ಡಿಕೆಶಿಗೆ ಧಮ್ ಇದ್ರೆ ಸಿದ್ದರಾಮಯ್ಯ ಮೇಲೆ ಕ್ರಮ ಕೈಗೊಳ್ಳಲಿ: ಈಶ್ವರಪ್ಪ

Public TV
1 Min Read

ಧಾರವಾಡ: ಡಿಕೆಶಿಗೆ ಧಮ್ ಇದ್ದರೆ ಸಿದ್ದರಾಮಯ್ಯ ಮೇಲೆ ಕ್ರಮ ಕೈಗೊಳ್ಳಲಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಕೆಪಿಸಿಸಿ ಅಧ್ಯಕ್ಷರಿಗೆ ಸವಾಲ್ ಹಾಕಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಪಕ್ಷದ ಪರಿಸ್ಥಿತಿ ನೋಡಿ ಗಾಬರಿಯಾಗಿದ್ದಾರೆ. ಅವರ ಪಕ್ಷದಲ್ಲಿದ್ದವರು ಯಾವ ಪಕ್ಷಕ್ಕೆ ಹೋಗ್ತಾರೊ? ಎಲ್ಲಿ ಉಳಿತಾರೋ ಒಂದೂ ಅವರಿಗೆ ಅರ್ಥವಾಗ್ತಿಲ್ಲ. ಕಾಂಗ್ರೆಸ್ ಪಕ್ಷವೇ ರಾಜ್ಯ, ದೇಶದಲ್ಲಿ ನಿರ್ನಾಮ ಆಗುತ್ತಿದೆ ಎಂದರು.

ಮುಳುಗಿ ಹೋಗುವ ಹಡಗಿನಲ್ಲಿ ಯಾರು ಉಳಿತಾರೆ ಹೇಳಿ ಎಂದ ಈಶ್ವರಪ್ಪ, ಹೀಗಾಗಿ ಚೆಲ್ಲಾಪಿಲ್ಲಿಯಾಗಿ ಹೋಗುತ್ತಿದ್ದಾರೆ. ಈ ಮಧ್ಯೆ ನಾನು ಸಿಎಂ, ನಾನೇ ಸಿಎಂ ಅಂತ ಸ್ಪರ್ಧೆ ನಡೆದಿದೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಮಧ್ಯೆ ನಾನೇ ಸಿಎಂ ಸ್ಪರ್ಧೆ ನಡೆದಿದೆ. ಕಾಂಗ್ರೆಸ್ಸಿಗರು ಸಿಎಂ ಆಗೋದು ಇನ್ನು ಈ ಜನ್ಮದಲ್ಲಿ ಸಾಧ್ಯವಿಲ್ಲ. ಆದರೆ ಅವರಿಬ್ಬರಿಗೆ ಸಿಎಂ ಆಗುವ ಹಗಲುಗನಸು ಬೀಳುತ್ತಿದೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಮುಂದಿನ ಸಿಎಂ ಅಂತ ಅವರೇ ಹೇಳಿಕೊಳ್ಳುತ್ತಾರೆ. ಜನ ವೋಟ್ ಕೊಡುವುದು ಬೇಡ, ಕೇಂದ್ರ ನಾಯಕರೂ ಹೇಳೋದ ಬೇಡ. ಆದರೂ ನಾನೇ ಮುಖ್ಯಮಂತ್ರಿ ಅಂತಾರೆ. ಡಿಕೆಶಿ ಧಮ್ ಬಗ್ಗೆ ಬಹಳ ಮಾತನಾಡ್ತಾರೆ, ಧಮ್.. ಧಮ್.. ಧಮ್ ಅಂತ ಹೇಳ್ತಾನೇ ಇರುತ್ತಾರೆ. ಡಿಕೆಶಿಗೆ ಧಮ್ ಇದ್ದರೆ ಸಿದ್ದರಾಮಯ್ಯ ಮೇಲೆ ಕ್ರಮ ಕೈಗೊಳ್ಳಲಿ. ಮುಖ್ಯಮಂತ್ರಿ ಅಂತ ಘೋಷಣೆ ಮಾಡಿಕೊಳ್ಳೋ ಅಧಿಕಾರ ನಿನಗಿಲ್ಲ ಅಂತ ಹೇಳಬೇಕು ಎಂದು ಹೇಳಿದರು.

ಶಿವಮೊಗ್ಗ ಸ್ಫೋಟ ಎಲ್ಲರಿಗೂ ಆಶ್ಚರ್ಯ ಆಗಿದೆ, ಅದು ಏನು ಎನ್ನುವುದು ಇನ್ನು ತಿಳಿಯಬೇಕಿದೆ. ನಾನು ಹುಟ್ಟಿ ಬೆಳೆದಿದ್ದೇ ಶಿವಮೊಗ್ಗದಲ್ಲಿ. ಇಲ್ಲಿಯವರೆಗೆ ಇಂತಹ ಘಟನೆ ನಡೆದಿಲ್ಲ. ಅದರಲ್ಲಿ ಏನು ಸಾಮಗ್ರಿ ಇತ್ತು ಎನ್ನುವುದು ತಜ್ಞರ ವರದಿಯಿಂದ ತಿಳಿಯಬೇಕಿದೆ. ಊಹೆಗೆ ಏನೇನೋ ಹೇಳಿಕೆಗಳು ಕೊಡುತ್ತಿದ್ದಾರೆ. ವರದಿ ಬರುವ ಬಗ್ಗೆ ನಾವು ಕಾಯುತ್ತಿದ್ದೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *