ಟಾಸ್ಕ್ ವೇಳೆ ಮಂಜು ಎಸಗಿದ ದೊಡ್ಡ ತಪ್ಪನ್ನು ತಿಳಿಸಿದ ಸುದೀಪ್

Public TV
2 Min Read

ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಪ್ರತಿದಿನ ಟಾಸ್ಕ್, ಮಾತು, ಜಗಳ, ಹರಟೆ ಎಲ್ಲವೂ ಸ್ಪರ್ಧಿಗಳ ನಡುವೆ ನಡೆಯುತ್ತದೆ. ಇವೆಲ್ಲದರ ಕುರಿತು ವಾರದ ಕೊನೆಯ ಎರಡು ದಿನ ಸುದೀಪ್ ಮಾತನಾಡುತ್ತಾರೆ. ಈ ವಾರದ ಸಂಚಿಕೆಯಲ್ಲಿ ಬಿಗ್‍ಮನೆಯಲ್ಲಿ ಮಂಜು ಮಾಡಿದ ದೊಡ್ಡ ತಪ್ಪೊಂದನ್ನು ತಿಳಿಸಿದ್ದಾರೆ.

‘ನೀರಿಗೊಂದು ಎಲ್ಲೆ ಎಲ್ಲಿದೆ’ ಟಾಸ್ಕ್ ನಲ್ಲಿ ನೀರೊಳಗೆ ಬಿದ್ದರೆ ಆಟದಿಂದ ಔಟ್ ಎಂಬ ನಿಯಮ ಇತ್ತು. ಈ ಸಂದರ್ಭ ದಿವ್ಯ ಅವರು ರಾಘುವನ್ನು ನೀರಿಗೆ ತಳ್ಳುತ್ತಾರೆ. ಇದನ್ನು ನೋಡಿದ ಮಂಜು ಅವರಿಗೆ ಕೋಪ ಬರುತ್ತದೆ. ಕೋಪದ ಭರದಲ್ಲಿ ತನ್ನನ್ನು ತಡೆಯುತ್ತಿದ್ದ ಅರವಿಂದ್ ಅವರನ್ನು ಹಿಡಿದುಕೊಂಡು ನೀರಿಗೆ ಬೀಳುತ್ತಾರೆ. ಇದಾದ ಬಳಿಕ ದಿವ್ಯ ಅವರನ್ನು ಎಳೆತಂದು ನೀರಿಗೆ ದೂಡುತ್ತಾರೆ. ಈ ವಿಚಾರವನ್ನು ಪ್ರಸ್ತಾಪ ಮಾಡಿದ ಸುದೀಪ್, ದಿವ್ಯ ಅವರನ್ನು ನೀರಿಗೆ ಎಳೆದು ತಂದು ಹಾಕಿದ್ದು ನಿಯಮದ ಪ್ರಕಾರ ವಿರುದ್ಧ ಅಲ್ಲವೇ ಎಂದು ಮಂಜು ಅವರನ್ನು ಪ್ರಶ್ನಿಸಿದರು.

ಕಿಚ್ಚ ಅವರ ಪ್ರಶ್ನೆಗೆ ಯೋಚನೆ ಮಾಡಿ ಉತ್ತರಿಸಿದ ಮಂಜು ಹೌದು ಇದು ನಿಯಮದ ವಿರುದ್ಧವಾಗಿತ್ತು ಎಂದು ಅರಿತುಕೊಂಡರು. ಇದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಕಿಚ್ಚ, ಆಟದ ಜೋಶ್‍ನಲ್ಲಿ ಕೋಪ ಮತ್ತು ಹಠಕ್ಕೆ ಬಿದ್ದು ಎದುರಾಳಿಗಳು ಮಾಡಿದ ತಪ್ಪನ್ನೇ ನೀವು ಮಾಡಿದ್ದೀರಿ ಅದು ತಪ್ಪಲ್ಲ. ಆದರೆ ಆ ಆಟದಲ್ಲಿ ಆ ನಿಮಿಷಕ್ಕೆ ನಿಮ್ಮ ನಿರ್ಧಾರದಿಂದ ನಿಮ್ಮ ತಂಡ ಸೋಲನ್ನು ಕಾಣಬೇಕಾಯಿತು ಎಂದರು. ಇದಕ್ಕೆ ಉತ್ತರಿಸಿದ ಮಂಜು ಹೌದು ಆಟದ ವೇಳೆ ನನಗೆ ಗೊತ್ತಾಗಲಿಲ್ಲ. ನೀವು ತಿಳಿಸಿದ ನಂತರ ಇದೀಗ ಈ ಕುರಿತು ತಿಳಿಯಿತು ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡರು.

ಈ ಮೊದಲು ಮಂಜು ಅವರ ಹಲ್ಲಿನ ಕುರಿತು ನಿಮ್ಮ ಹಲ್ಲು ಒಂದು ‘ದಂತಕಥೆ’ಯಾಗಿದೆ ಎಂದು ಕಿಚ್ಚ ಸುದೀಪ್ ಹಾಸ್ಯ ಮಾಡಿದರು. ಟಾಸ್ಕ್ ವೇಳೆ ರಾಜೀವ್ ಅವರ ಕೈ ತಾಗಿ ಮಂಜು ಅವರ ಹಲ್ಲು ಮುರಿದಿತ್ತು. ಇದೀಗ ಮಂಜು ಅವರು ಹಲ್ಲನ್ನು ಹಾಕಿಸಿಕೊಂಡಿದ್ದಾರೆ. ಇದನ್ನು ಗಮನಿಸಿದ ಕಿಚ್ಚ ನಿಮ್ಮ ಒಂದು ಹಲ್ಲು ಎದ್ದು ಕಾಣುತ್ತಿದೆ. ನೀವು ನಗುತ್ತಿದ್ದಾಗ ನಿಮ್ಮನ್ನು ನೋಡಿದವರು ಈ ವ್ಯಕ್ತಿ ಒಂದು ಹಲ್ಲನ್ನು ಉಜ್ಜಿಲ್ಲ ಎಂದುಕೊಳ್ಳಬಹುದು ಎಂದು ಕಾಲೆಳೆದುಕೊಂಡರು.

ಸದಾ ಬಿಗ್ ಮನೆಯಲ್ಲಿ ಹಾಸ್ಯ ಮಾಡುವ ಮಂಜು ಅವರಿಗೆ ಕಿಚ್ಚ ಹಾಸ್ಯ ಮಾಡಿ ನಗಿಸಿರುವುದು ನೋಡುಗರಿಗೆ ಖುಷಿಕೊಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *