ಡಿಸಿಗೆ ರಾಖಿ ಕಟ್ಟಿದ ಉಡುಪಿಯ ಕೊರೊನಾ ವಾರಿಯರ್ ರಾಜೀವಿ

Public TV
1 Min Read

ಉಡುಪಿ: ರಿಯಲ್ ಕೊರೊನಾ ವಾರಿಯರ್ ಉಡುಪಿಯ ರಾಜೀವಿ ಡಿಸಿ ಜಿ. ಜಗದೀಶ್ ಅವರಿಗೆ ರಾಖಿ ಕಟ್ಟಿ ರಕ್ಷಾಬಂಧನ ಆಚರಿಸಿದ್ದಾರೆ.

ಹಿರಿಯಡ್ಕ ಸಮೀಪದ ಪೆರ್ಣಂಕಿಲದಿಂದ ತುಂಬು ಗರ್ಭಿಣಿಯನ್ನು ರಾತ್ರಿ ಮೂರು ಗಂಟೆಗೆ ರಾಜೀವಿ ಉಡುಪಿ ನಗರದ ಆಸ್ಪತ್ರೆಗೆ ಸೇರಿಸಿ ಕರ್ತವ್ಯ ಪಾಲಿಸಿದ್ದರು. ತಾನೇ ಆಟೋ ಚಲಾಯಿಸಿಕೊಂಡು ಹೋದ ಮಹಿಳೆಯ ದಿಟ್ಟತನ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿತ್ತು.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಜನಪ್ರತಿನಿಧಿಗಳು ರಾಜೀವಿ ಕಾರ್ಯ ಶ್ಲಾಘಿಸಿ ಮಾದರಿ ಮಹಿಳೆ ಎಂದು ಬೆನ್ನು ತಟ್ಟಿದ್ದರು. ರಾಖಿ ಕಟ್ಟಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಜೀವಿ, ನನ್ನ ಕೆಲಸವನ್ನು ಡಿ.ಸಿ ಗುರುತಿಸಿ ಪ್ರೋತ್ಸಾಹದ ಮಾತುಗಳನ್ನಾಡಿದ್ದರು. ಆಶಾ ಕಾರ್ಯಕರ್ತೆಯರಿಗೆ ಆರಂಭದಿಂದಲೂ ಜಿಲ್ಲಾಧಿಕಾರಿ ಬೆನ್ನೆಲುಬಾಗಿ ನಿಂತಿದ್ದಾರೆ, ಅವರಿಗೆ ರಾಖಿ ಕಟ್ಟಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದೆ ಎಂದರು.

ರಾಜೀವಿ ಗರ್ಭಿಣಿಯನ್ನು ರಾತ್ರಿ ಆಟೋ ಚಲಾಯಿಸಿ ಆಸ್ಪತ್ರೆಗೆ ಸೇರಿಸಿದ ದಿಟ್ಟ ಆಶಾ ಕಾರ್ಯಕರ್ತೆ. ಅವರು ರಾಖಿ ಕಟ್ಟಿದ ಕ್ಷಣ ನಾನು ಭಾವುಕನಾದೆ. ನಿಜಕ್ಕೂ ಸಹ ಕೊರೊನಾ ಎದುರಿಸಲು ಇನ್ನಷ್ಟು ಧೈರ್ಯ ಬಂದಿದೆ ಎಂದು ಡಿಸಿ ತಮ್ಮ ಫೇಸ್ ಬುಕ್ ಪೇಜಲ್ಲಿ ಬರೆದುಕೊಂಡಿದ್ದಾರೆ.

ಇಂದೂ ಕೂಡ ರಾಜೀವಿ ಬೆಳಗ್ಗೆ ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸಿ ಕೆಲಸದ ಅವಧಿ ಮುಗಿಸಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ರಕ್ಷೆ ಕಟ್ಟಿ ವಾಪಾಸ್ ಬಾಡಿಗೆ ಮಾಡಲು ತೆರಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *