ಜೂನ್ 15ರಿಂದ ಇಸ್ಕಾನ್ ಓಪನ್- ಜನದಟ್ಟಣೆ ಹಿನ್ನೆಲೆ ತಡ

Public TV
1 Min Read

– ಸಿದ್ಧತೆ ಮಾಡಿಕೊಳ್ಳಲು ಸಮಯಾವಕಾಶ ಕೋರಿದ ಆಡಳಿತ ಮಂಡಳಿ

ಬೆಂಗಳೂರು: ಜೂನ್ 8ರಿಂದ ಎಲ್ಲ ದೇವಸ್ಥಾನಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಈಗಾಗಲೇ ಹಲವು ಪ್ರತಿಷ್ಠಿತ ದೇವಸ್ಥಾನಗಳ ಆಡಳಿತ ಮಂಡಳಿಗಳು ಸಿದ್ಧತೆ ನಡೆಸಿವೆ. ಆದರೆ ಇಸ್ಕಾನ್ ಜೂನ್ 15ರ ವರೆಗೆ ಸಮಯಾವಕಾಶ ಕೋರಿದೆ.

ಸಿಲಿಕಾನ್ ಸಿಟಿಯ ಇಸ್ಕಾನ್ ದೇವಾಲಯಕ್ಕೆ ಹೆಚ್ಚು ಭಕ್ತರು ಆಗಮಿಸುವ ಹಿನ್ನೆಲೆ ಆಡಳಿತ ಮಂಡಳಿ ದೇವಸ್ಥಾನ ತೆರೆಯಲು ಸಮಯಾವಕಾಶ ನೀಡುವಂತೆ ಮನವಿ ಮಾಡಿದೆ. ಹೀಗಾಗಿ ಇಸ್ಕಾನ್ ಬಾಗಿಲು ತೆರೆಯುವುದು ಕೆಲ ದಿನಗಳ ಕಾಲ ತಡವಾಗಲಿದೆ. ದೇವಸ್ಥಾನದ ಬಾಗಿಲು ತೆರೆಯಲು ಈಗಾಗಲೇ ಸಿದ್ಧತೆ ಪ್ರಾರಂಭವಾಗಿದೆ. ಆದರೆ ಭಕ್ತರ ಆಗಮನಕ್ಕುಣವಾಗಿ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಹೀಗಾಗಿ ತಡವಾದರೂ ಪರವಾಗಿಲ್ಲ ಸೂಕ್ತ ಭದ್ರತೆ, ವ್ಯವಸ್ಥೆ ಮಾಡಿಕೊಂಡೇ ಬಾಗಿಲು ತೆರೆಯಲು ನಿರ್ಧರಿಸಿದೆ.

ಇಸ್ಕಾನ್‍ಗೆ ಪ್ರತಿದಿನ 12 ಸಾವಿರ ಭಕ್ತರು ಭೇಟಿ ನೀಡುತ್ತಾರೆ. ಇಷ್ಟೊಂದು ಜನರಿಗೆ ಸಾಮಾಜಿಕ ಅಂತರ ಹಾಗೂ ಸುಗಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಬೇಕಾಗಿದೆ. ದೇವಾಲಯದ ಸಿದ್ಧತೆಗಾಗಿ ಸ್ವಲ್ಪ ಹೆಚ್ಚಿನ ಸಮಯ ಬೇಕು ಎಂದು ಇಸ್ಕಾನ್‍ನಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಈಗಾಗಲೇ ಮೈಸೂರಿನ ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ರಾಜ್ಯದ ಪ್ರಸಿದ್ಧ ದೇವಾಲಯಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಹುತೇಕ ಎಲ್ಲ ದೇವಾಲಯಗಳು ಸರ್ಕಾರದ ನಿಯಮದಂತೆ ಸೋಮವಾರದಿಂದ ಬಾಗಿಲು ತೆರೆಯಲಿವೆ. ಸರ್ಕಾರದ ಮಾರ್ಗಸೂಚಿಯಂತೆ ದೇವರ ದರ್ಶನ ಪಡೆಯಲು ಭಕ್ತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *