ಡ್ರಗ್ಸ್ ಮಾಫಿಯಾ ಸಾಮಾಜಿಕವಾಗಿ ಒಂದು ರೋಗ: ಸಿದ್ದರಾಮಯ್ಯ

Public TV
1 Min Read

ಬೆಂಗಳೂರು: ಡ್ರಗ್ಸ್ ಮಾಫಿಯಾ ಸಾಮಾಜಿಕವಾಗಿ ಒಂದು ರೋಗವಾಗಿದ್ದು, ಇದು ಒಳ್ಳೆಯದಲ್ಲ. ಇದನ್ನು ಮಾರಾಟ ಮಾಡೋದು, ಸೇವನೆ ಮಾಡೋದು ಅಪರಾಧ. ಇದೊಂದು ಸಾಮಾಜಿಕ ಪಿಡುಗು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾ ಹಿಂದೆ ಯಾರೇ ಇರಲಿ. ಈ ಸಂಬಂಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದರಲ್ಲಿ ಯಾವ ರಾಜಕಾರಣಿಗಳ ಮಕ್ಕಳು ಇದ್ದಾರೋ, ಸಿನಿಮಾ ಸ್ಟಾರ್ ಮಕ್ಕಳು ಇದ್ದಾರೋ ನನಗೆ ಗೊತ್ತಿಲ್ಲ. ನಾನು ಮಾಧ್ಯಮದಲ್ಲಿ ನೋಡಿರೋದು ಎಂದರು.

ಗಾಂಜಾ ಮಾರಾಟ ಆಗ್ತಿದ್ರೆ ಯಾರು ಜವಾಬ್ದಾರರು. ಗಾಂಜಾ ಸೇವನೆ ಅಪರಾಧ ಅಲ್ವಾ. ಇದು ಸರ್ಕಾರದ ಫೇಲ್ಯೂರ್. ಅವರ ತಪ್ಪನ್ನ ಮುಚ್ಚಿಕೊಳ್ಳಲು ಸರ್ಕಾರ ಲಿಂಕ್ ಮಾಡಿದ್ರೆ ಹೇಗೆ ಎಂದು ಪ್ರಶ್ನಿಸಿದರು.

ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಗಲಾಟೆ ವಿಚಾರ ಬೇರೆ, ಗಾಂಜಾ ಮಾರಾಟ ವಿಚಾರ ಬೇರೆ. ಗಲಾಟೆ ವಿಚಾರದ ಬಗ್ಗೆ ನ್ಯಾಯಾಂಗ ತನಿಖೆ ಆಗಲಿ. ಗಾಂಜಾ ಮಾರಾಟದ ತನಿಖೆ ಬೇರೆ ಆಗಲಿ ಎಂದು ತಿಳಿಸಿದರು.

ಟಿಪ್ಪು ನೆಲದ ಮಗ ಎಂಬ ಹೆಚ್.ವಿಶ್ವನಾಥ್ ಹೇಳಿಕೆಗೆ ವ್ಯಂಗ್ಯವಾಡಿದ ಸಿದ್ದರಾಮಯ್ಯ, ಟಿಪ್ಪು ನೆಲದ ಮಗ ಅಂತಲೇ ನಾನು ಜಯಂತಿ ಮಾಡಿದ್ದು. ವಿಶ್ವನಾಥ್ ಅವರು ಈಗ ಬಿಜೆಪಿಯಲ್ಲಿದ್ದಾರೆ ಅಂತ ಅಂದುಕೊಂಡಿದ್ದೇನೆ. ಹಿರಿಯ ಪರಿಷತ್ ಸದಸ್ಯ ಪಾಪ ಸತ್ಯ ಹೇಳಿದ್ದಾರೆ ಅಂತ ಅಂದುಕೊಂಡಿದ್ದೇನೆ. ಸತ್ಯ ಹೇಳಿದವರಿಂದ ಬಿಜೆಪಿಯವರು ಏನು ವಿವರಣೆ ಕೇಳ್ತಾರೆ ಪಾಪ. ಈಗ ಸತ್ಯ ಹೇಳಿದ ವಿಶ್ವನಾಥ್ ಮುಂದೆಯೂ ಅವರ ಹೇಳಿಕೆಗೆ ಬದ್ಧವಾಗಿರಲಿ ಎಂದರು.

ಇದೇ ವೇಳೆ ಬಿ.ವೈ ವಿಜಯೇಂದ್ರ ಮೇಲೆ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಆರೋಪ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ದಾಖಲೆ ಇದ್ದು ಮಾತನಾಡಿದ್ರೆ ಪಕ್ಷದ ಗಮನಕ್ಕೆ ತರಬೇಕು ಅಂತೇನಿಲ್ಲ. ಬಿಜೆಪಿ ಶಾಸಕರು ಸಹಿ ಹಾಕಿರುವ ಪತ್ರ ಬಿಡುಗಡೆ ಮಾಡಿದ್ದಾರೆ ಅಂತ ಮಾಧ್ಯಮದಲ್ಲಿ ನೋಡಿದ್ದೇನೆ. ಆದರೆ ಅದು ಸುಳ್ಳೋ, ಸತ್ಯವೋ ನನಗೆ ಗೊತ್ತಿಲ್ಲ. ಆರೋಪ ಸುಳ್ಳು ಅಂತ ವಿಜಯೇಂದ್ರ ಹೇಳಿದ್ದಾರೆ ಹೊರತು ಸಹಿ ಹಾಕಿರುವ ಪತ್ರ ಸುಳ್ಳು ಅಂತ ಹೇಳಿಲ್ಲ ಅಂದರು.

Share This Article
Leave a Comment

Leave a Reply

Your email address will not be published. Required fields are marked *