ಡಿಕೆ ಶಿವಕುಮಾರ್, ಕುಮಾರಸ್ವಾಮಿ ಇನ್ನೂ ಸಮ್ಮಿಶ್ರ ಸರ್ಕಾರದಲ್ಲೇ ಇದ್ದಾರಾ – ಸಿದ್ದರಾಮಯ್ಯ ಕಿಡಿ

Public TV
1 Min Read

ಬೆಂಗಳೂರು: “ಡಿ.ಕೆ.ಶಿವಕುಮಾರ್ ಪಕ್ಷ ಕಟ್ತಾರಾ? ಕುಮಾರಸ್ವಾಮಿ ಬಂದು ಕಾಂಗ್ರೆಸ್ ಕಟ್ತಾರಾ ಅನ್ನೋದನ್ನು ನಾನು ನೋಡ್ತೀನಿ. ನನಗೂ ರಾಜಕಾರಣ ಮಾಡಲು ಗೊತ್ತಿದೆ. ನನ್ನ ಜಿಲ್ಲೆ ವಿಚಾರದಲ್ಲಿ ನನ್ನ ಮಾತಿಗಿಂತ ಕುಮಾರಸ್ವಾಮಿ ಮಾತೇ ಶಿವಕುಮಾರ್‌ಗೆ ಮುಖ್ಯವಾಯಿತೇ” ಇದು ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರ ಜೊತೆ ಆಡಿರುವ ಮಾತುಗಳು

ಮೈಸೂರು ಪಾಲಿಕೆಯಲ್ಲಿ ಮೈತ್ರಿಮಾಡಿಕೊಂಡು ಜೆಡಿಎಸ್‌ಗೆ ಕಾಂಗ್ರೆಸ್‌ ಬೆಂಬಲ ನೀಡಿದ್ದಕ್ಕೆ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದಾರೆ. ಸಿಟ್ಟಾಗಿರುವ ಸಿದ್ದರಾಮಯ್ಯ ಈಗ ತಮ್ಮ ಆಪ್ತರ ಜೊತೆ ಡಿಕೆ ಶಿವಕುಮಾರ್‌ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಮೇಯರ್‌ ಸ್ಥಾನ ಜೆಡಿಎಸ್‌ಗೆ ನೀಡಿ ಸಿಟ್ಟಾಗಿರುವ ಸಿದ್ದರಾಮಯ್ಯ ಈಗ ವಿಶ್ರಾಂತಿಗೆಂದು ನಗರದ ಹೊರವಲಯದ ಫಾರ್ಮ್‌ ಹೌಸ್‌ಗೆ ತೆರಳಿದ್ದಾರೆ. ಫಾರ್ಮ್‌ ಹೌಸ್‌ಗೆ ತೆರಳುವ ಮುನ್ನ ಆಪ್ತರ ಜೊತೆ ಪಕ್ಷದ ನಡೆ ಮತ್ತು ಡಿಕೆ ಶಿವಕುಮಾರ್‌ ವಿರುದ್ಧ ಆಕ್ರೋಶ ಹೊರ ಹಾಕಿರುವ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದು ಬಂದಿದೆ. ನಾಳೆ ಸಿದ್ದರಾಮಯ್ಯ ವಾಪಸ್‌ ಆಗಲಿದ್ದು ಮೂರು ದಿನಗಳ ಕಾಲ ಯಾರನ್ನು ಭೇಟಿ ಮಾಡದಿರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಹೇಳಿದ್ದು ಏನು?
ನನ್ನ ಜಿಲ್ಲೆಯಲ್ಲಿ ಏನು ತೀರ್ಮಾನ ಕೈಗೊಳ್ಳಬೇಕು ಎಂಬುದನ್ನು ನಾನು ತೀರ್ಮಾನ ಮಾಡಿದ್ದೆ. ಡಿ.ಕೆ.ಶಿವಕುಮಾರ್‌ಗೆ ಕುಮಾರಸ್ವಾಮಿ, ಜೆಡಿಎಸ್ ಮೇಲೆ ಪ್ರೀತಿ ಇದ್ದರೆ ಕುಮಾರಸ್ವಾಮಿ ಬಂದು ಕಾಂಗ್ರೆಸ್ ಪಕ್ಷ ಕಟ್ಟುತ್ತಾರಾ? ಡಿಕೆ ಶಿವಕುಮಾರ್ ಕುಮಾರಸ್ವಾಮಿ ಇನ್ನೂ ಸಮ್ಮಿಶ್ರ ಸರ್ಕಾರದಲ್ಲೇ ಇದ್ದಾರಾ? ಯಾರು ಯಾರು ಮಾತನಾಡಿದ್ದಾರೆ ಏನು ಮಾಡಿಕೊಂಡಿದ್ದಾರೆ ಎಲ್ಲಾ ನನಗೆ ಗೊತ್ತಿದೆ ಎಂದು ಗುಟುರು ಹಾಕಿದ್ದಾರೆ.

ನಾನು ಬೇಡ ಅಂದಮೇಲೂ ಡಿಕೆಶಿ ಜೆಡಿಎಸ್‌ನವರ ಹತ್ತಿರ ಮಾತನಾಡುವ ಅಗತ್ಯ ಏನಿತ್ತು? ನೋಡೋಣ ಅವನು ಶುರು ಮಾಡಿದ್ದಾನೆ. ರಾಜಕಾರಣ ಹೇಗೆ ಮಾಡಬೇಕು ಅನ್ನೋದು ನನಗೂ ಗೊತ್ತಿದೆ. ಬೇರೆ ಜಿಲ್ಲೆ ಆಗಿದ್ದರೆ ಪರವಾಗಿಲ್ಲ. ಪಕ್ಷದ ಅಧ್ಯಕ್ಷರು ಏನೋ ತೀರ್ಮಾನ ಮಾಡಿದ್ದಾರೆ ಎಂದು ಸುಮ್ಮನಾಗಬಹುದಿತ್ತು. ಆದರೆ ನನ್ನ ಜಿಲ್ಲೆ ವಿಚಾರದಲ್ಲಿ ನನ್ನ ಮಾತಿಗಿಂತ ಕುಮಾರಸ್ವಾಮಿ ಮಾತೇ ಶಿವಕುಮಾರ್‌ಗೆ ಮುಖ್ಯವೇ ಎಂದು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *