜ್ಯದ ಹೊರಗೆ ಹೋಗಿ ಹಲವರನ್ನು ಬಂಧಿಸುತ್ತೇವೆ. ಇದೀಗ ದೆಹಲಿ ಪೊಲೀಸರ ಬಳಿ ದಿಶಾ ವಿರುದ್ಧ ಕೆಲವು ಸಾಕ್ಷ್ಯಗಳಿದ್ದು, ಅವರ ವಿರುದ್ಧ ದೂರು ದಾಖಲಾಗಿದೆ. ಸದ್ಯ ಪ್ರಕರಣ ದೆಹಲಿ ಕೋರ್ಟ್‍ನಲ್ಲಿದೆ. ಹೀಗಾಗಿ ನಾನು ಈ ವಿಚಾರದಲ್ಲಿ ಹೆಚ್ಚಿಗೆ ಹೇಳಲಾರೆ ಎಂದು ಹೇಳಿದರು.

21ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಪಂಚಮಸಾಲಿ ಸಮಾವೇಶ ವಿಚಾರವಾಗಿ, ಪೊಲೀಸರು ಸಮಾವೇಶದಲ್ಲಿ ಅಗತ್ಯ ಭದ್ರತೆ ಕೈಗೊಳ್ಳುತ್ತಾರೆ. ಪ್ರತಿಭಟನೆ ವೇಳೆ ಜನ, ವಾಹನ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಬಂದೋಬಸ್ತ್ ಮಾಡಲಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಹಲವಾರು ಹೋರಾಟಗಳು ನಡೆದಿವೆ. ಇಂತಹ ಹೋರಾಟಗಳಲ್ಲಿ ಯಾವುದೇ ತೊಂದರೆಯಾಗದಂತೆ ನಮ್ಮ ಪೊಲೀಸರು ನಿಭಾಯಿಸಿದ್ದಾರೆ. ಈ ಮುನ್ನ ಹಾಲುಮತ ಸಮಾಜದವರು ಹೋರಾಟ ನಡೆಸಿದ್ದರು. ಇದೀಗ ಫೆಬ್ರವರಿ 21 ರಂದು ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಸಮಾವೇಶ ನಡೆಯುತ್ತಿರುವ ಹಿನ್ನೆಲೆ ಪೊಲೀಸರು ದಕ್ಷತೆಯಿಂದ ಸುರಕ್ಷತೆಯೊಂದಿಗೆ ಕ್ರಮ ವಹಿಸುತ್ತಾರೆ ಎಂದರು.

ರಾಜ್ಯದಲ್ಲಿ ಬಹಳಷ್ಟು ಹೋರಾಟಗಳು ನಡೆಯುತ್ತಿದ್ದು, ಈ ಕುರಿತಂತೆ ಮುಖ್ಯಮಂತ್ರಿಗಳು ಮೈಸೂರು, ದಾವಣಗೆರೆಗಳಲ್ಲಿ ಈಗಾಗಲೇ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಅಂತಿಮವಾಗಿ ಹೇಳಿಕೆ ನೀಡಿದ ಬಳಿಕ ಎಲ್ಲವೂ ಸರಿಯಾಗಲಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *