ಕಾಡು ಪ್ರಾಣಿಗಳ ಭಯದ ಮಧ್ಯೆ ಮರಳು ಕಾಯುತ್ತಿದ್ದಾರೆ ಅಧಿಕಾರಿಗಳು

Public TV
2 Min Read

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ಕಳೆದ ಎರಡ್ಮೂರು ದಿನಗಳ ಹಿಂದೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ, ಅಕ್ರಮ ಮರಳು ಜಪ್ತಿ ಮಾಡಿದ್ದಾರೆ. ಆದರೆ ಜಪ್ತಿ ಮಾಡಿದ ಮರಳು ಸಾಗಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದರಿಂದ ಅಕ್ರಮ ಮರಳು ಕಾಯುವುದೇ ಕಂದಾಯ ಇಲಾಖೆಯ ಸಿಬ್ಬಂದಿಗೆ ಸಂಕಷ್ಟವಾಗಿ ಮಾರ್ಪಟಿದೆ.

ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆದು, ನಾಗನಹಳ್ಳಿ ಸಮೀಪದ ಸರ್ಕಾರಿ ಜಮೀನುಗಳಲ್ಲಿ ಅಕ್ರಮವಾಗಿ ಆಪಾರ ಪ್ರಮಾಣದ ಮರಳು ಸಂಗ್ರಹ ಮಾಡಲಾಗಿದ್ದು, ಮಾಹಿತಿ ತಿಳಿದ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜೂನ್ 30 ರಂದು ದಾಳಿ ನಡೆಸಿ, 20 ಟ್ರ್ಯಾಕ್ಟರ್‍ಗೂ ಅಧಿಕ ಮರಳು ವಶಕ್ಕೆ ಪಡೆದು ಜಪ್ತಿ ಮಾಡಿದ್ದಾರೆ. ಸರ್ಕಾರಿ ಜಮೀನುಗಳಲ್ಲಿ ಮರಳು ಇರುವುದರಿಂದ ದಂಧೆಕೋರರ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಸದ್ಯ ಮರಳಿನ ಬೆಲೆಯ ಪ್ರಕಾರ 1 ಲಕ್ಷ ರೂ.ಗೂ ಅಧಿಕ ಬೆಲೆಬಾಳುವ ಮರಳು ಇದಾಗಿದ್ದು, ಸದ್ಯ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಧಿಕಾರಿಗಳು ದಾಳಿ ನಡೆಸಿ, ಮರಳು ಜಪ್ತಿ ಮಾಡಿ ಈಗಾಗಲೇ 4 ದಿನಗಳು ಕಳೆದಿವೆ. ಆದರೂ ಕೂಡ ಜಪ್ತಿ ಮರಳು ಸಾಗಾಟ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದಿರುವುದು ಕಂದಾಯ ಇಲಾಖೆಯವರಿಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಪಾರ ಪ್ರಮಾಣದ ಮರಳು ಇರುವುರಿಂದ ಅಕ್ರಮ ಮರಳು ಸಾಗಾಟಗಾರರು ರಾತ್ರೋ ರಾತ್ರಿ ಸಾಗಿಸುತ್ತಾರೆ ಎನ್ನುವ ಭಯದಲ್ಲಿ ಕಂದಾಯ ಇಲಾಖೆಯವರು ಹಗಲು, ರಾತ್ರಿ ಎನ್ನದೆ ಮರಳು ರಾಶಿಗಳನ್ನು ಕಾಯಬೇಕಾಗಿದೆ. ರಾತ್ರಿ ವೇಳೆಯಲ್ಲಿ ಮರಳು ರಾಶಿಗಳ ಮುಂದೆಯೇ ಗ್ರಾಮ ಸಹಾಯಕರು ಮಲಗುವ ಪರಿಸ್ಥಿತಿ ಉಂಟಾಗಿದೆ. ರಾತ್ರಿ ವೇಳೆ ಒಬ್ಬಂಟಿಯಾಗಿ ಮಲಗುವುದರಿಂದ ಕಾಡು ಪ್ರಾಣಿಗಳ ಕಾಟವನ್ನೂ ಸಿಬ್ಬಂದಿ ಎದುರಿಸುತ್ತಿದ್ದಾರೆ. ಸದ್ಯ ಜೀವ ಭಯದಲ್ಲಿಯೇ ಕಾಯಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೌನ: ಟಾಸ್ಕ್ ಫೋರ್ಸ್ ಸಮಿತಿಯಲ್ಲಿನ ಅಧಿಕಾರಿಗಳು ದಾಳಿ ನಡೆಸಿ, ಮರಳು ಜಪ್ತಿ ಮಾಡಿದರೆ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಆಗಮಿಸಿ, ಇರುವ ಮರಳಿನ ಪ್ರಮಾಣ, ಅಂದಾಜು ಬೆಲೆಯನ್ನು ನಿಗದಿ ಮಾಡಿ, ಸುರಕ್ಷಿತವಾಗಿರುವ ಬೇರೆ ಕಡೆಗೆ ಸ್ಥಳಾಂತರಿಸಬೇಕು. ನಂತರ ಅದಕ್ಕೆ ಟೆಂಡರ್ ಕರೆದು ಮಾರಾಟ ಮಾಡಬೇಕು. ಆದರೆ ಆದ್ಯಾವುದು ಇಲ್ಲಿ ನಡೆಸಯುತ್ತಿಲ್ಲ. ದಾಳಿ ನಡೆಸಿ, ಮೂರು ದಿನ ಕಳೆದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಇದು ಸದ್ಯ ಗ್ರಾಮಸ್ಥರಲ್ಲಿ ನಾನಾ ಅನುಮಾನಗಳಿಗೆ ಕಾರಣವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *