ಡಿಸೆಂಬರ್ 25ರಿಂದ 30ರವರೆಗೆ ಮುಳ್ಳಯ್ಯನಗಿರಿಗೆ ಪ್ರವಾಸಿಗರಿಗೆ ನಿಷೇಧ

Public TV
1 Min Read

ಚಿಕ್ಕಮಗಳೂರು: ಡಿಸೆಂಬರ್ ಕೊನೆಯ ವಾರದಲ್ಲಿ ಚಿಕ್ಕಮಗಳೂರಿಗೆ ಹೋಗಿ ವಾರ ಅಲ್ಲೇ ಇದ್ದು ಹೊಸ ವರ್ಷಕ್ಕೆ ಸ್ವಾಗತ ಕೋರಿ ಜನವರಿ ಒಂದಕ್ಕೋ, ಎರಡಕ್ಕೋ ವಾಪಸ್ ಬರೋಣ ಅನ್ನೋ ಪ್ಲಾನ್ ಏನಾದ್ರು ಇದ್ರೆ ನಿಮ್ಮ ಪ್ಲಾನನ್ನು ಡಿಸೆಂಬರ್ 30ಕ್ಕೆ ಬರುವಂತೆ ಬದಲಿಸಿಕೊಳ್ಳಿ. ಯಾಕೆಂದರೆ ಇದೇ ತಿಂಗಳ 25ರಿಂದ 30ರವರೆಗೆ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಭಾಗದ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಿ ಜಿಲ್ಲಾಧಿಕಾರಿ ಬಗಾಧಿ ಗೌತಮ್ ಆದೇಶ ಹೊರಡಿಸಿದ್ದಾರೆ.

ಇದೇ ತಿಂಗಳ 19ನೇ ತಾರೀಖಿನಿಂದ ದತ್ತಜಯಂತಿ ಆರಂಭವಾಗಿದ್ದು, 29ನೇ ತಾರೀಖಿನಿವರೆಗೂ ಇರಲಿದೆ. ಈಗಾಗಲೇ ದತ್ತಭಕ್ತರು ಮಾಲೆ ಧರಿಸಿ ವೃತ್ತದಲ್ಲಿದ್ದಾರೆ. ವೃತದಲ್ಲಿರುವ ಭಕ್ತರು ಡಿಸೆಂಬರ್ 27 ರಂದು ಅನಸೂಯ ಜಯಂತಿ, 28ರಂದು ನಗರದಲ್ಲಿ ಸಾಂಕೇತಿಕ ಶೋಭಾಯಾತ್ರೆ ಹಾಗೂ 29ರಂದು ದತ್ತಪೀಠದಲ್ಲಿ ಪೂಜೆ ನಡೆಸಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ.

 

ಈ ಮೂರು ದಿನಗಳ ಕಾಲ ಕೂಡ ದತ್ತಪೀಠದಲ್ಲಿ ಪೂಜೆ ನಡೆಯಲಿದೆ. ಜೊತೆಗೆ, ರಾಜ್ಯಾದ್ಯಂತ ಮಾಲೆ ಧರಿಸಿರುವ ಭಕ್ತರು ಕೂಡ ಅಂದು ದತ್ತಪೀಠಕ್ಕೆ ಬಂದು ಪೂಜೆ ಸಲ್ಲಿಸಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಹಾಗೂ ಪ್ರವಾಸಿಗರು ಸೇರಿದಂತೆ ದತ್ತಭಕ್ತರಿಗೂ ಕೂಡ ಯಾವುದೇ ತೊಂದರೆ ಆಗಬಾರದೆಂದು ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಹೊನ್ನಮ್ಮನ ಹಳ್ಳ ಹಾಗೂ ಮಾಣಿಕ್ಯಧಾರ ಪ್ರವಾಸಿ ತಾಣಗಳ ಭೇಟಿಗೆ ಸಂಪೂರ್ಣ ನಿಷೇಧ ಹೇರಿದೆ.

ಡಿಸೆಂಬರ್ 25 ಸಂಜೆ ಆರು ಗಂಟೆಯಿಂದ ಡಿಸೆಂಬರ್ 30ರ ಬೆಳಗ್ಗೆ ಆರು ಗಂಟೆಯವರೆಗೆ ಪ್ರವಾಸಿಗರಿಗೆ ಮುಳ್ಳಯ್ಯನಗಿರಿ ಭಾಗದ ಟೂರಿಸ್ಟ್ ಪ್ಲೇಸ್‍ಗಳಿಗೆ ನಿಷೇಧ ಹೇರಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *