ಜೀವ ರಕ್ಷಣೆಯ ಜತೆಗೆ ಜನ ಜೀವನವನ್ನು ಸಹಜ ಸ್ಥಿತಿಗೆ ತರುವುದು ಅನಿವಾರ್ಯ: ಡಿಸಿಎಂ ಅಶ್ವಥ್ ನಾರಾಯಣ

Public TV
2 Min Read

ಬೆಂಗಳೂರು: ಜನರ ಜೀವ ರಕ್ಷಣೆ ಜತೆಗೆ ಜನ ಜೀವನವನ್ನು ಸಹಜ ಸ್ಥಿತಿಗೆ ತರುವುದು ರಾಜ್ಯ ಸರ್ಕಾರದ ಗುರುತರ ಜವಾಬ್ದಾರಿಯಾಗಿದ್ದು ಇಂದಿನ ಕೇಂದ್ರದ ಮಾರ್ಗಸೂಚಿಯಂತೆ ಕಾರ್ಯ ನಿರ್ವಹಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಹೇಳಿದರು.

ಟಿ.ದಾಸರಹಳ್ಳಿಯ ಶೆಟ್ಟಿಹಳ್ಳಿ ಬಿಜೆಪಿ ಮುಖಂಡ ಸುರೇಶ್ ನೇತೃತ್ವದಲ್ಲಿ ಶ್ರೀ ಸಾಯಿ ಫೌಂಡೇಶನ್ ವತಿಯಿಂದ ಸುಮಾರು 4 ಸಾವಿರ ಬಡವರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು. ಆರ್ಥಿಕ ನಷ್ಟವನ್ನು ಲೆಕ್ಕಿಸದೆ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಹಂತದಲ್ಲಿ ಲಾಕ್‍ಡೌನ್ ಜಾರಿಗೊಳಿಸಿ ದೇಶವನ್ನು ಮಹಾಮಾರಿ ಗಂಡಾಂತರದಿಂದ ಪಾರು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಕೋವಿಡ್ 19 ಸೋಂಕು ಕಟ್ಟಿ ಹಾಕಲು ದೇಶ ಸರ್ವ ಸನ್ನದ್ಧವಾಗಿದ್ದು, ಸೋಂಕು ಪತ್ತೆಗೆ ಅಗತ್ಯವಿರುವ ಪರೀಕ್ಷಾ ಲ್ಯಾಬ್ ಗಳನ್ನು ಸ್ಥಾಪಿಸಲಾಗಿದೆ. ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಕೊರೊನಾವನ್ನು ನಿಯಂತ್ರಿಸಲಾಗುತ್ತಿದೆ. ಪಿಪಿಇ ಕಿಟ್ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಜನರ ಆರೋಗ್ಯ ವರ್ಧನೆಗೆ ಆಪ್ತ ಮಿತ್ರ ಆ್ಯಪ್ ಮೂಲಕ ಈ ಎಲ್ಲ ರೀತಿಯ ನೆರವು ನೀಡಲಾಗುತ್ತಿದ್ದು, ಲಾಕ್‍ಡೌನ್ ಅವಧಿಯಲ್ಲಿ ಬಡವರಿಗೆ ಅಸಹಾಯಕರಿಗೆ ತೊಂದರೆಯಾಗದಂತೆ ಸರ್ಕಾರವೂ ಸಾಕಷ್ಟು ಕ್ರಮ ಕೈಗೊಂಡಿದೆ ಎಂದರು.

ಮಾಜಿ ಶಾಸಕ ಮುನಿರಾಜು ಮಾತನಾಡಿ, ಕ್ಷೇತ್ರದಾದ್ಯಂತ 25 ಬಿಎಸ್‍ವೈ ಕ್ಯಾಂಟೀನ್ ಗಳ ಮೂಲಕ ನಿತ್ಯ 50 ರಿಂದ 60 ಸಾವಿರ ಬಡವರಿಗೆ ಆಹಾರ ಪೂರೈಸಲಾಗುತ್ತಿದೆ. ಜತೆಗೆ ಕಡು ಬಡವರಿಗೆ 60 ಸಾವಿರ ಕಿಟ್ ವಿತರಿಸಲಾಗಿದ್ದು, ಬಿಜೆಪಿ ಮುಖಂಡರು ಕೈಜೋಡಿಸಿದ್ದಾರೆ ಎಂದರು.

ಬಿಜೆಪಿ ಮುಖಂಡ ಶೆಟ್ಟಿಹಳ್ಳಿ ಸುರೇಶ್ ಮಾತನಾಡಿ, ಲಾಕ್‍ಡೌನ್ ದಿನದಿಂದಲೂ ಸುಮಾರು 2000 ಮಂದಿಗೆ ನಿರಂತರವಾಗಿ ತಿಂಡಿ, ಊಟ ನೀಡಲಾಗುತ್ತಿದೆ. ವಾರ್ಡ್ ವ್ಯಾಪ್ತಿಯಲ್ಲಿ ಕಡು ಬಡವರನ್ನು ಗುರುತಿಸಿ ಲಾಕ್‍ಡೌನ್ ವಿಸ್ತರಣೆಯಾದಂತೆಲ್ಲಾ ಬಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಗಿದೆ ಎಂದರು.

ಈ ವೇಳೆ ಡಿಸಿಎಂ ಅಶ್ವಥ್ ನಾರಾಯಣ್ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರ ಪಿಓಪಿಯಲ್ಲಿ ನಿರ್ಮಾಣ ಮಾಡಿರುವ ಮೂರ್ತಿಯನ್ನ ಉಡುಗರೆಯಾಗಿ ನೀಡಿ ಗೌರವಿಸಲಾಯಿತು. ಇನ್ನೂ ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ಎನ್ ಲೋಕೇಶ್, ಶೆಟ್ಟಿಹಳ್ಳಿ ವಾರ್ಡ್ ಬಿಜೆಪಿ ಅಧ್ಯಕ್ಷ ರಮೇಶ್ ಯಾದವ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಿ.ಆರ್ ಸತೀಶ್ ಬಿಜೆಪಿ ಮುಖಂಡರಾದ ಮಂಜುನಾಥ್, ಕೃಷ್ಣಕುಮಾರ್ ಮೊದಲಾದವರಿದ್ದರು.

Share This Article
Leave a Comment

Leave a Reply

Your email address will not be published. Required fields are marked *