ಜಿಲ್ಲಾಡಳಿತದ ಒತ್ತಡದಿಂದ 24 ಜನ ಮೃತಪಟ್ಟಿದ್ದಾರೆ- ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್ ಗಂಭೀರ ಆರೋಪ

Public TV
1 Min Read

ಮೈಸೂರು: ಚಾಮರಾಜನಗರ ಆಮ್ಲಜನಕ ದುರಂತದಿಂದ 24 ಜನ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾರಾ ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಒತ್ತಡಕ್ಕೆ ಈ ಜಿಲ್ಲಾಧಿಕಾರಿಯನ್ನು ಇಟ್ಟುಕೊಂಡಿದ್ದೀರೋ ಗೊತ್ತಿಲ್ಲ. ಚಾಮರಾಜನಗರ- ಮೈಸೂರು ಜಿಲ್ಲಾಡಳಿತಗಳ ವ್ಯತ್ಯಾಸದಿಂದ ಈ ದುರ್ಘಟನೆ ನಡೆದಿದೆ. ಮೈಸೂರಿನಿಂದ ಸಕಾಲಕ್ಕೆ ಸಿಲಿಂಡರ್ ಪೂರೈಕೆ ಆಗಿಲ್ಲ. ಸದರನ್ ಗ್ಯಾಸ್‍ನಿಂದ 2.30ಕ್ಕೆ 90 ಸಿಲಿಂಡರ್ ಹೋಗಿದೆ. ಆದರೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿರುವಂತೆ 220 ಆಮ್ಲಜನಕ ಸಿಲಿಂಡರ್ ಪೂರೈಕೆ ಆಗಿಲ್ಲ ಎಂದಿದ್ದಾರೆ. ಕಾಂಟ್ರ್ಯಾಕ್ಟ್ ಇರುವುದು ಚಾಮರಾಜನಗರ ಜಿಲ್ಲಾಸ್ಪತ್ರೆ, ಸದರನ್ ಮತ್ತು ಪದಕಿ ಗ್ಯಾಸ್ ಏಜೆನ್ಸಿಗಳ ನಡುವೆ. ಕಳುಹಿಸಿಕೊಡಲು ನೀವು ಯಾರು? 220 ಕಳುಹಿಸಿದ್ದೇವೆ ಅಂದರೆ ನಿಮ್ಮ ಕಂಟ್ರೋಲ್ ಇರುವುದನ್ನು ಒಪ್ಪಿಕೊಂಡಂತಾಯಿತು ಎಂದು ಆರೋಪಿಸಿದರು.

ಪ್ರತಿ ದಿನ 300-350 ಸಿಲಿಂಡರ್ ನೀಡುವಂತೆ ಆಕ್ಸಿಜನ್ ಸಿಲಿಂಡರ್ ಕಂಪನಿಗಳ ಜೊತೆ ಕಾಂಟ್ರ್ಯಾಕ್ಟ್ ಮಾಡಿಕೊಂಡಿರುತ್ತದೆ. ಆದರೆ ಈಗ ಒಂದು ವಾರದ ಹಿಂದೆ ಮೈಸೂರು ಜಿಲ್ಲಾಡಳಿತದಿಂದ ಸಭೆ ಮಾಡಿ, ಅಲ್ಲಿನ ಡ್ರಗ್ ಕಂಟ್ರೋಲರ್‍ಗೆ ಸೂಚಿಸಿ, ಚಾಮರಾಜನಗರಕ್ಕೆ 150, ಮಂಡ್ಯ 100 ಸಿಲಿಂಡರ್ ನೀಡುವಂತೆ ತಿಳಿಸುತ್ತಾರೆ. ಅಲ್ಲದೆ ಆಕ್ಸಿಜನ್‍ಗಾಗಿ ಚಾಮರಾಜನಗರದ ವಾಹನ ಬಂದು ನಿಂತರೂ ದಿನಕ್ಕೆ 20, 30, 40 ಹೀಗೆ ಮೂರ್ನಾಲ್ಕು ಬಾರಿ ಅವರು ಬರಬೇಕಿದೆ.

ನಿಮ್ಮ ಭೂ ವ್ಯವಹಾರಗಳಿದ್ದರೆ ಮಾಡಿಸಿಕೊಳ್ಳಿ. ಆದರೆ ಮೈಸೂರಿನಂತಹ ಪ್ರಮುಖ ಜಿಲ್ಲೆಗೆ ಪ್ರಾಮಾಣಿಕ, ಹಿರಿಯ ಅಧಿಕಾರಿಯನ್ನು ನೇಮಿಸಿ. ನಿನ್ನೆ ಚಾಮರಾಜನಗರದಲ್ಲಿ ದುರಂತ ಉಂಟಾಗಿದೆ. ಮೈಸೂರಿನಲ್ಲೂ ಅದ್ವಾನಗಳು ಶುರು ಆಗಿವೆ. ದಯವಿಟ್ಟು ಕೋವಿಡ್ ನಿರ್ವಹಣೆವಾಗಿ ಬೇರೊಬ್ಬ ಅಧಿಕಾರಿಯನ್ನು ನೇಮಿಸಿ ಎಂದು ಮನವಿ ಮಾಡಿದ್ದಾರೆ.

https://www.youtube.com/watch?v=cfPYAUI5zLo

Share This Article
Leave a Comment

Leave a Reply

Your email address will not be published. Required fields are marked *