ಡಿಕೆಶಿಯನ್ನು ದುರ್ಯೋಧನನಿಗೆ ಹೋಲಿಸಿದ ಸುಧಾಕರ್, ಅಶೋಕ್

Public TV
2 Min Read

ಬೆಂಗಳೂರು: ವೈದ್ಯಕೀಯ ಸಚಿವ ಸುಧಾಕರ್ ಹಾಗೂ ಆರ್ ಅಶೋಕ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ದುರ್ಯೋಧನನಿಗೆ ಹೋಲಿಸಿ ಮಾತನಾಡಿದ್ದಾರೆ.

ಕೊರೊನಾ ಹೆಸರಿನಲ್ಲಿ ಸರ್ಕಾರ 2 ಸಾವಿರ ಕೋಟಿ ರೂ. ಹಗರಣ ಮಾಡಿದೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪ ಮಾಡಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಧಾಕರ್, ಮಹಾಭಾರತದ ಕಥೆಯನ್ನು ಹೇಳಿದ್ದಾರೆ. ಮಹಾಭಾರತದಲ್ಲಿ ದ್ರೋಣಾಚಾರ್ಯ, ದುರ್ಯೋಧನ ಹಾಗೂ ಯುಧಿಷ್ಟಿರರಿಗೆ ಗುರು ದಕ್ಷಿಣೆ ಕೇಳಿದ್ದರು. ನೀನು ಇಡೀ ಲೋಕ ಸುತ್ತಿ ಒಬ್ಬೇ ಒಬ್ಬ ಒಳ್ಳೆಯ ಮನುಷ್ಯನನ್ನು ಹುಡುಕಿ ಕರೆದುಕೊಂಡು ಬಾ ಎಂದು ದುರ್ಯೋಧನನಿಗೆ ಹೇಳಿದರಂತೆ. ಇತ್ತ ಯುಧಿಷ್ಟಿರನಿಗೆ ಒಬ್ಬೇ ಒಬ್ಬ ಕೆಟ್ಟ ಮನುಷ್ಯನನ್ನು ಹುಡುಕೊಂಡು ಬಾ ಎಂದರಂತೆ.

ಆಗ ದುರ್ಯೋಧನ ಪ್ರಪಂಚದಲ್ಲಿ ಎಲ್ಲರೂ ಕೆಟ್ಟವರೇ ಇದ್ದಾರೆ ಎಂದರೆ, ಯುಧಿಷ್ಟಿರ ಪ್ರಪಂಚದಲ್ಲಿ ಎಲ್ಲರೂ ಒಳ್ಳೆಯವರೇ ಇದ್ದಾರೆ ಕೆಟ್ಟವರಿಲ್ಲ ಎಂದನಂತೆ ಎಂದು ಹೇಳಿ ಐ ಹೋಪ್ ಯು ಅಂಡರ್ಸ್ಟ್ಯಾಂಡ್ ಎಂದು ಸುಧಾಕರ್ ಹೇಳುವ ಮೂಲಕ ಡಿಕೆಶಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಕೊರೊನಾ ಹೆಸರಲ್ಲಿ ಬಿಜೆಪಿ ಸರ್ಕಾರದಿಂದ 2 ಸಾವಿರ ಕೋಟಿ ಲೂಟಿ

ಇತ್ತ ಅಶೋಕ್, ಕೌರವರು ಯಾರು ಪಾಂಡವರು ಯಾರು ಅಂತ ಎಲ್ಲರಿಗೂ ಗೊತ್ತಿದೆ. ದೇಶದಲ್ಲಿ ಅಧಿಕಾರ ಕಳೆದುಕೊಂಡು ಕೌರವರು ಯಾವ ಸ್ಥಿತಿಯಲ್ಲಿ ಇದ್ದಾರೆ ಅಂತ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ನಾಯಕರ ತಲೆಗೂ ಸ್ಯಾನಿಟೈಸರ್ ಮಾಡಬೇಕು. ಲೆಕ್ಕ ಕೊಡಲು ಸಿದ್ಧರಿದ್ದೇವೆ. ಕೈ ನಾಯಕರ ಮನೆ ಬಾಗಿಲಿಗೆ ಹೋಗಿ ಲೆಕ್ಕ ಕೊಡ್ತೀವಿ ಎಂದು ಅಶೋಕ್ ಗರಂ ಆದರು. ಇದನ್ನೂ ಓದಿ: ಪ್ರಸ್ತಾವನೆಗೂ ಮಂಜೂರಾತಿಗೂ ವ್ಯತ್ಯಾಸ ಗೊತ್ತಿಲ್ಲ – ಕೈ ನಾಯಕರಿಗೆ ಸುಧಾಕರ್ ತಿರುಗೇಟು

ಕಾಂಗ್ರೆಸ್ ಆರೋಪ ಏನು?
ಇಂದು ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೊರೊನಾ ಹೆಸರಿನಲ್ಲಿ ಸರ್ಕಾರ 2 ಸಾವಿರ ಕೋಟಿ ರೂ. ಹಗರಣ ಮಾಡಿದೆ. ಸರ್ಕಾರ 324 ಕೋಟಿ ರೂ. ಖರ್ಚು ಮಾಡಿದೆ ಎಂದು ಹೇಳಿದೆ. ಒಬ್ಬ ಸಚಿವ 33 ಕೋಟಿ ಮಾತ್ರ ಖರ್ಚು ಮಾಡಿದ್ದೇವೆ. ಸುಮ್ಮನೆ 33 ಪ್ರಶ್ನೆ ಕೇಳ್ತಾರೆ ಅಂತಾರೆ. ನನಗಿರುವ ಮಾಹಿತಿ ಆರೋಗ್ಯ ಇಲಾಖೆ 700 ಕೋಟಿ ಖರ್ಚು ಮಾಡಿದೆ. ವೈದ್ಯಕೀಯ ಶಿಕ್ಷಣ ಇಲಾಖೆ 815 ಕೋಟಿ ಖರ್ಚು ಮಾಡಿದೆ. ಕಾರ್ಮಿಕ ಇಲಾಖೆ 1,000 ಕೋಟಿ ಖರ್ಚು ಮಾಡಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *