ಶಿವಮೊಗ್ಗ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಷ್ಟೇ ಎಚ್ಚರಿಕೆ ಕ್ರಮ ವಹಿಸಿದರೂ ದೇಶ ಹಾಗೂ ರಾಜ್ಯದಲ್ಲಿ ದಿನೇ ದಿನೇ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಜನರ ಬೇಜವಾಬ್ದಾರಿತನ ಸಹ ಕಾರಣವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಕೊರೊನಾ ಬಂದ ಆರಂಭದ ದಿನದಿಂದಲೂ ಜನತೆಗೆ ಜಾಗೃತೆಯಿಂದಿರಿ, ಎಚ್ಚರಿಕೆ ವಹಿಸಿ ಅಂತ ನೂರು ಬಾರಿ ಹೇಳಿದರೂ ಗಮನಿಸಿಲಿಲ್ಲ ಅಂದರೆ ಏನು ಮಾಡುವುದಕ್ಕೆ ಆಗುತ್ತೆ ಎಂದು ಗರಂ ಆದರು.
ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತ ಸಾಕಷ್ಟು ಶ್ರಮ ಹಾಕುತ್ತಿದೆ. ಜಿಲ್ಲೆಯಲ್ಲಿ ಅಲ್ಲೊಂದು ಇಲ್ಲೊಂದು ಏರಿಯಾದಲ್ಲಿ ಕೊರೊನಾ ಜಾಸ್ತಿ ಆಗುತ್ತಿದೆ. ಜನರಿಗೆ ನಾನು ಮತ್ತೊಮ್ಮೆ ಪ್ರಾರ್ಥನೆ ಮಾಡುತ್ತೇನೆ. ನಿಮ್ಮ ಬೇಜವಾಬ್ದಾರಿತನ ನಿಮಗೆ ವೈಯಕ್ತಿಕವಾಗಿ ತೊಂದರೆ ಆಗುತ್ತೆ. ಕುಟುಂಬಕ್ಕೆ ಹಾಗೂ ಸಮಾಜಕ್ಕೆ ತೊಂದರೆ ಆಗುತ್ತೆ. ಅದಷ್ಟು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿಕೊಂಡು ಕೊರೊನಾ ಓಡಿಸುಲು ಪ್ರಯತ್ನಿಸಬೇಕಿದೆ ಎಂದು ಸಚಿವರು ತಿಳಿಸಿದರು.