ಜುಲೈ 3ನೇ ವಾರದಲ್ಲಿ ಪಿಯುಸಿ, ಆಗಸ್ಟ್ 1ನೇ ವಾರದಲ್ಲಿ SSLC ಫಲಿತಾಂಶ: ಸುರೇಶ್ ಕುಮಾರ್

Public TV
1 Min Read

ಬೆಂಗಳೂರು: ಜುಲೈ ಮೂರನೇ ವಾರದಲ್ಲಿ ಪಿಯುಸಿ ಫಲಿತಾಂಶ ನಂತರ ಆಗಸ್ಟ್ ಮೊದಲ ವಾರದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನು ಬಿಡುಗಡೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಇಂದು ಆನೇಕಲ್ ತಾಲೂಕಿನ ಅತ್ತಿಬೆಲೆ, ಚಂದಾಪುರ, ಸರ್ಜಾಪುರ, ದೊಮ್ಮಸಂದ್ರ ಸೇರಿ ಹಲವು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿಕೊಟ್ಟ ಸಚಿವರು, ಪರೀಕ್ಷಾ ಕೇಂದ್ರದ ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸಿದರು. ಜೊತೆಗೆ ಕರ್ತವ್ಯದಲ್ಲಿ ಹಾಜರಿದ್ದ ಸ್ಕೌಟ್ಸ್ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಆಗಸ್ಟ್ ಮೊದಲ ವಾರದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಮತ್ತು ಜುಲೈ ಮೂರನೇ ವಾರದಲ್ಲಿ ಪಿಯುಸಿ ಫಲಿತಾಂಶವನ್ನು ಬಿಡುಗಡೆ ಮಾಡಲಾಗುವುದು. ಈಗ ಪರೀಕ್ಷೆಯಿಂದ ಹೊರಗುಳಿದಿದ್ದ 33 ಮಕ್ಕಳಿಗೆ ಆಗಸ್ಟ್ ತಿಂಗಳ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು, ಜೊತೆಗೆ ಆ ವಿದ್ಯಾರ್ಥಿಗಳನ್ನು ಫ್ರೆಶ್ ಕ್ಯಾಂಡಿಡೆಟ್ ಎಂದು ಪರಿಗಣನೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಖಾಸಗಿ ಶಾಲೆಗಳ ಶುಲ್ಕದ ಬಗ್ಗೆ ಮಾತನಾಡಿದ ಸುರೇಶ್ ಕುಮಾರ್, ಈ ವರ್ಷ ಶುಲ್ಕವನ್ನು ಯಾವುದೇ ಕಾರಣಕ್ಕೂ ಹೆಚ್ಚಿಸುವಂತೆ ಇಲ್ಲ. ಮಾನವೀಯ ಕಾರಣಕ್ಕಾಗಿ ಶುಲ್ಕ ಹೆಚ್ಚು ಮಾಡಬಾರದು. ಒಂದು ವೇಳೆ ಹೆಚ್ಚು ಮಾಡಿದರೆ ದೂರು ನೀಡುವಂತೆ ಪೋಷಕರಿಗೆ ಸೂಚನೆ ನೀಡಲಾಗಿದೆ. ಅದಕ್ಕಾಗಿ ಸಹಾಯವಾಣಿಯನ್ನು ಕೂಡ ತೆರೆಯಲಾಗಿದೆ. ಖಾಸಗಿ ಶಾಲೆಯ ಶಿಕ್ಷಕರಿಗೆ ಸಂಬಳ ನೀಡುವ ಅನಿವಾರ್ಯತೆಎದುರಾಗಿದೆ. ಈ ನಿಟ್ಟಿನಲ್ಲಿ ಶುಲ್ಕ ಪಡೆಯುವುದು ಅವರಿಗೆ ಅನಿವಾರ್ಯ ಎಂದರು.

ಈಗಾಗಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಶೇ.98ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇದೆ. ಪರೀಕ್ಷೆಗಳು ಯಾವುದೇ ಆತಂಕವಿಲ್ಲದೇ ನಿರಾತಂಕವಾಗಿ ನಡೆದಿದೆ. ಹೀಗಾಗಿ ಮಕ್ಕಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದಿದ್ದಾರೆ. ಇದು ಕೇವಲ ಶಿಕ್ಷಣ ಇಲಾಖೆಯ ಪರೀಕ್ಷೆ ಆಗಿರಲಿಲ್ಲ, ಇದು ಗೃಹ ಇಲಾಖೆ, ಸಾರಿಗೆ ಇಲಾಖೆ, ಆರೋಗ್ಯ ಇಲಾಖೆ, ಸ್ಕೌಟ್ ಆ್ಯಂಡ್ ಗೈಡ್ಸ್ ಎಲ್ಲರ ಸಹಕಾರ ಇದೆ ಎಂದು ಸುರೇಶ್ ಕುಮಾರ್ ಅವರು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *