ಜಿಂದಾಲ್‍ನಲ್ಲಿ ಕೊರೊನಾ ಅಟ್ಟಹಾಸ-ಪಕ್ಕದ ಜಿಲ್ಲೆಗಳಿಗೂ ಕಂಟಕ

Public TV
1 Min Read

ಬಳ್ಳಾರಿ: ರಾಜ್ಯದ ನಂಬರ್ 1 ಉಕ್ಕು ಕಾರ್ಖಾನೆ ಜಿಂದಾಲ್ ಕೊರೊನಾ ಕಾರ್ಖಾನೆಯಾಗಿ ಮಾರ್ಪಾಡಾಗಿದೆ. ದಿನೇ ದಿನೇ ಇಲ್ಲಿನ ನೌಕರರಲ್ಲಿ ಸೋಂಕು ಹೆಚ್ಚಾಗ್ತಾನೆ ಇದೆ. ಈಗಾಗಲೇ ಸೋಂಕಿತರ ಸಂಖ್ಯೆ 249ಕ್ಕೆ ಏರಿದೆ. ಅದರಲ್ಲೂ ಈಗ ಜಿಂದಾಲ್‍ನಿಂದ ಅಕ್ಕಪಕ್ಕದ ಜಿಲ್ಲೆಗಳಾದ ಕೊಪ್ಪಳ, ಗದಗಗಳಲ್ಲೂ ಆತಂಕ ಶುರುವಾಗಿದೆ. ಹೀಗಾಗಿ ಜಿಂದಾಲ್ ಸಂಪೂರ್ಣ ಬಂದ್‍ಗೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಕಳೆದ 2 ಬಾರಿ ನಡೆದ ಸಭೆಯಲ್ಲಿ ಸಚಿವ ಆನಂದ್ ಸಿಂಗ್ ಕೂಡ ಜಿಂದಾಲ್ ನಂಜು ಇದೇ ರೀತಿ ಮುಂದುವರಿದರೆ ಸಂಪೂರ್ಣ ಬಂದ್ ಮಾಡ್ತೀವಿ ಅಂತ ಹೇಳಿದ್ದಾರೆ. ಈ ಬಗ್ಗೆ ಸೋಮವಾರ ಜಿಲ್ಲಾ ಉಸ್ತುವಾರಿಗಳ ತುರ್ತು ಸಭೆ ನಡೆಯಲಿದ್ದು, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಹೀಗಾಗಿ ಈ ಸಭೆ ಮಹತ್ವ ಪಡೆದುಕೊಂಡಿದೆ.

ಇತ್ತ ಜಿಂದಾಲ್ ಉಕ್ಕು ಕಾರ್ಖಾನೆಯನ್ನು ಲಾಕ್‍ಡೌನ್ ಮಾಡಲು ಆಗಲ್ಲ ಅಂತ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಹೇಳಿದ್ದಾರೆ. ಜಿಂದಾಲ್ ಕಾರ್ಖಾನೆ ಸುಮಾರು 30 ಸಾವಿರ ನೌಕರರನ್ನ ಹೊಂದಿದೆ. ಮೇಲಾಗಿ, ಉತ್ಪಾದನಾ ಚಟುವಟಿಕೆಯಲ್ಲಿ ಸದಾ ಸಕ್ರಿಯವಾಗಿರುವ ಈ ಕಾರ್ಖಾನೆಯನ್ನ ಕೇಂದ್ರ ಸರ್ಕಾರದ ಗೈಡ್‍ಲೈನ್ಸ್ ಪ್ರಕಾರ ಲಾಕ್‍ಡೌನ್ ಮಾಡಲು ಬರೋದಿಲ್ಲ ಅಂದಿದ್ದಾರೆ. ಇನ್ನು ಜಿಂದಾಲ್ ಕಾರ್ಖಾನೆಯನ್ನ ಈಗ ದೊಡ್ಡ ಕಂಟೈನ್‍ಮೆಂಟ್ ಝೋನ್ ಆಗಿ ಘೋಷಿಸಲಾಗಿದೆ. ಹೊರಗಿನಿಂದ ನೌಕರರನ್ನ ಕರೆ ತರುವ ಪ್ರಕ್ರಿಯೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ. ನಾನಾ ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಅಂದಾಜು 898 ಜನರನ್ನು ಈಗಾಗಲೇ ಜೆಎಸ್‍ಡಬ್ಲ್ಯು ಗುರುತಿಸಿ, ಅವರಿಗೆ ವೇತನ ಸಹಿತ ರಜೆ ನೀಡಿ ಮನೆಗೆ ಕಳಿಸಿಕೊಟ್ಟಿದೆ.

ಒಂದು ಕಡೆ ಜಿಲ್ಲಾ ಉಸ್ತುವಾರಿ ಸಚಿವರು ಪದೇ ಪದೇ ಜಿಂದಾಲ್ ಬಂದ್ ಮಾಡುವುದಾಗಿ ಹೇಳ್ತಿದ್ದಾರೆ. ಆದ್ರೆ ಜಿಲ್ಲಾಧಿಕಾರಿಗಳು ಜಿಂದಾಲ್ ಸಂಪೂರ್ಣ ಬಂದ್ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಆದ್ರೆ ಸೋಮವಾರ ನಡೆಯುವ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಯಾವ ನಿರ್ಧಾರ ತೆಗೆದುಕೊಳ್ತಾರೋ ಕಾದು ನೋಡಬೇಕಿದೆ

Share This Article
Leave a Comment

Leave a Reply

Your email address will not be published. Required fields are marked *