ದಾಸನಿಂದ ಹಲ್ಲೆ ಆರೋಪ – ಸಂದೇಶ್ ಪ್ರಿನ್ಸ್ ಹೋಟೆಲ್ ಸಿಸಿಟಿವಿ ದೃಶ್ಯ ಪರಿಶೀಲನೆ

Public TV
1 Min Read

ಮೈಸೂರು: ಹೋಟೆಲ್ ಸಿಬ್ಬಂದಿ ಮೇಲೆ ಸ್ಯಾಂಡಲ್‍ವುಡ್ ನಟ ದರ್ಶನ್ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪದ ವಿಚಾರವಾಗಿ ಮೈಸೂರು ಪೊಲೀಸರು ಸಂದೇಶ್ ಪ್ರಿನ್ಸ್ ಹೋಟೆಲ್‍ಗೆ ತೆರಳಿದ್ದಾರೆ.

ಸಂದೇಶ್ ಪ್ರಿನ್ಸ್ ಹೋಟೆಲ್‍ಗೆ ಎಸಿಪಿ ಶಶಿಧರ್ ನೇತೃತ್ವದಲ್ಲಿ ಪೊಲೀಸರು ಬಂದಿದ್ದಾರೆ. ಈಗಾಗಲೇ ಹೋಟೆಲ್‍ನ ಸಿಸಿಟಿವಿ ದೃಶ್ಯಗಳ ಪರಿಶೀಲನೆ ಮಾಡುತ್ತಿದ್ದಾರೆ. ಐದು ತಿಂಗಳ ಸಿಸಿಟಿವಿ ದೃಶ್ಯ ನೀಡಲು ಸಿಬ್ಬಂದಿಗೆ ಸೂಚನೆಯನ್ನು ನೀಡಲಾಗಿದೆ. ಇದನ್ನೂ ಓದಿ:  ದರ್ಶನ್ ಬಹಳ ಮುಗ್ಧ, ಯಾವುದೇ ಕೆಟ್ಟ ಕೆಲಸ ಮಾಡಲ್ಲ: ಬಿ.ಸಿ ಪಾಟೀಲ್

ಹೋಟೆಲ್‍ನಲ್ಲಿ ಎಷ್ಟು ಸಿಸಿಟಿವಿ ಇದೆ ಎನ್ನುವ ಮಾಹಿತಿ ಸಂಗ್ರಹಿಸಿದ ಪೊಲೀಸರು, ಆ ಎಲ್ಲ ಸಿಸಿಟಿವಿಗಳ ದೃಶ್ಯ ಕೊಡುವಂತೆ ಹೋಟೆಲ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಸಂದೇಶ್ ಪ್ರಿನ್ಸ್ ಹೋಟೆಲ್‍ನಲ್ಲಿ ಪೊಲೀಸರ ತಪಾಸಣೆಯನ್ನು ಮಾಡುತ್ತಾ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ:
ಹೋಟೆಲಿನಲ್ಲಿ ವೇಟರ್ ಮೇಲೆ ಹಲ್ಲೆ ನಡೆದಿದೆ ಎಂದು ನಿನ್ನೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ನಟ ದರ್ಶನ್ ಮೇಲೆ ಆರೋಪ ಮಾಡಿದ್ದರು. ದರ್ಶನ್ ವೇಟರ್ ಮೇಲೆ ಹಲ್ಲೆ ಮಾಡಿರುವ ಆರೋಪ ಸಂಬಂಧ ನನಗೆ ವೈಯಕ್ತಿಕವಾಗಿ ಯಾರ ಮೇಲೂ ದ್ವೇಷ ಇಲ್ಲ. ಆದರೆ ತಪ್ಪನ್ನು ತಪ್ಪು ಅಂತ ಒಪ್ಪಿಕೊಳ್ಳಬೇಕು. ಎಷ್ಟು ಅಂತ ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತೀರಾ..? ಓರ್ವ ಸೆಲೆಬ್ರಿಟಿಯಾಗಿದ್ದುಕೊಂಡು ನಿರ್ದೇಶಕ, ನಿರ್ಮಾಪಕ, ವಾಚ್ ಮ್ಯಾನ್ ಗೆ ಅಥವಾ ಸಾಮಾನ್ಯ ನಾಗರಿಕನಿಗೆ ಹೊಡೆಯುವುದು ಸರಿಯಲ್ಲ ಎಂದಿದ್ದರು. ಇದನ್ನೂ ಓದಿ:  ಇಂದ್ರಜಿತ್ ಜೊತೆಗಿನ ಫೋಟೋ ವೈರಲ್ – ನನ್ನ ಹೆಸರು ತಳುಕು ಹಾಕೋ ಕೆಲಸ ಮಾಡ್ಬೇಡಿ ಅಂದ್ರು ಹೆಚ್‍ಡಿಕೆ

ಅರುಣಾ ಕುಮಾರಿ ವಿಚಾರ, ಸಂದೇಶ್ ನಾಗರಾಜ್ ಹೋಟೆಲ್‍ನಲ್ಲಿ ಜಗಳದ ಬಗ್ಗೆ ಮಾತಾಡಿದ್ದೆ. ಆ ಬಳಿಕ ದರ್ಶನ್ ಅವರು, ಹೌದು ಹೊಡೆದೆ. ಕೋಪ ಬಂತು ಹೊಡೆದಿದ್ದು ನಿಜ ಅಂದ್ರು. ಈ ಘಟನೆಗೆ ನಾನು ಬದ್ಧ, ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳು ಕೊಡುತ್ತೇನೆ. ಆ ಹುಡುಗ ಕೆಲಸ ಕಳೆದುಕೊಂಡಿದ್ದಾನೆ. ಬರೇ ಇದೊಂದೆ ಅಲ್ಲ, ಇಂತಹ ಪ್ರಕರಣಗಳು ತುಂಬಾ ಇದ್ದಾವೆ ಎಂದು ಹೇಳಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *