ತಮ್ಮ ವಿರುದ್ಧದ ಆರೋಪಕ್ಕೆ ರೇಣುಕಾಚಾರ್ಯ ಸ್ಪಷ್ಟನೆ

Public TV
2 Min Read

ಬೆಂಗಳೂರು: ತಮ್ಮ ವಿರುದ್ಧದ ಆರೋಪಕ್ಕೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸ್ಪಷ್ಟನೆ ನೀಡಿದ್ದಾರೆ.

ಅಕ್ರಮ ಮರಳುಗಾರಿಕೆ ಮೇಲೆ ಪೊಲೀಸ್ ಇಲಾಖೆ ದಾಳಿ ಮಾಡಿದ್ದಕ್ಕೆ ‘ರೇಣುಕಾಚಾರ್ಯ ಅವರು ಪೊಲೀಸರಿಗೆ ಅವಾಜ್’ ಎನ್ನುವ ಸುದ್ದಿ ಕೆಲವು ಸುದ್ದಿ ಮಾಧ್ಯಮಗಳಲ್ಲಿ ಸೋಮವಾರ ಪ್ರಸಾರವಾಗಿರುವುದು ನನ್ನ ಗಮನಕ್ಕೆ ಬಂದಿದ್ದು ಇದು ಸತ್ಯಕ್ಕೆ ದೂರವಾದ ವಿಷಯ.

ನಿನ್ನೆ ನನ್ನ ಮತ ಕ್ಷೇತ್ರದ ಬೇಲಿಮಲ್ಲೂರು ಸೇರಿದಂತೆ ಕೆಲವು ಗ್ರಾಮಗಳ ಬಡತನ ರೇಖೆಗಿಂತ ಕೆಳಗಿರುವ ರೈತರುಗಳು ಮನೆ ಕಟ್ಟಿಕೊಳ್ಳಲು #ಎತ್ತಿನ ಗಾಡಿ ಮತ್ತು #ಬೈಕ್ ಗಳಲ್ಲಿ ಲೀಗಲ್ ಕ್ವಾರೆಗಳಿಲ್ಲದ ನದಿ ದಡದಿಂದ ಮರಳನ್ನು ಹೊಡೆದುಕೊಳ್ಳುತ್ತಿದ್ದು ಇಷ್ಟು ದಿನ ಸುಮ್ಮನಿದ್ದ ಪೊಲೀಸ್ ಇಲಾಖೆಯವರು ಈಗ ತೊಂದರೆ ನೀಡುತ್ತಿದ್ದರೆ ಎಂದು ನನ್ನ ಬಳಿ ನೋವನ್ನು ಹೇಳಿಕೊಂಡರು.

ಎಸ್‍ಪಿ ಸೂಚನೆ ಮೇರೆಗೆ ಮರಳನ್ನು ಸೀಜ್ ಮಾಡಲು ಹೋಗಿದ್ದ ಹೊನ್ನಾಳಿ ಸಿಪಿಐ ದೇವರಾಜ್ ಅವರಿಗೆ ತಕ್ಷಣ ದೂರವಾಣಿ ಕರೆ ಮಾಡಿ ಯಾವುದೇ ಕಾರಣಕ್ಕೂ ಬಡವರು ಮನೆ ಕಟ್ಟಿಕೊಳ್ಳಲು ಎತ್ತಿನ ಗಾಡಿ ಹಾಗು ಬೈಕ್ ಗಳಲ್ಲಿ ಹೊಡೆದು ಕೊಂಡಿರುವ ಮರಳನ್ನು ಸೀಜ್ ಮಾಡದಿರಲು ಸೂಚಿಸಿದೆನು. ಹಿಂದಿನ ಸರ್ಕಾರದ ಅವಧಿಯಲ್ಲಿ ಒಂದು ಟ್ರ್ಯಾಕ್ಟರ್ ಮರಳಿಗೆ ರೂ.10,000 ದರ ಇತ್ತು, ಈಗ ನಮ್ಮ ಸರ್ಕಾರ ಬಂದ ಮೇಲೆ ಸಾರ್ವಜನಿಕರಿಗೆ ಮೂರರಿಂದ ನಾಲ್ಕು ಸಾವಿರ ರೂಪಾಯಿಗಳಿಗೆ ಮರಳು ಸಿಗುತ್ತಿದೆ. ಇದನ್ನೂ ಓದಿ: ಮರಳು ದಂಧೆಗೆ ಅಂಕುಶ ಹಾಕಲು ಹೋದ ಎಸ್‍ಪಿಗೆ ರೇಣುಕಾಚಾರ್ಯ ಅವಾಜ್

ಈ ಹಿಂದೆ ನನ್ನ ಮತ ಕ್ಷೇತ್ರದ ಬಡವರಿಗೆ ಕಡಿಮೆ ದರದಲ್ಲಿ ಮರಳನ್ನು ಕೊಡಿಸುವ ಸಲುವಾಗಿ ನಾನು ಅನೇಕ ಹೋರಾಟಗಳನ್ನು ಮಾಡಿದ್ದು ಈಗ ನಮ್ಮ ಸರ್ಕಾರದ ಅವಧಿಯಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಮರಳನ್ನು ಕೊಡಿಸುವುದಕ್ಕೆ ನಾನು ಈಗಲೂ ಬದ್ದವಾಗಿದ್ದೇನೆ. ದೇವಸ್ಥಾನ ಮಂದಿರ ಮಸೀದಿಗಳನ್ನು ಕಟ್ಟಿಕೊಳ್ಳಲು ನದಿ ದಡದಲ್ಲಿರುವ ಗ್ರಾಮಗಳಿಗೆ ಉಚಿತವಾಗಿ ಹಾಗು ನದಿ ದಡದಲ್ಲಿಲ್ಲದ ಗ್ರಾಮಗಳಿಗೆ ಅತಿ ಕಡಿಮೆ ದರದಲ್ಲಿ ಮರಳನ್ನು ಕೊಡಿಸುತ್ತಿದ್ದೇನೆ.

ಪೊಲೀಸ್ ಇಲಾಖೆ ಅಕ್ರಮ ಮರಳುಗಾರಿಕೆ ಮೇಲೆ ದಾಳಿ ಮಾಡಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ನನ್ನ ಅಭ್ಯಂತರವಿಲ್ಲ ಹಾಗು ಅಕ್ರಮ ಮರಳುಗರಿಕೆಯನ್ನು ನಾನು ಪ್ರೋತ್ಸಾಹಿಸುವುದೂ ಇಲ್ಲ. ಆದ್ರೆ ಬಡ ಜನತೆಗೆ ತೊಂದರೆ ನೀಡಿದರೆ ನಾನು ಯಾವುದೇ ಕಾರಣಕ್ಕೂ ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಶಾಸಕರು ಪ್ರಕಟಣೆ ಹೊರಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *