ಜುಲೈ 8ರಿಂದ ಕರ್ತವ್ಯಕ್ಕೆ ಹಾಜರಾಗಲ್ಲ- ಸರ್ಕಾರಕ್ಕೆ ಗುತ್ತಿಗೆ ಆಧಾರದ ವೈದ್ಯರ ಎಚ್ಚರಿಕೆ

Public TV
1 Min Read

ಹಾಸನ: ಕೊರೊನಾ ಸಂಕಷ್ಟದ ನಡುವೆ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ವೈದ್ಯರು ಜುಲೈ 8ರಿಂದ ಕೆಲಸಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾರೆ.

ವೈದ್ಯರ ದಿನದಂದೇ ಹಾಸನದ ಜಿಲ್ಲಾಧಿಕಾರಿ ಕಚೇರಿಕೆ ಆಗಮಿಸಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಗುತ್ತಿಗೆ ಆಧಾರಿತ ವೈದ್ಯರು, ನಾವು ರಾಜ್ಯಾದ್ಯಂತ 507 ಜನ ವೈದ್ಯರು ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಯಾವುದೇ ಹೆಲ್ತ್ ಇನ್ಶೂರೆನ್ಸ್ ಕೂಡ ಇಲ್ಲದೇ ನಿರಂತರವಾಗಿ ನಾವು ಪ್ರಾಣದ ಹಂಗು ತೊರೆದು ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡಿದ್ದೇವೆ ಎಂದರು.

ನಮ್ಮ ಕೆಲಸ ಖಾಯಂಗೊಳಿಸಿ ಎಂದು ನಾವು ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಹಲವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆದರೆ ಯಾರೂ ಕೂಡ ನಮ್ಮ ಮನವಿಗೆ ಸ್ಪಂಧಿಸಿಲ್ಲ. ಹೀಗಾಗಿ ಜುಲೈ 8ರಿಂದ ನಾವು ಕೆಲಸಕ್ಕೆ ಹಾಜರಾಗಲ್ಲ ಎಂದು ಸರ್ಕಾರಕ್ಕೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

ಹಾಸನ ಜಿಲ್ಲಾಧಿಕಾರಿ ಗಿರೀಶ್ ಅವರನ್ನು ಭೇಟಿ ಮಾಡಿರುವ ಗುತ್ತಿಗೆ ಆಧಾರಿತ ವೈದ್ಯರು ತಮ್ಮ ಮನವಿ ಪತ್ರ ಸಲ್ಲಿಸಿದ್ದಾರೆ. ಇದರಿಂದ ಕೊರೊನಾ ಸಂಕಷ್ಟದ ನಡುವೆ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *