ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ – ಪಿಎಸ್‍ಐ ವಿರುದ್ದ ಎಫ್‍ಐಆರ್ ದಾಖಲು

Public TV
2 Min Read

ಚಿಕ್ಕಮಗಳೂರು: ವಿಚಾರಣೆಗೆ ಕರೆತಂದ ದಲಿತ ಯುವಕನಿಗೆ ಠಾಣೆಯಲ್ಲೇ ಬೇರೊಬ್ಬ ಆರೋಪಿಯ ಮೂತ್ರ ಕುಡಿಸಿದ್ದ ಆರೋಪದಡಿ ತಾಲೂಕಿನಲ್ಲಿ ಪಿಎಸ್‍ಐ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್‍ಐ ಅರ್ಜುನ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಗೋಣಿಬೀಡು ಠಾಣಾ ವ್ಯಾಪ್ತಿಯ ಕಿರಗುಂದ ಗ್ರಾಮದ ಯುವಕ ಪುನೀತ್ ವಿವಾಹಿತ ಹಿಳೆ ಜೊತೆ ಮಾತನಾಡುತ್ತಿದ್ದು, ಇದರಿಂದ ಸಂಸಾರದಲ್ಲಿ ಗಲಾಟೆ ನಡೆಯುತ್ತಿದೆ ಎಂದು ವಿವಾಹಿತ ಮಹಿಳೆಯ ಪತಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪುನೀತ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ ಪಿಎಸ್‍ಐ ಅರ್ಜುನ್ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಪುನೀತ್ ಆರೋಪಿಸಿದ್ದಾರೆ.

ಆರೋಪ ಏನು?
ಠಾಣೆಯಲ್ಲಿ ಪಿಎಸ್‍ಐ ನನ್ನ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ನನಗೆ ತುಂಬಾ ದಣಿವಾಗಿತ್ತು. ಆಗ ನಾನು ನೀರು ಕೇಳಿದ್ದಕ್ಕೆ ಅರ್ಜುನ್ ಅವರು ಕಳ್ಳತನ ಆರೋಪದಡಿ ಠಾಣೆಗೆ ಕರೆತಂದಿದ್ದ ಬೇರೊಬ್ಬ ಆರೋಪಿ ಚೇತನ್‍ನಿಂದ ನನ್ನ ಬಾಯಿಗೆ ಮೂತ್ರ ಮಾಡಿಸಿ ಯಾರಿಗಾದರೂ ಹೇಳಿದರೆ ಚೆನ್ನಾಗಿ ಇರುವುದಿಲ್ಲ ಎಂದು ಮನಸ್ಸೋ ಇಚ್ಚೆ ಹಲ್ಲೆ ಮಾಡಿದ್ದಾರೆ.

ಠಾಣೆಯಲ್ಲಿ ಪೊಲೀಸರು ನನ್ನನ್ನ ತುಂಬಾ ವಿಚಿತ್ರವಾಗಿ ನಡೆಸಿಕೊಂಡಿದ್ದಾರೆ. ಲಾಕ್‍ಡೌನ್ ಇದ್ದ ಕಾರಣ ನಮ್ಮ ಮನೆಯವರು ಯಾರೂ ಬರಲು ಆಗಲಿಲ್ಲ. ಹೀಗೆ ಮಾಡಿದರೆ ನಿನ್ನನ್ನ ಬಿಡುತ್ತೇನೆ ಎಂದರು. ನೆಲದ ಮೇಲೆ ಬಿದ್ದಿದ್ದ ಮೂತ್ರವನ್ನು ನಾಲಿಗೆಯಲ್ಲಿ ನೆಕ್ಕಿಸಿದರು. ಅವರು ಹೇಳಿದ ಎಲ್ಲಾ ಕೆಲಸ ಮಾಡಿದರೂ ನನ್ನನ್ನ ಮನೆಗೆ ಬಿಡಲಿಲ್ಲ. ರಾತ್ರಿ 10 ಗಂಟೆಯವರೆಗೆ ಠಾಣೆಯಲ್ಲಿ ಇರಿಸಿಕೊಂಡಿದ್ದರು. ಮನೆಯವರು ಕೂಲಿಗೆ ಹೋಗಿದ್ದರು. ರಾತ್ರಿ 10 ಗಂಟೆಗೆ ನನ್ನ ಮಾವ ಬಂದು ಕರೆದುಕೊಂಡು ಹೋದರು. ನನ್ನ ಮೇಲೆ ಈವರೆಗೆ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಆ ಮಹಿಳೆ ಕೂಡ ನನ್ನ ವಿರುದ್ಧ ದೂರು ನೀಡಿಲ್ಲ. ಸಬ್ ಇನ್ಸ್‍ಪೆಕ್ಟರ್ ಯಾರೋ ಒಂದು ಗುಂಪಿನ ಮಾತು ಕೇಳಿ ಈ ರೀತಿ ವರ್ತಿಸಿದ್ದಾರೆ. ಕೈಕಾಲು ಕಟ್ಟಿ ಅಂಗೈ ಹಾಗೂ ಮುಂಗಾಲಿಗೆ ಹೊಡೆದಿದ್ದಾರೆ ಎಂದು ಪುನೀತ್ ಆರೋಪ ಮಾಡಿದ್ದಾರೆ.

ಪೊಲೀಸರ ವರ್ತನೆಯಿಂದ ಮನನೊಂದು ಪುನೀತ್ ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ಪಿಎಸ್‍ಐ ವಿರುದ್ಧ ಕ್ರಮಕ್ಕೆ ಚಿಕ್ಕಮಗಳೂರು ಎಸ್ಪಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಅರ್ಜುನ್ ಅವರನ್ನು ವರ್ಗಾವಣೆ ಮಾಡಿರುವ ಎಸ್‍ಪಿ ಅಕ್ಷಯ್ ಡಿವೈಎಸ್ಪಿ ಪ್ರಭು ನೇತೃತ್ವದಲ್ಲಿ ಪ್ರಕರಣದ ವಿಚಾರಣೆ ನಡೆಸಲು ಸೂಚಿಸಿದ್ದಾರೆ. ಗೋಣಿಬೀಡು ಠಾಣೆಯಲ್ಲಿ ಪಿಸ್‍ಐ ಅರ್ಜುನ್ ವಿರುದ್ಧ ಐಪಿಸಿ ಸೆಕ್ಷನ್ 342, 323, 504, 506, 330, 348 ರ ಅಡಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *