ಜೀವದ ಹಂಗು ತೊರೆದು ಸಮವಸ್ತ್ರದಲ್ಲೇ ನೀರಿಗಿಳಿದು ಹಸುವನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

Public TV
1 Min Read

– ಭದ್ರಾ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಹಸು ರಕ್ಷಣೆ

ಚಿಕ್ಕಮಗಳೂರು: ಭದ್ರಾ ಮೇಲ್ದಂಡೆ ಯೋಜನೆಯ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಹಸುವನ್ನ ಅಗ್ನಿಶಾಮಕ ಸಿಬ್ಬಂದಿ ಪ್ರಾಣದ ಹಂಗು ತೊರೆದು ರಕ್ಷಿಸಿರೋ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಸಮತಳ ಗ್ರಾಮದಲ್ಲಿ ನಡೆದಿದೆ.

ಭದ್ರಾ ಮೇಲ್ದಂಡೆ ಯೋಜನೆಯ ನಾಲೆಯುದ್ಧಕ್ಕೂ ಎಲ್ಲೂ ಸರ್ಕಾರ ಬೇಲಿಯನ್ನು ನಿರ್ಮಿಸಿಲ್ಲ. ಆದ್ದರಿಂದ ಮೇಯುವಾಗ ಆಯಾ ತಪ್ಪಿ ಬಿದ್ದ ಹುಸು ಜೀವ ಉಳಿಸಿಕೊಳ್ಳಲು ಹೋರಾಡುತ್ತಿತ್ತು. ವೇಗವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗುತ್ತಲೇ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದ ಹಸುವನ್ನು ಕಂಡು ಸ್ಥಳೀಯರು ಪೊಲೀಸ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿಗಳ ಗಮನಕ್ಕೆ ತಂದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸಮವಸ್ತ್ರದ್ಲಲಿ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ನೀರಿನಲ್ಲಿ ಧುಮುಕಿ ಹಸುವನ್ನ ರಕ್ಷಿಸಿದ್ದಾರೆ.

ಸುಮಾರು ಅರ್ಧಗಂಟೆಗಳ ಕಾಲ ನೀರಿನಲ್ಲಿಯೇ ಹಸುವಿಗೆ ಹಗ್ಗ ಕಟ್ಟಿ ಅದನ್ನು ಕಾಲುವೆಯ ಒಂದು ಬದಿಗೆ ಎಳೆತಂದು ಬಳಿಕ ಸ್ಥಳೀಯರ ಸಹಾಯದಿಂದ ಹುಸುವನ್ನು ರಕ್ಷಿಸಿ ಮೇಲೆ ತಂದಿದ್ದಾರೆ. ಆದರೆ ಕಳೆದ ಮೂರು ದಿನಗಳ ಹಿಂದೆ ಇದೇ ರೀತಿ ಅಜ್ಜಂಪುರದ ಸಮೀಪ ಇದೇ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆಗೆ ಬಿದ್ದಿದ್ದ ಹಸುವೊಂದನ್ನು ಸ್ಥಳೀಯರು ರಕ್ಷಿಸಲು ಮುಂದಾಗಿದ್ದರು. ನೀರು ವೇಗವಾಗಿ ಹರಿಯುತ್ತಿದ್ದ ಕಾರಣ ಹಸುವನ್ನ ಜೆಸಿಬಿ ಮೂಲಕವೂ ರಕ್ಷಿಸಲು ಮುಂದಾಗಿದ್ದರು. ಆದರೆ ಸ್ಥಳೀಯರ ಕೆಲಸ ಫಲ ಕೊಡಲಿಲ್ಲ. ಹಸು ಕೊಚ್ಚಿ ಹೋಗಿ ಸಾವನ್ನಪ್ಪಿತು. ಅಷ್ಟೆ ಅಲ್ಲದೇ ಕಳೆದ ಎರಡು ದಿನಗಳ ಹಿಂದಷ್ಟೆ ಈಜಲು ಹೋಗಿದ್ದ 22 ವರ್ಷದ ಯುವಕನೋರ್ವ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ.

ಕಳೆದ ಮೂರು ತಿಂಗಳಲ್ಲಿ ಸುಮಾರು ನಾಲ್ಕೈದು ಜನ ಇದೇ ಭದ್ರಾ ಮೇಲ್ದಂಡೆ ಯೋಜನೆಗೆ ಬಲಿಯಾಗಿದ್ದಾರೆ. ಹಾಗಾಗಿ ಸ್ಥಳೀಯರು ಸರ್ಕಾರ ವಿರುದ್ಧ ಅಸಮಾಧಾನ ಹೊರಹಾಕಿ, ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆ ನೂರಾರು ಕಿ.ಮೀ. ಸಾಗಿದೆ. ಎಲ್ಲೂ ಕೂಡ ನಾಲೆಯ ಎರಡೂ ಬದಿಗೆ ತಂತಿ ಬೇಲೆ ನಿರ್ಮಿಸಿಲ್ಲ. ಹಾಗಾಗಿ ಸಾವು-ನೋವುಗಳು ಹೆಚ್ಚಾಗುತ್ತಿವೆ. ಆದ್ದರಿಂದ ಸರ್ಕಾರ ಕೂಡಲೇ ನಾಲೆಯ ಎರಡು ಬದಿಗೆ ತಂತಿ ಬೇಲಿ ನಿರ್ಮಿಸಿಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *