ಜಾಮೀನು ಅರ್ಜಿ ವಜಾ – ರಿಯಾ ಚಕ್ರವರ್ತಿಗೆ ಜೈಲೇ ಗತಿ

Public TV
2 Min Read

ಮುಂಬೈ: ಕಳೆದ ಜೂನ್‍ನಲ್ಲಿ ಸಾವನ್ನಪ್ಪಿದ ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿಯ ಜಾಮೀನು ಅರ್ಜಿಯನ್ನು ಮುಂಬೈ ಕೋರ್ಟ್ ಇಂದು ವಜಾಗೊಳಿಸಿದೆ.

ಸಾವನ್ನಪ್ಪಿದ ನಟ ಸುಶಾಂತ್‍ಗೆ ರಿಯಾ ಚಕ್ರವರ್ತಿ ಗಾಂಜಾ ಸೇವನೆ ಮಾಡಲು ಗಾಂಜಾ ಖರೀದಿಸುತ್ತಿದ್ದಳು ಎಂಬ ಆರೋಪದ ಮೇಲೆ ಎನ್‍ಸಿಬಿ ಸೋಮವಾರ ರಿಯಾಳನ್ನು ಅರೆಸ್ಟ್ ಮಾಡಿತ್ತು. ನಂತರ ಆಕೆ ಸ್ಥಳೀಯ ಕೋರ್ಟಿನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಳು ಅದು ಕೂಡ ವಜಗೊಂಡಿತ್ತು. ಮತ್ತೆ ಮುಂಬೈ ಕೋರ್ಟಿಗೆ ಆಕೆ ಅರ್ಜಿ ಸಲ್ಲಿಸಿದ್ದಳು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ವಾದವನ್ನು ಆಲಿಸಿದ್ದ ಕೋರ್ಟ್, ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಈ ತೀರ್ಪು ಬಂದಿದ್ದು, ರಿಯಾ ಮತ್ತು ಆಕೆಯ ಸಹೋದರ ಶೌವಿಕ್ ಚಕ್ರವರ್ತಿ ಸೇರಿದಂತೆ ಇನ್ನು ಎಂಟು ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಈ ಮೂಲಕ ಮತ್ತೆ ಸೆಪ್ಟಂಬರ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈಗ ಆಕೆ ಬಾಂಬೆ ಹೈಕೋರ್ಟಿಗೆ ಜಾಮೀನಿಗಾಗಿ ಮೇಲ್ಮನವಿ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ವಿಚಾರಣೆ ವೇಳೆ ತಮ್ಮನನ್ನ ನೋಡಿ ಕಣ್ಣೀರಿಟ್ಟ ರಿಯಾ ಚಕ್ರವರ್ತಿ-25 ಬಿಟೌನ್ ಸ್ಟಾರ್ ಗಳಿಗೆ ಢವಢವ ಶುರು

ಜಾಮೀನಿನ ಅರ್ಜಿಯಲ್ಲಿ ರಿಯಾ, ತನಿಖೆ ವೇಳೆ ಒಪ್ಪಿಕೊಂಡಿದ್ದನ್ನು ತಳ್ಳಿಹಾಕಿದ್ದಾಳೆ. ತನಿಖೆ ವೇಳೆ ನನ್ನನ್ನು ಹೆದರಿಸಿ ತಪ್ಪೊಪ್ಪಿಕೊಳ್ಳುವಂತೆ ಒತ್ತಾಯಿಸಲಾಯಿತು ಎಂದು ತಿಳಿಸಿದ್ದಾಳೆ. ಜೊತೆಗೆ ನಾನು ಏನೂ ತಪ್ಪು ಮಾಡಿಲ್ಲ. ಸುಮ್ಮನೆ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸುತ್ತಿದ್ದಾರೆ. ಈ ವೇಳೆ ಹೊರಗಿನಿಂದ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ. ಇದೇ ವೇಳೆ ತನಿಖೆ ಮಾಡುತ್ತಿರುವುದು ನನ್ನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಜಾಮೀನಿಗೆ ಅರ್ಜಿ ಹಾಕಿದ್ದಳು. ಇದನ್ನೂ ಓದಿ: ಡ್ರಗ್ಸ್ ಅಡಿಕ್ಟ್ ಸುಶಾಂತ್‍ನನ್ನು ಪ್ರೀತಿಸಿದ್ದಕ್ಕೆ ಈ ಶಿಕ್ಷೆ: ರಿಯಾ ಪರ ವಕೀಲ

