ಜುಲೈ 26ರ ಬಳಿಕ ಪದತ್ಯಾಗ ಮಾಡ್ತಾರಾ ಸಿಎಂ ಯಡಿಯೂಪ್ಪ?

Public TV
2 Min Read

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಗಮನಕ್ಕೆ ದಿನಗಣನೆ ಶುರುವಾಗಿದಂತಿದೆ. ಜುಲೈ 26ರಂದು ಸಿಎಂ ಯಡಿಯೂರಪ್ಪ ಸರ್ಕಾರಕ್ಕೆ 2 ವರ್ಷ ತುಂಬಿದ ಹೊತ್ತಲ್ಲಿ ಪದತ್ಯಾಗ ಮಾಡಲಿದ್ದಾರೆ ಎನ್ನಲಾಗ್ತಿದೆ.

ಪುತ್ರರಾದ ರಾಘವೇಂದ್ರ-ವಿಜಯೇಂದ್ರ ಜೊತೆ ನಿನ್ನೆ ದೆಹಲಿಗೆ ತೆರಳಿದ್ದ ಯಡಿಯೂರಪ್ಪ, ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ನಗುಮೊಗದಲ್ಲಿದ್ದರು. ಇವತ್ತು ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಶರವೇಗದಲ್ಲಿ ಭೇಟಿಯಾಗಿ ಬೆಂಗಳೂರಿಗೆ ಹಿಂದಿರುಗಿದ್ದಾರೆ. ಆದರೆ ಆಗಸ್ಟ್ ಮೊದಲ ವಾರದಲ್ಲಿ ದೆಹಲಿಗೆ ಬರುವಂತೆ ಅಗ್ರನಾಯಕರು ಬಿಎಸ್‍ವೈಗೆ ಹೇಳಿ ಕಳಿಸಿದ್ದಾರೆ. ಇದು ಆಗಸ್ಟ್ ಮೊದಲ ವಾರದಲ್ಲೇ ಮಹತ್ವದ ಬೆಳವಣಿಗೆ ಆಗೋ ಸುಳಿವು ನೀಡಿದಂತಿದೆ. ಆದರೆ ಮುಖ್ಯಮಂತ್ರಿಗಳು ಮಾತ್ರ. ನಾನು ರಾಜೀನಾಮೆ ಕೊಡ್ತಿಲ್ಲ. ರಾಜೀನಾಮೆ ಕೊಟ್ಟಿದ್ದರೆ ಮುಚ್ಚಿಡುವ ಪ್ರಶ್ನೆ ಇಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ ಮುಂದಿನ ಬಾರಿಯೂ ಪಕ್ಷಕ್ಕೆ ಅಧಿಕಾರ ತರುವ ಜವಾಬ್ದಾರಿ ನಿಮ್ಮದೇ ಅಂದಿದ್ದಾರೆ. ಪ್ರಧಾನಿಗಳು ಕೂಡ ನಿನ್ನೆ ಇದನ್ನೇ ಹೇಳಿದ್ದಾರೆ ಅಂತ ಯಡಿಯೂರಪ್ಪ ಹೇಳಿದ್ದಾರೆ.

ಆಗಸ್ಟ್ ಮೊದಲ ವಾರದಲ್ಲಿ ಮತ್ತೆ ದೆಹಲಿಗೆ ಬರುತ್ತೇನೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಹೀಗಾಗಿ ಆಗಸ್ಟ್ ನಲ್ಲಿ ಬಿಜೆಪಿ ಕ್ರಾಂತಿ ಫಿಕ್ಸ್ ಆಗಿದೆ. ಇದರ ಜೊತೆಗೆ, ನಾಯಕತ್ವ ಬದಲಾವಣೆ ಆದ್ರೆ ಪ್ರಭಾವಿ ಸಚಿವರಿಗೆ ಸಂಪುಟದಿಂದ ಕೊಕ್ ಸಾಧ್ಯತೆ ಇದೆ. ಮೋದಿ ಸಂಪುಟ ಪುನಾರಚನೆ ರೀತಿಯಲ್ಲಿ ಯುವಕರಿಗೆ ಆದ್ಯತೆ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ರಾಜೀನಾಮೆ ನೀಡುವ ಪ್ರಶ್ನೆ ಇಲ್ಲವೇ ಇಲ್ಲ: ಸಿಎಂ ಯಡಿಯೂರಪ್ಪ

ಹೈಕಮಾಂಡ್ ಮುಂದೆ ಬಿಎಸ್‍ವೈ ಪ್ರಸ್ತಾಪ ಏನು?
ಪಕ್ಷ ನನಗೆ ಎಲ್ಲ ಕೊಟ್ಟಿದೆ, ಪಕ್ಷದ ಆಜ್ಞೆ ಮೀರಲ್ಲ. ನಾಯಕತ್ವ ವಿಚಾರದಲ್ಲಿ ನೀವು ಹೇಳಿದಂತೆ ಕೇಳುವೆ. ಬದಲಾವಣೆ ಮಾಡೋದಾದರೆ ಆಗಸ್ಟ್ 8ರ ನಂತರ ಮಾಡಿ, ಕನಿಷ್ಠ 10 ದಿನದ ಅವಕಾಶ ಕೇಳಿದ್ದಾರೆ ಎನ್ನಲಾಗಿದೆ. ನನ್ನ ಪುತ್ರರ ರಾಜಕೀಯ ಭವಿಷ್ಯದ ವಿಚಾರದಲ್ಲಿ ಗಮನಹರಿಸಿ. ಪರ್ಯಾಯ ನಾಯಕತ್ವ ವಿಚಾರದಲ್ಲಿ ನನ್ನ ಸಲಹೆ ಕೊಡುತ್ತೇನೆ ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಮುಂದಿನ ಚುನಾವಣೆ ಜವಾಬ್ದಾರಿ ನನ್ನ ಮೇಲಿದೆ: ಸಿಎಂ ಬಿಎಸ್‍ವೈ

ಹೈಕಮಾಂಡ್ ಸಂದೇಶ ಏನು?
ಪರ್ಯಾಯ ನಾಯಕತ್ವ ಅವಶ್ಯಕತೆ ಇದ್ದು, ಪ್ರಕ್ರಿಯೆ ಆರಂಭಿಸಿದ್ದೇವೆ. ನೀವು ಮಾಸ್ ಲೀಡರ್, ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. 2 ವರ್ಷದ ಸಂಭ್ರಮ ಪೂರೈಸಿ ಆಗಸ್ಟ್ ಮೊದಲ ವಾರದಲ್ಲಿ ದೆಹಲಿಗೆ ಬನ್ನಿ. ಆಗಸ್ಟ್ ಮೊದಲ ವಾರದಲ್ಲಿ ನಾಯಕತ್ವ ಬದಲಾವಣೆ ಗೊಂದಲದ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಹೈಕಮಾಂಡ್ ಹೇಳಿದೆ ಎನ್ನಲಾಗಿದೆ.

24 ಗಂಟೆಗಳಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಕೇಂದ್ರ ಸಚಿವ ರಾಜ್‍ನಾಥ್ ಸಿಂಗ್ ಮತ್ತು ಅಮಿತ್ ಶಾ ಅವರನ್ನು ಬಿ.ಎಸ್.ಯಡಿಯೂರಪ್ಪ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಬೆಂಗಳೂರಿಗೆ ಹೊರಟ್ಟಿದ್ದ ಯಡಿಯೂರಪ್ಪರಿಗೆ ಕರೆ ಮಾಡಿ ಅಮಿತ್ ಶಾ ತಮ್ಮ ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *