ದಕ್ಷಿಣ ಕನ್ನಡ ಸೇರಿದಂತೆ ಹೈ ರಿಸ್ಕ್ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ

Public TV
2 Min Read

– ಕೇರಳ ಗಡಿ ಜಿಲ್ಲೆಗಳಲ್ಲಿ ಕೊರೊನಾ
– ಮದುವೆ, ಜಾತ್ರೆಗಳಿಗೆ ನಿರ್ಬಂಧ ಹೇರಿ
– ಸರ್ಕಾರಕ್ಕೆ ತಜ್ಞರ ಶಿಫಾರಸು

ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತು ಕೇರಳ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿ ಮತ್ತೆ ಸೋಂಕು, ಪಾಸಿಟಿವಿಟಿ ದರ ಹೆಚ್ಚುತ್ತಿರುವುದು ಈಗ ಆತಂಕಕ್ಕೆ ಕಾರಣವಾಗಿದೆ.

ಸೋಂಕು ನಿಯಂತ್ರಣಕ್ಕಾಗಿ ಪಾಸಿಟಿವಿಟಿ ಹೆಚ್ಚಿರುವ ಜಿಲ್ಲೆಗಳಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದೆ ಕಷ್ಟ ಆಗಲಿದೆ ಎಂದು ಕೊರೊನಾ ತಜ್ಞರು ಸರ್ಕಾರವನ್ನು ಎಚ್ಚರಿಸಿದ್ದಾರೆ. ಜೊತೆಗೆ ಒಂದಿಷ್ಟು ಟಫ್ ರೂಲ್ಸ್ ಜಾರಿಗೆ ಶಿಫಾರಸು ಮಾಡಿದ್ದಾರೆ.

ಕೇರಳದಿಂದಲೇ ಮೂರನೇ ಅಲೆಯ ಎಫೆಕ್ಟ್ ಕರ್ನಾಟಕದಲ್ಲಿ ಕಾಣಿಸಿಕೊಂಡಿದೆ. ಮುಂದಿನ ಮೂರು ವಾರದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಟಾಸ್ಕ್ ಫೋರ್ಸ್ ಸಮಿತಿ ಸದಸ್ಯ ಡಾ.ಸಿಎನ್ ಮಂಜುನಾಥ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಸೇರಿ ಹೈರಿಸ್ಕ್ ಇರುವ ಜಿಲ್ಲೆಗಳಲ್ಲಿ ಕೂಡಲೇ ವೀಕೆಂಡ್ ಕರ್ಫ್ಯೂ ಜಾರಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಬಿಬಿಎಂಪಿ ಕೂಡ, ವೀಕೆಂಡ್ ಕರ್ಫ್ಯೂಗೆ ಶಿಫಾರಸು ಮಾಡಲು ಮುಂದಾಗಿದೆ. ಆದರೆ ಸರ್ಕಾರ ಮಾತ್ರ ಇದಕ್ಕೆ ತಯಾರಿಲ್ಲ. ರಾಜ್ಯದ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿ ಇರಿಸಿಕೊಂಡು ಕಾದು ನೋಡುವ ತಂತ್ರಕ್ಕೆ ಶರಣಾಗಿದೆ. ಇದನ್ನೂ ಓದಿ : ರಾಜ್ಯದಲ್ಲಿ ಇಂದು ಕಡಿಮೆ ಕೇಸ್ ದಾಖಲು – ಪಾಸಿಟಿವಿಟಿ ರೇಟ್ ಸಂಪೂರ್ಣ ಇಳಿಕೆ

ಚಾಮರಾಜನಗರದಲ್ಲಿ ಟಫ್ ರೂಲ್ಸ್ ಜಾರಿಯಾಗಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಎಲ್ಲಾ ಸೇವೆ ರದ್ದು ಮಾಡಲಾಗಿದೆ. ವೀಕೆಂಡ್‍ನಲ್ಲಿ ಮಾದಪ್ಪನ ದರ್ಶನವೂ ಸಿಗಲ್ಲ. ಭರಚುಕ್ಕಿ ಹಾಗೂ ಹೊಗೆನಕಲ್ ಫಾಲ್ಸ್‍ಗೆ ವಾರಾಂತ್ಯದಲ್ಲಿ ಪ್ರವಾಸಿಗರು ಭೇಟಿಗೆ ನಿಷೇಧಿಸಲಾಗಿದೆ. ಬಂಡೀಪುರ, ಕೆ.ಗುಡಿಯಲ್ಲಿ ವೀಕೆಂಡ್ ಸಫಾರಿಗೂ ಬ್ರೇಕ್ ಹಾಕಲಾಗಿದೆ.

ಶಿಫಾರಸು ಏನು?
ಪಾಸಿಟಿವಿಟಿ ರೇಟ್ 2%ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಟಫ್ ರೂಲ್ಸ್ ಪಾಲನೆಯಾಗಬೇಕು.  ಸಂಜೆ 7ರಿಂದ ಬೆಳಗ್ಗೆ 6ರ ವರೆಗೆ ನೈಟ್ ಕರ್ಫ್ಯೂ ಜಾರಿಯಾಗಬೇಕು. ವೀಕೆಂಡ್ ಕರ್ಫ್ಯೂ ಮತ್ತೆ ಜಾರಿ ಮಾಡಬೇಕು.

ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಅರ್ಧದಷ್ಟು ಸಿಬ್ಬಂದಿ ಮಾತ್ರ ಕೆಲಸ ಮಾಡಲು ಅನುಮತಿ ನೀಡಬೇಕು. ಮಾರ್ಕೆಟ್ ಸೇರಿ ಹೆಚ್ಚು ಜನ ಸೇರುವ ಜಾಗಗಳ ಪ್ರವೇಶಕ್ಕೆ ನಿರ್ಬಂಧ ಹೇರಬೇಕು. ಮದುವೆ, ಜಾತ್ರೆ , ಹಬ್ಬ ಹರಿದಿನಗಳ ಮೇಲೆ ಮತ್ತೆ ಕಠಿಣ ನಿರ್ಬಂಧ ಹೇರಬೇಕು.

Share This Article
Leave a Comment

Leave a Reply

Your email address will not be published. Required fields are marked *