ತಡವಾದ ವರದಿ ತಂದ ಆತಂಕ- ಕ್ವಾರಂಟೈನ್‍ನಿಂದ ಮನೆಗೆ ಬಂದವನಿಗೆ ಕೊರೊನಾ

Public TV
1 Min Read

ರಾಯಚೂರು: ಮುಂಬೈನಿಂದ ಬಂದಿದ್ದ ರಾಯಚೂರಿನ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ಇಂದು ಬಂದಿರುವ ವರದಿಯಲ್ಲಿ ದೃಢವಾಗಿದೆ. ಈ ಮೂಲಕ ರಾಯಚೂರಿನ ಕೊರೊನಾ ಸೋಂಕಿತರ ಸಂಖ್ಯೆ 72ಕ್ಕೇರಿದೆ.

ಕ್ವಾರಂಟೈನ್ ಅವಧಿ ಮುಗಿದ ಬಳಿಕ ಬಂದಿರುವ ವರದಿಯಲ್ಲಿ ಪಾಸಿಟಿವ್ ಬಂದಿದ್ದು, ಹೋಂ ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿಯನ್ನು ಪುನಃ ಸರ್ಕಾರಿ ಕ್ವಾರಂಟೈನ್‍ಗೆ ದಾಖಲಿಸಲಾಗಿದೆ. ಪ್ರಯೋಗಾಲಯದ ವರದಿ ತುಂಬಾ ತಡವಾಗಿ ಬಂದಿದ್ದು, ಕ್ವಾರಂಟೈನ್ ಅವಧಿ ಮುಗಿಸಿ ಹೊರ ಬಂದ ವ್ಯಕ್ತಿ ರಾಯಚೂರು ನಗರದಲ್ಲಿ ಓಡಾಡಿದ್ದಾನೆ. 39 ವರ್ಷದ ವ್ಯಕ್ತಿ ರೋಗಿ ಸಂಖ್ಯೆ-2423ಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ.

ಮೇ 11ರಂದು ತಾಯಿಯೊಂದಿಗೆ ಮುಂಬೈನಿಂದ ಬಂದಿದ್ದ ವ್ಯಕ್ತಿ. ಸರ್ಕಾರಿ ಕ್ವಾರಂಟೈನ್‍ಗೆ ದಾಖಲಾಗಿದ್ದ. ಮೇ 14ರಂದು ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿದೆ. ಈಗ ತೀವ್ರ ತರದ ಉಸಿರಾಟದ ತೊಂದರೆಯಿಂದ ವ್ಯಕ್ತಿ ಬಳಲುತ್ತಿದ್ದಾನೆ. ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಮಾಡಿರುವ ಜಿಲ್ಲಾಡಳಿತ. ತಾಯಿ, ಪತ್ನಿ, ಮಗುವಿನ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಿದೆ.

ತಾಯಿಗೆ ಮುಂಬೈನಲ್ಲೇ ಈ ಹಿಂದೆ ಪರೀಕ್ಷೆ ಮಾಡಿದ್ದು ನೆಗೆಟಿವ್ ಬಂದಿದ್ದರಿಂದ ಮನೆಯಲ್ಲೇ ಕ್ವಾರಂಟೈನ್‍ನಲ್ಲಿ ಇದ್ದರು. ಈಗ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಮನೆಯವರ ಮೇಲೂ ನಿಗಾ ಇಡಲಾಗಿದೆ. ವ್ಯಕ್ತಿ ನಗರದ ವಿವಿಧೆಡೆ ಓಡಾಡಿರುವ ಹಿನ್ನೆಲೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ 72 ಕೇಸ್‍ಗಳಲ್ಲಿ ತಲೆನೋವಾದ ಮೂರನೇ ಕೇಸ್ ಇದಾಗಿದೆ. ಮಲಿಯಾಬಾದ್ ಬಾಲಕಿ, ಮಸ್ಕಿ ಬ್ಯಾಂಕ್ ಉದ್ಯೋಗಿ ಬಳಿಕ ಟ್ರಾವೆಲ್ ಹಿಸ್ಟರಿ ಹಾಗೂ ಸೋಂಕು ತಗುಲಿರುವ ಕಾರಣ ಸರಿಯಾಗಿ ಸಿಗದೆ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *