ತಾಯಿ ದಿನಸಿ ತರಲು ಹೋದಾಗ ಒಂದೂವರೆ ವರ್ಷದ ಮಗನನ್ನ ಹೊಡೆದು ಕೊಂದ ಮಲತಂದೆ!

Public TV
2 Min Read

– ಮದುವೆಗೆ ಮುಂಚೆಯೇ ಹುಟ್ಟಿದ್ದ ಮಗು

ಭೋಪಾಲ್: ವ್ಯಕ್ತಿಯೊಬ್ಬ ಒಂದೂವರೆ ವರ್ಷದ ಮಗನನ್ನು ಹೊಡೆದು ಕೊಲೆಗೈದ ಘಟನೆ ಮಧ್ಯಪ್ರದೇಶದ ಕೋಲಾರ್ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 25 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ದುರ್ದೈವಿ ಮಗುವನ್ನು ಆರ್ಯನ್ ಪಾರ್ವೆ ಎಂದು ಗುರುತಿಸಲಾಗಿದ್ದು, ಈತನನ್ನು ಮಲ ತಂದೆ ವಿನೋದ್ ಪಾರ್ವೆ ಕೊಲೆ ಮಾಡಿದ್ದಾನೆ. ಆರೋಪಿ ವಿನೋದ್ ಪತ್ನಿ ರೋಶ್ಣಿ ಅಹಿವಾರ್ ಜೊತೆ ಕೋಲಾರದ ಬನ್ಶಿಖೇರಿ ಎಂಬಲ್ಲಿ ವಾಸವಾಗಿದ್ದನು. ಆರ್ಯನ್ ಹುಟ್ಟಿದಾಗ ರೋಶ್ಣಿಗೆ ಇನ್ನೂ ಮದುವೆಯಾಗಿರಲಿಲ್ಲ. ಹೀಗಾಗಿ ಮಗ ಹುಟ್ಟಿದ ಕೂಡಲೇ ರೋಶ್ಣಿ, ವಿನೋದ್ ನನ್ನು ವರಿಸಿದ್ದಳು.

ಗುರುವಾರ ರೋಶ್ಣಿ ಎಂದಿನಿಂತೆ ದಿನಸಿ ತೆರಲೆಂದು ಹೊರಗಡೆ ಹೋಗಿದ್ದಳು. ಈಕೆ ಮನೆಯಿಂದ ಹೊರ ಹೋಗುತ್ತಿದ್ದಂತೆಯೇ ವಿನೋದ್, ಪುಟ್ಟ ಕಂದಮ್ಮ ಆರ್ಯನ್ ತಲೆಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ಹೊಡೆದಿದ್ದಾನೆ. ಅಲ್ಲದೆ ತಲೆಯನ್ನು ನೆಲಕ್ಕೆ ಬಡಿದಿದ್ದಾನೆ. ಇತ್ತ ಹೊರಗಡೆ ಹೋಗಿ ಬಂದ ರೋಶ್ಣಿಗೆ ಮಗ ಆರ್ಯನ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡಿದೆ.

ತನ್ನ ಮಗನ ಸ್ಥಿತಿ ಕಂಡು ಗೋಗರೆಯುತ್ತಿದ್ದ ರೋಶ್ಣಿ ಬಳಿ ಪತಿ ವಿನೋದ್ ಕಟ್ಟು ಕಥೆ ಕಟ್ಟಿದ್ದಾನೆ. ನೀರು ತುಂಬಿದ ಡ್ರಮ್ ಆರ್ಯನ್ ತಲೆ ಮೇಲೆ ಬಿದ್ದಿದೆ. ಹೀಗಾಗಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾನೆ. ಕೂಡಲೇ ರೋಶ್ಣಿ ಮಗನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಆದರೆ ಮಗ ಅದಾಗಲೇ ಮೃತಪಟ್ಟಿರುವುದಾಗಿ ಅಲ್ಲಿ ವೈದ್ಯರು ತಿಳಿಸಿದ್ದಾರೆ.

ಆದರೆ ರೋಶ್ಣಿಗೆ ಮಾತ್ರ ಪತಿ ಮೇಲೆ ಅನುಮಾನ ಬರಲು ಶುರುವಾಗಿದೆ. ಯಾಕಂದ್ರೆ ಮಗ ಆರ್ಯನ್ ನನ್ನು ದ್ವೇಷಿಸುತ್ತಿದ್ದ ವಿನೋದ್, ಆಗಾಗ ಮಗನಿಗೆ ಹೊಡೆಯುತ್ತಿದ್ದನು. ಇದೀಗ ಆತನೇ ಆರ್ಯನ್ ನನ್ನು ಹೊಡೆದು ಕೊಲೆ ಮಾಡಿದ್ದಾನೆ ಎಂದು ತಿಳಿದು ಪೊಲೀಸರನ್ನು ಸಂಪರ್ಕೀಸುವ ಪ್ರಯತ್ನ ಮಾಡಿದಳು. ಕೊನೆಗೆ ರೋಶ್ಣಿ ತನ್ನ ಸಹೋದರ ರವಿ ಅಹಿವಾರ್ ನನ್ನು ಸಮಫರ್ಕಿಸಿ ಪೊಲೀಸರಿಗೆ ದೂರು ನೀಡುವಂತೆ ಕೇಳಿಕೊಂಡಿದ್ದಾಳೆ. ಈ ಹಿನ್ನೆಲೆಯಲ್ಲಿ ಆತ ಶುಕ್ರವಾರ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತನಿಖೆ ವೇಳೆ ವಿನೋದ್, ತಪ್ಪು ಒಪ್ಪಿಕೊಂಡಿದ್ದಾನೆ. ಬಳಿಕ ಕಟ್ಟು ಕಥೆ ಕಟ್ಟಿ ನಂಬಿಸಲು ಯತ್ನಿಸಿದ್ದಾನೆ. ಸದ್ಯ ಆರೋಪಿ ವಿನೋದ್ ನನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *