ಡ್ರಗ್‍ನಲ್ಲಿ ಎಲ್ಲರೂ ಪವಿತ್ರರು, ಪತಿವ್ರತೆಯರು ಎಂದು ಹೇಳಕ್ಕಾಗಲ್ಲ: ಬಿ.ಸಿ ಪಾಟೀಲ್

Public TV
2 Min Read

– ನಾನು ನಟನೆಯಲ್ಲಿದ್ದ ಕಾಲದಲ್ಲಿ ಇದೆಲ್ಲ ಇರಲಿಲ್ಲ

ಕೊಪ್ಪಳ: ಡ್ರಗ್‍ಗೆ ಭೂ ಮಾಫಿಯಾ, ಟೆರರಿಸ್ಟ್, ಐಎಸ್‍ಐ ಕೈವಾಡ ಇದೆ ಎನ್ನುವುದು ತನಿಖೆ ವೇಳೆ ಗೊತ್ತಾಗಲಿದೆ. ಡ್ರಗ್ಸ್ ನಲ್ಲಿ ಎಲ್ಲರೂ ಪವಿತ್ರರು, ಪತಿವ್ರತೆಯರು ಎಂದು ಹೇಳಕ್ಕಾಗಲ್ಲ. ಇದೆಲ್ಲ ತನಿಖೆ ವೇಳೆ ಗೊತ್ತಾಗಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಹೇಳಿದರು.

ಕೊಪ್ಪಳದ ಯಲಬುರ್ಗಾದಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ಯಾರ ಕೈವಾಡ ಇದೆ ಎನ್ನುವುದು ತನಿಖೆಯಿಂದ ಬಯಲಿಗೆ ಬರಲಿದೆ. ಆದರೆ ಡ್ರಗ್ಸ್ ಮಾಫಿಯಾ ಎಂಬುದು ಕೆಟ್ಟ ಪರಿಣಾಮ ಬೀರುತ್ತದೆ. ಇದರ ನಿರ್ಮೂಲನೆಗೆ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ನಾನೂ ಸಿನಿಮಾ ನಟನಾಗಿ ಕೆಲಸ ಮಾಡಿದ್ದೇನೆ. ನಮ್ಮ ಅವಧಿಯಲ್ಲಿ ಇಂತಹ ಯಾವುದೇ ಡ್ರಗ್ಸ್ ಇರಲಿಲ್ಲ. ಈಗ ಅದು ಬೆಳಕಿಗೆ ಬರುತ್ತಿದೆ ಎಂದರು.

ಇತ್ತೀಚೆಗೆ ಯುವ ಜನಾಂಗವು ಇದಕ್ಕೆ ಬಲಿಯಾಗುತ್ತಿದೆ. ಚಿತ್ರರಂಗದಲ್ಲಿ ಇದ್ದವರು ಗಾಜಿನ ಮನೆಯಲ್ಲಿ ಇದ್ದಂತೆ ನಮ್ಮನ್ನ ಲಕ್ಷಾಂತರ ಜನ ನೋಡುತ್ತಿರುತ್ತಾರೆ. ಫಾಲೋವರ್ಸ್ ಇರುತ್ತಾರೆ. ನಮ್ಮಂತೆ ಅವರು ಅನುಕರಣೆ ಮಾಡುತ್ತಾರೆ. ಅದು ಒಳ್ಳೆಯದನ್ನು ಅನುಕರಣೆ ಮಾಡಿದರೆ ತೊಂದರೆ ಇಲ್ಲ. ಆದರೆ ಇಂತದ್ದನ್ನು ಅನುಕರಣೆ ಮಾಡಿದರೆ ದೊಡ್ಡ ದುರಂತ ಆಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಿನಿಮಾದಲ್ಲಿ ಇರುವವರು ಇನ್ನೊಬ್ಬರಿಗೆ ರೋಲ್ ಮಾಡಲ್ ಆಗಿ ಇರಬೇಕು. ಡ್ರಗ್ಸ್ ವಿಚಾರದಲ್ಲಿ ಜಮೀರ್ ಅಹ್ಮದ್ ಸೇರಿ ಯಾರದ್ದೇ ಹೆಸರು ಕೇಳಿ ಬಂದರೂ ಯಾರನ್ನೂ ಬಿಡಲ್ಲ. ಎಲ್ಲರೂ ಪವಿತ್ರರು, ಪತಿವ್ರತೆಯರು ಎಂದು ಹೇಳಕ್ಕಾಗಲ್ಲ. ಡ್ರಗ್ಸ್ ಮಾಡೋರು ರಾಜಕೀಯದವರು, ಸಿನಿಮಾದವರು ಅಂತಾ ಅಲ್ಲ ಎಲ್ಲದರಲ್ಲೂ ಇರುತ್ತಾರೆ. ಯಾರ ಮಾಡಿದರೂ ತಪ್ಪು ತಪ್ಪೇ ಎಂದು ಹೇಳಿದ್ದಾರೆ.