ಈ ಅರ್ಜಿಯ ವಿರುದ್ಧವಾಗಿ ವಾದ ಮಾಡಿದ್ದ ಎನ್‍ಸಿಬಿ ಪರ ವಕೀಲರು, ರಿಯಾ ತಾನು ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅಲ್ಲದೇ ಈಕೆಯನ್ನು ಹೊರಗೆ ಕಳುಹಿಸಿದರೆ ಸಾಕ್ಷಿ ನಾಶ ಮಾಡುವ ಸಾಧ್ಯತೆ ಇದೆ. ಜೊತೆಗೆ ಈಕೆಗೆ ಇರುವ ಆರ್ಥಿಕ ಬಲದಿಂದ ಸಾಕ್ಷಿಗಳನ್ನು ಗೆಲ್ಲಬಹುದು. ಹೀಗಾಗಿ ತನಿಖೆ ಪೂರ್ತಿಯಾಗುವ ತನಕ ಆಕೆ ನ್ಯಾಯಾಂಗ ಬಂಧನದಲ್ಲಿರುವುದು ಸೂಕ್ತ ಎಂದು ವಾದ ಮಾಡಿದ್ದರು.

ಅಲ್ಲದೇ ಆಕೆ ಸುಶಾಂತ್ ಸಿಂಗ್ ಅವರಿಗೆ ಡ್ರಗ್ ನೀಡುತ್ತಿದ್ದಳು ಎಂಬುದು ತನಿಖೆ ವೇಳೆ ದೃಢಪಟ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ ಆಕೆ ತನ್ನ ಸಹೋದರ ಜೊತೆ ನಡೆಸಿರುವ ವಾಟ್ಸಪ್ ಚಾಟ್ ಕೂಡ ಲಭ್ಯವಾಗಿದೆ. ರಿಯಾ ಡ್ರಗ್ಸ್ ತೆಗೆದುಕೊಳ್ಳುವುದಕ್ಕೆ ಸುಶಾಂತ್ ಅವರ ಡೆಬಿಟ್ ಕಾರ್ಡ್ ಅನ್ನು ಉಪಯೋಗಿಸುತ್ತಿದ್ದದ್ದು ಕೂಡ ತನಿಖೆ ವೇಳೆ ಗೊತ್ತಾಗಿದೆ. ಹೀಗಾಗಿ ಆಕೆಗೆ ಜಾಮಿನು ನೀಡಬಾರದು ಎಂದು ಎನ್‍ಸಿಬಿ ವಾದ ಮಂಡಿಸಿತ್ತು. ಇದನ್ನೂ ಓದಿ: ಸುಶಾಂತ್ ಸಾವಿಗೆ ಭೂಗತ ಲೋಕದ ಲಿಂಕ್: ಸುಬ್ರಮಣಿಯನ್ ಸ್ವಾಮಿ

ರಿಯಾ ಬಂಧನ ಬಳಿಕ ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ನಟಿ ಪರ ವಕೀಲ ಸತೀಶ್ ಮನೋಶಿಂಧೆ, ಓರ್ವ ಡ್ರಗ್ಸ್ ಅಡಿಕ್ಟ್ ಸುಶಾಂತ್ ಸಿಂಗ್ ರಜಪೂತ್ ನನ್ನು ಪ್ರೀತಿ ಮಾಡಿದ ತಪ್ಪಿಗೆ ರಿಯಾ ಈ ಶಿಕ್ಷೆ ಅನುಭವಿಸುತ್ತಿದ್ದಾರೆ. ವಿಚಾರಣೆಗೆ ಸಹಕಾರ ನೀಡಿದರೂ ಕಕ್ಷಿದಾರರ ಬಂಧನವಾಗಿದೆ. ಭಾನುವಾರ, ಸೋಮವಾರ ಸಹ ರಿಯಾ ಅವರನ್ನ ವಿಚಾರಣೆ ನಡೆಸಲಾಗಿದೆ. ಒಬ್ಬ ಮಹಿಳೆ ಹಿಂದೆ ಮೂರು ತನಿಖಾ ಏಜೆನ್ಸಿಗಳು ಬೆನ್ನು ಬಿದ್ದಿವೆ ಎಂದು ಆರೋಪ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *