ದಿನಾ ಟಿವಿಯಲ್ಲಿ ಬಿಜೆಪಿ ಸಿನಿಮಾ ಬರುತ್ತಿದೆ: ಡಿ.ಕೆ ಶಿವಕುಮಾರ್

Public TV
2 Min Read

– ಕಾಂಗ್ರೆಸ್ ಕಟ್ಟಡವನ್ನು ದೇವಸ್ಥಾನವೆಂದ ಡಿಕೆಶಿ

ತುಮಕೂರು: ಪ್ರತಿದಿನ ನೀವು ಸಿನಿಮಾ ನೋಡುತ್ತಿದ್ದೀರಿ. ದಿನಾ ಟಿವಿಯಲ್ಲಿ ಬಿಜೆಪಿ ಸಿನಿಮಾ ಬರುತ್ತಿದೆ. ಹಾಗಾಗಿ ಮುಂದಿನ 150 ಸೀಟು ಬಿಜೆಪಿದಲ್ಲ, ಕಾಂಗ್ರೆಸ್ ಪಕ್ಷದ್ದಾಗಿರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮಧುಗಿರಿಯಲ್ಲಿ ನಡೆಯುತ್ತಿರುವ ನೂತನ ಗ್ರಾ.ಪಂ ಸದಸ್ಯರುಗಳ ಅಭಿನಂದನಾ ಸಮಾರಂಭದಲ್ಲಿ ಭಾಷಣ ಮಾಡಿದ ಡಿಕೆಶಿ, ಕೆಲವರು ಕುರ್ಚಿಗಾಗಿ ಗೌರವ ತರುತ್ತಾರೆ. ಇನ್ನೂ ಕೆಲವರು ಕುರ್ಚಿಗಾಗಿ ಗೌರವ ಕಳೀತಾರೆ ಎಂದು ಮಾರ್ಮಿಕವಾಗಿ ನುಡಿದರು.

ಯಡಿಯೂರಪ್ಪನವರು ಮುಂದಿನ ಬಾರಿ 150 ಸೀಟು ಪಡಿತೀವಿ ಅಂತಾರೆ. ದಿನಾ ನೀವು ಸಿನಿಮಾ ನೋಡುತ್ತಿದ್ದೀರಿ. ದಿನಾ ಟಿವಿಯಲ್ಲಿ ಬಿಜೆಪಿ ಸಿನಿಮಾ ಬರುತ್ತಿದೆ. ಹಾಗಾಗಿ ಮುಂದಿನ 150 ಸೀಟು ಬಿಜೆಪಿದಲ್ಲ, ಕಾಂಗ್ರೆಸ್ ಪಕ್ಷದ್ದು ಎಂದು ಹೇಳಿದರು.

ಕನಕಪುರ ಕ್ಷೇತ್ರದಲ್ಲಿ ಆಗಿರುವ ನೂರಾರು ಚೆಕ್ ಡ್ಯಾಂ, ಇತರೇ ಅಭಿವೃದ್ಧಿ ಕಾಮಗಾರಿ ನರೇಗಾದಲ್ಲಿ ಇಡೀ ರಾಷ್ಟ್ರಕ್ಕೆ ಕನಕಪುರ ತಾಲೂಕು ಮಾದರಿ ಎಂದು ಕೇಂದ್ರ ಪ್ರಶಸ್ತಿ ಕೊಟ್ಟಿದೆ. ನನ್ನ ಕ್ಷೇತ್ರದ ಅಭಿವೃದ್ಧಿಯನ್ನು ನೀವೆಲ್ಲಾ ನೋಡಬೇಕು. ಒಂದು ಟೂರ್ ಹಾಕಿ ನೋಡಿ. ಅದಕ್ಕಾಗಿ ಜನ ನನ್ನನ್ನು ಜನರು 80 ಸಾವಿರ ಲೀಡಲ್ಲಿ ಗೆಲ್ಲಿಸಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ದೇವಸ್ಥಾನ ಮಧುಗಿರಿಯಲ್ಲಿ ಕಟ್ಟಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ಕಟ್ಟಡವನ್ನು ದೇವಸ್ಥಾನ ಎಂದು ಡಿಕೆಶಿ ಬಣ್ಣಿಸಿದರು. ಸಾಮಾನ್ಯ ಕಾರ್ಯಕರ್ತರು ಜೇಬಿನಿಂದ ಹಣ ಕೊಡಬೇಕು. ಕಾಂಗ್ರೆಸ್ ಕಚೇರಿ ಕಟ್ಟಲು ಹಣ ಕೊಡಬೇಕು ಇದೇ ವೇಳೆ ಮನವಿ ಮಾಡಿದರು.

ಇದೇ ವೇಳೆ ರೈತರ ಬಗ್ಗೆ ಮಾತನಾಡಿದ ಡಿಕೆಶಿ, ರೈತರು ಸಾಯುತ್ತಿದ್ದಾರೆ. ಸ್ವಾತಂತ್ರ್ಯ ಬಂದ ಮೇಲೆ ಯಾವತ್ತೂ ಇಂತಹ ಪ್ರತಿಭಟನೆ ನಡೆದಿಲ್ಲ. ಪ್ರಧಾನಿಗೆ ರೈತರ ಸಂಕಷ್ಟ ಕೇಳಲು ಶಕ್ತಿ, ಸೌಜನ್ಯ ಏನೂ ಇಲ್ಲ. ಇಂಥವರನ್ನ ಉಳಿಸಿಕೊಳ್ಳಬೇಕಾ..? ರೈತರ ರಕ್ಷಣೆಗೆ ನಾವು ಮುಂದಾಗಬೇಕು. ಈಶ್ವರಪ್ಪನವರು ನರೇಗಾ ಕಾರ್ಯಕ್ರಮವನ್ನು ಕೊಂಡಾಡಿದ್ದಾರೆ. ನರೇಗಾ ಮೂಲಕ ಬದುಕು ಹಸನಗೊಳಿಸಿ ಅಂದಿದ್ದಾರೆ. ಬಿಜೆಪಿಯವರಿಂದ ನರೇಗಾ ಕಾರ್ಯ ಕ್ರಮ ಬದಲಾವಣೆ ಮಾಡಲು ಆಗಿಲ್ಲ. ಆಹಾರ ಭದ್ರತಾ ಕಾರ್ಯಕ್ರಮ ಬದಲಾವಣೆ ಮಾಡಲು ಆಗಿಲ್ಲ. ದಿನದಿಂದ ದಿನಕ್ಕೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ ಎಂದು ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *