– ಚಿಕನ್ ಕತ್ತರಿಸುವ ಚಾಕುವಿನಿಂದ ಚುಚ್ಚಿ ಹತ್ಯೆ
ವಿಜಯಪುರ: ಹಾಡಹಗಲೇ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ವಿಜಯಪುರ ತಾಲೂಕಿನ ಖತಿಜಾಪುರದಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಇಸ್ಮಾಯಿಲ್ ಮುಲ್ಲಾ(22) ಎಂದು ಗುರುತಿಸಲಾಗಿದೆ. ಖಾಜಲ್ ಬೇಪಾರಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ತಾಯಿಗೆ ಬೈಯ್ದಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನನ್ನು ಚಿಕನ್ ಕತ್ತರಿಸುವ ಚಾಕುವಿನಿಂದ ಚುಚ್ಚಿ ಹಾಡಹಗಲೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಕೊಲೆಗೀಡಾದ ಇಸ್ಮಾಯಿಲ್ ತಾಯಿಗೆ ಖಾಜಲ್ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದನಂತೆ. ಆಗ ತಾಯಿಗೆ ಬೈಯ್ದಿದ್ದನ್ನು ಇಸ್ಮಾಯಿಲ್ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ವಾಗ್ವಾದ ನಡೆದಿದ್ದು, ಖಾಜಲ್ ಯುವಕನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಇಸ್ಮಾಯಿಲ್ ದೇಹದಲ್ಲಿಯೇ ಚಾಕು ಉಳಿದಿದ್ದು, ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಲೆಗಾರ ಖಾಜಲ್ಗೂ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಗುಳಗಳಿಂದ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವುದಕ್ಕೆ ಸ್ಥಳಿಯರು ಬೇಸರ ವ್ಯಕ್ತಪಡಿಸಿದ್ದಾರೆ.