ಜೆಡಿಎಸ್ ಸತ್ತಿದೆ, ಕುಮಾರಸ್ವಾಮಿ ಯಾವ ಸೀಮೆ ಲೀಡರ್ – ಜಮೀರ್ ಅಹ್ಮದ್

Public TV
2 Min Read

– ಬಿಜೆಪಿ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ
– ಸಿಎಂ ಇಬ್ರಾಹಿಂ ವಿರುದ್ಧ ಕಿಡಿ

ಬಾಗಲಕೋಟೆ: ಸಿದ್ದರಾಮಯ್ಯರಂತಹ ಲೀಡರ್‍ ನ ನಾನು ನೋಡಿಯೇ ಇಲ್ಲ, ಎಚ್.ಡಿ ಕುಮಾರಸ್ವಾಮಿ ಯಾವ ಸೀಮೆ ಲೀಡರ್ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಪ್ರಶ್ನಿಸಿ ವ್ಯಂಗ್ಯವಾಡಿದ್ದಾರೆ.

ಖಾಸಗಿ ಕಾರ್ಯಕ್ರಮಕ್ಕಾಗಿ ಬಾದಾಮಿ ತಾಲೂಕಿನ ಕೆರೂರು ಪಟ್ಟಣಕ್ಕೆ ಆಗಮಿಸಿದ ಜಮೀರ್ ಅಹ್ಮದ್ ಆಗಮಿಸಿದ್ದರು. ಈ ವೇಳೆ ಉತ್ತರ ಕರ್ನಾಟಕ ಬಾಗಲಕೋಟೆಯಲ್ಲಿ ಜೆಡಿಎಸ್ ಸಂಘಟನಾ ಸಮಾವೇಶ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಪಕ್ಷ ಎಲ್ಲಿದೆ? ಜೆಡಿಎಸ್ ಕೋಮುವಾದಿ ಪಕ್ಷದೊಂದಿಗೆ ಸೇರಿದೆ ಎಂದರು.

ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಉಪಸಭಾಪತಿ ಆಯ್ಕೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿಗೆ ಬೆಂಬಲ ನೀಡಿದೆ, ಸದ್ಯ ಜೆಡಿಎಸ್ ಪಕ್ಷದಿಂದ ಎಸ್ ಪದವನ್ನು ತೆಗೆಯಬೇಕು. ಇದು ಯಾವ ಜಾತ್ಯಾತೀತ ಪಕ್ಷ. ಜೆಡಿಎಸ್ ಪಕ್ಷ ಪ್ರಸ್ತುತ ಸತ್ತಿದೆ. 2006ರಲ್ಲಿ ಎಚ್‍ಡಿಕೆ ಸಿಎಂ ಆಗಿ ಒಳ್ಳೆಯ ಆಡಳಿತ ಕೊಟ್ಟಿದ್ದರು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಸಿದ್ದರಾಮಯ್ಯ ಜೆಡಿಎಸ್‍ನಲ್ಲಿದ್ದಾಗ 59 ಸೀಟು ಬಂದಿತ್ತು. ಈಗ ಕುಮಾರಸ್ವಾಮಿ ಲೀಡರ್ ಎನ್ನುತ್ತಾರಲ್ಲ. ಈಗ ಆ ನಂಬರ್ ರೀಚ್ ಮಾಡುದಕ್ಕೆ ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಸೆಪ್ಟೆಂಬರ್ ಅಕ್ಟೋಬರ್‍ ನಲ್ಲಿ ಚುನಾವಣೆ ನಡೆಯುತ್ತದೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವಧಿ ಪೂರ್ಣಗೊಳಿಸುತ್ತದೆ. ಬಿಜೆಪಿಗೆ ಪೂರ್ಣ ಬಹುಮತವಿದೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.

ಇನ್ನು ಅಲ್ಪಸಂಖ್ಯಾತರ ಅನುದಾನ ಕಡಿತ ವಿಚಾರಕ್ಕೆ ಮಾತನಾಡಿದ ಜಮೀರ್, ಅಲ್ಪಸಂಖ್ಯಾತರ ಅನುದಾನ ನಮಗೆ ಕೊಟ್ಟಿದ್ದ ಅನುದಾನ ಕಡಿತ ಗೊಳಿಸಿದ್ದಾರೆ. ಅಲ್ಪಸಂಖ್ಯಾತರಿಗೆ 3150 ಕೋಟಿ ಇದ್ದ ಅನುದಾನವನ್ನು 600 ಕೋಟಿಗೆ ತಂದು ನಿಲ್ಲಿಸಿದ್ದಾರೆ. ಶಾದಿ ಭಾಗ್ಯ ನಿಲ್ಲಿಸಿದ್ದಾರೆ. ಏನೇ ಮಾಡಲಿ ಅವರ ಸರ್ಕಾರವಿದೆ. ಆದರೆ ಮಕ್ಕಳಿಗೆ ಕೊಡುತ್ತಿದ್ದ ಸ್ಕಾಲರ್ ಶಿಪ್ 198 ಕೋಟಿ ಇದ್ದಿದ್ದು 100 ಕೋಟಿ ಮಾಡಿದ್ದಾರೆ. ಇದರಿಂದ ಉಳಿದ 98 ಕೋಟಿ ಯಾರು ಕೊಡುತ್ತಾರೆ? ಓದುವ ಮಕ್ಕಳ ಮುಂದಿನ ಭವಿಷ್ಯ ಏನು ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

ಸಿಎಂ ಇಬ್ರಾಹಿಂ ಜೆಡಿಎಸ್ ಸೇರ್ಪಡೆಗೊಳ್ಳುವ ವಿಚಾರಕ್ಕೆ ಮಾತನಾಡಿದ ಜಮೀರ್, ಸಿಎಂ ಇಬ್ರಾಹಿಂ ಕಾಂಗ್ರೆಸ್‍ನ ಎಂಎಲ್‍ಸಿ ಆಗಿದ್ದಾರೆ. ಇನ್ನು ನಾಲ್ಕೂವರೆ ವರ್ಷ ಅವಧಿ ಇದೆ. ಹಾಗೇನಾದ್ರೂ ಕಾಂಗ್ರೆಸ್ ಬಿಡಬೇಕಿದ್ದರೆ ಎಂಎಲ್‍ಸಿ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು. ಚುನಾವಣೆಗಳಲ್ಲಿ ಸೋತಮೇಲೂ ಇಬ್ರಾಹಿಂ ಅವರನ್ನು ಕಾಂಗ್ರೆಸ್ ಪಕ್ಷದ ಚೇರ್ಮನ್ ಮಾಡಿದೆ. ಇದನ್ನು ಹೊರತು ಪಡಿಸಿ ಪಕ್ಷ ಇಬ್ರಾಹಿಂಗೆ ಮತ್ತೇನು ಮಾಡಬೇಕು? ಮುಸ್ಲಿಂ ಸಮಾಜಕ್ಕೆ ಕಾಂಗ್ರೆಸ್ ಏನು ಮಾಡಿಲ್ಲ ಎನುವುದಾದರೆ ಸಿದ್ದರಾಮಯ್ಯ ಸಿಎಂ ಇದ್ದಾಗ ಅಲ್ಪಸಂಖ್ಯಾತರಿಗೆ 120 ಕೋಟಿ ಇದ್ದ ಅನುದಾನವನ್ನು 3100 ಕೋಟಿಗೆ ಹೆಚ್ಚಿಸಿದ್ದರು. ಅಲ್ಪಸಂಖ್ಯಾತರ ಅನುದಾನ ಹೆಚ್ಚಿಸಿದಾಗ ಕಾಂಗ್ರೆಸ್‍ನಲ್ಲೇ ಇದ್ದ ಇಬ್ರಾಹಿಂ ಬಾಯಿಯಲ್ಲಿ ಲಡ್ಡು ಇಟ್ಟುಕೊಂಡಿದ್ರಾ ಎಂದು ವ್ಯಂಗವಾಡಿದರು.

Share This Article
Leave a Comment

Leave a Reply

Your email address will not be published. Required fields are marked *