ತುಂಬಿ ಹರಿಯುತ್ತಿರುವ ಹಳ್ಳದಲ್ಲಿಯೇ ಶವಸಾಗಿಸಿದ ಗ್ರಾಮಸ್ಥರು

Public TV
1 Min Read

– ಸತ್ತರೆ ಅಂತ್ಯಕ್ರಿಯೇ ಮಾಡೋದೇ ದೊಡ್ಡ ಸವಾಲ್

ಯಾದಗಿರಿ: ಹಳ್ಳ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಶವಸಂಸ್ಕಾರಕ್ಕೂ ಸಹ ವಿಘ್ನ ಎದುರಾಗಿದೆ. ಹಳ್ಳದ ನೀರಿನಲ್ಲೇ ಶವನ್ನು ಹೊತ್ತುಕೊಂಡು ಹೋಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲೆಯ ವಿವಿಧ ಗ್ರಾಮಗಳ ಹತ್ತಿರ ದಲಿತ ಸಮುದಾಯಗಳಿಗೆ ಸ್ಮಶಾನಕ್ಕೂ ಜಾಗ ಇಲ್ಲದ ಕಾರಣ, ಜೀವದ ಹಂಗು ತೊರೆದು ಅಪಾಯದ ನಡುವೆಯೂ ಉಕ್ಕಿ ಹರಿಯುತ್ತಿರುವ ಹಳ್ಳದಲ್ಲಿ ಶವ ಹೊತ್ತು ಸಾಗಿಸಲಾಗಿದೆ. ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಮೀನಾಸಪುರ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಈಗ ಬೆಳಕಿಗೆ ಬಂದಿದೆ.

ಈ ಗ್ರಾಮದಲ್ಲಿ ಯಾರಾದರೂ ಸತ್ತರೆ ಅಂತ್ಯಕ್ರಿಯೆ ಮಾಡುವುದೇ ದೊಡ್ಡ ಸವಾಲಾಗಿದೆ. ದಲಿತ ಸಮುದಾಯಗಳ ಶವಸಂಸ್ಕಾರ ಜಾಗ ಹಳ್ಳದಾಚೆಯಿದ್ದು, ಇಷ್ಟು ದಿನ ಹಳ್ಳದಲ್ಲಿ ನೀರಿಲ್ಲದ ಕಾರಣ ಹಳ್ಳವನ್ನು ಸುಲಭವಾಗಿ ದಾಟಿ ಜನ ಶವಸಂಸ್ಕಾರ ಮಾಡುತ್ತಿದ್ದರು. ಸದ್ಯ ಯಾದಗಿರಿಯಲ್ಲಿ ಮಳೆರಾಯನ ಅಬ್ಬರ ನಿಂತಿದೆ. ಆದರೆ ಕಳೆದ ಒಂದು ವಾರದ ಹಿಂದೆ ಸುರಿದ ಮಳೆ, ಸೃಷ್ಟಿಸಿದ ಅವಾಂತರ ಹಳ್ಳಗಳು ತುಂಬಿವೆ. ಹೀಗಾಗಿ ಈಗ ಶವ ಹೊತ್ತುಕೊಂಡೇ ಹಳ್ಳ ದಾಟುವ ಪರಿಸ್ಥಿತಿ ಎದರುರಾಗಿದೆ.

ಮಳೆಯ ನೀರಿಗೆ ಸಣ್ಣಪುಟ್ಟ ಗ್ರಾಮಗಳ ಪಕ್ಕ-ಪಕ್ಕದ ಹಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಜನಜೀವನದ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಮೀನಾಸಪುರ ಗ್ರಾಮಸ್ಥರ ಸ್ಮಶಾನದ ಗೋಳು ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ.

Share This Article
Leave a Comment

Leave a Reply

Your email address will not be published. Required fields are marked *