ಗಾಂಜಾ ಕಾನೂನು ಬದ್ಧ ಮಾಡೋದು ತಪ್ಪು. ಅದನ್ನು ಮಾಡಬಾರದು. ಇಂದು ತಂಬಾಕು ಮಾರಾಟ ಮಾಡುವುದು ತಪ್ಪೇ? ಒಂದು ಸಿಗರೇಟಿನಲ್ಲಿ ತಂಬಾಕು ಇದ್ದರೂ ಜನ ಅದನ್ನು ಸೇವನೆ ಮಾಡುತ್ತಾರೆ. ಆದರೆ ಡ್ರಗ್ಸ್ ಎಂಬುದು ಅತಿರೇಕಕ್ಕೆ ಹೋಗುವಂತದ್ದು, ಮನುಷ್ಯನ ಜೀವನವನ್ನೇ ಬಲಿ ಪಡೆಯುತ್ತದೆ ಎಂದು ತಿಳಿಸಿದರು.

ಕೃಷಿ ಪದವಿ ರದ್ದತಿ ವಿಚಾರಕ್ಕೆ ಸಂಬಂಧಿಸಿದಂತೆ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೋಡಿಹಳ್ಳಿ ಅವರಿಗೆ ಈ ಬಗ್ಗೆ ಜ್ಞಾನ ಇಲ್ಲ ಅಂತ ನಾನು ಭಾವಿಸುತ್ತೇನೆ. ಪದವಿಯಲ್ಲಿ ಶೇ.40 ರಷ್ಟು ರೈತರ ಮಕ್ಕಳಿಗೆ ಅವಕಾಶ ಇದ್ದೆ ಇರುತ್ತದೆ. ನಾನೂ ರೈತನ ಮಗ ನಾವೂ ಕೃಷಿ ಮಾಡಿದ್ದೇನೆ. ನಮ್ಮ ಮುತ್ತಾತನ ಕಾಲದಿಂದಲೂ ಕೃಷಿಯಲ್ಲಿ ತೊಡಗಿದ್ದೇವೆ. ಕೋಡಿಹಳ್ಳಿ ಅವರು ಪ್ರಚಾರಕ್ಕಾಗಿ ಹೀಗೆ ಹೇಳಿದ್ದಾರೆ ಎಂದು ಟಾಂಗ್ ಕೊಟ್ಟರು.

ಇನ್ನೂ ಸಿನಿಮಾ ನಟನನ್ನು ಕೃಷಿ ಸಚಿವನನ್ನಾಗಿ ಮಾಡಿದ್ದಾರೆ ಎಂದಿದ್ದಾರೆ. ರೈತ ಪರವಾಗಿ ಹೋರಾಟ ಮಾಡಿ 20 ದಿನಗಳ ಕಾಲ ಹಿಂಡಲಗಾ ಜೈಲಿಗೆ ಹೋಗಿ ಬಂದಿದ್ದೇನೆ. ಆದರೆ ಕೋಡಿಹಳ್ಳಿ ಅವರು ಏಕೆ ಹೀಗೆ ಹೇಳಿದ್ದಾರೋ ಗೊತ್ತಿಲ್ಲ. ನಾವು ಕಳಪೆ ಬೀಜ ಪತ್ತೆ ಮಾಡಿದಾಗ ಯಾರೊಬ್ಬರೂ ನಮ್ಮ ಬಗ್ಗೆ ಮಾತನಾಡಲಿಲ್ಲ. ನಾವು ಒಳ್ಳೆ ಕೆಲಸ ಮಾಡುತ್ತಿದ್ದೇವೆ. ಯಾವ ಕೃಷಿ ಮಂತ್ರಿಯ ಕಾಲದಲ್ಲೂ ಕಳಪೆ ಬೀಜ ಹಿಡಿದಿಲ್ಲ. ನಾವು 12 ಕೋಟಿ ಕಳಪೆ ಬೀಜ ಹಿಡಿದಿದ್ದೇವೆ ಎಂದು ತಿರುಗೇಟು ನೀಡಿದರು.

ವಿಧಾನ ಸೌಧಕ್ಕೆ ರೈತರ ಮುತ್ತಿಗೆ ವಿಚಾರವಾಗಿ ಮಾತನಾಡಿ, ಕಾಯ್ದೆಗಳ ತಿದ್ದುಪಡಿ ಕುರಿತು ಸರ್ಕಾರವು ಸದನಲ್ಲಿ ಸಮರ್ಪಕ ಉತ್ತರ ಕೊಡಲಿದೆ. ಮೆಕ್ಕೆಜೋಳ ಖರೀದಿ ಮಾಡುವಂತೆ ಉಪ ಸಮಿತಿಯಲ್ಲಿ ಒತ್ತಾಯ ಮಾಡಿದ್ದೀವಿ. ಇದನ್ನು ನಾನು ಗ್ಯಾರಂಟಿ ಕೊಡಲ್ಲ. ಈವರೆಗೂ ಖರೀದಿ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಬಿಸಿ ಪಾಟೀಲ್ ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *