ಗದಗ: ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ ಪಾಟೀಲ್ ಇಂದು ಕುಟುಂಬ ಸಮೇತವಾಗಿ ತಾಲೂಕಿನ ಹುಲಕೋಟಿ ಕೆ.ಎಚ್. ಪಾಟೀಲ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದುಕೊಂಡರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಚರಾಜ್ಯ ಚುನಾವಣೆ ಪ್ರಜಾಪ್ರಭುತ್ವದಲ್ಲಿ ಮಹತ್ವ ಚುನಾವಣೆ ಆಗಬೇಕು. ಚುನಾವಣೆ ಮೌಲ್ಯಗಳನ್ನು ಅಲ್ಲಗಳೆಯುವ ರೀತಿಯಲ್ಲಿ ಬಿಜೆಪಿ ವಾತಾವರಣ ಸೃಷ್ಟಿಮಾಡುತ್ತಿದೆ. ಬಿಜೆಪಿ ಜನರಿಗೆ ತಪ್ಪು ತಿಳುವಳಿಕೆ ಮೂಡಿಸುತ್ತಿದೆ. ಚುನಾವಣೆ ನೀತಿ ವಿರುದ್ಧವಾದ ಧರ್ಮ, ಜಾತಿ, ದೇವರನ್ನು ನಡುವೆ ತರುತ್ತಿದ್ದಾರೆ. ಚುನಾವಣಾ ಆಯೋಗ ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಚುನಾವಣಾ ಆಯೋಗ ಹಲ್ಲು ಇಲ್ಲದ ಹಾವಿನಂತೆ ಸುಮ್ಮನೆ ಬಿದ್ದುಕೊಂಡಿದೆ. ಮೋದಿ ಅಲೆ ಈ ಬಾರಿ ನಿರ್ನಾಮ ಆಗಬೇಕು. ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗ ಎಲ್ಲವೂ ಬಿಜೆಪಿಗೆ ತಕ್ಕಪಾಠ ಕಲಿಸುತ್ತದೆ ಎಂದರು.
ಕೊರೊನಾ ವಿಷಯದ ಬಗ್ಗೆ ಮುಂಜಾಗ್ರತೆ ವಹಿಸಿ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು. ಕೊರೊನಾ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ಯಾವುದೇ ಕಾರಣಕ್ಕೂ ಅಲಕ್ಷ್ಯ ಸಲ್ಲದು. ತಜ್ಞರು ಹೇಳಿರುವುದನ್ನು ಸರ್ಕಾರ ಗಂಭೀರವಾಗಿ ಪಾಲಿಸಬೇಕು. ಮೊದಲ ಬಾರಿ ಆದಂತೆ ಈ ಬಾರಿಯೂ ನಿರ್ಲಕ್ಷ್ಯ ಮಾಡಬೇಡಿ ಅಂತ ಸರ್ಕಾರಕ್ಕೆ ಸಲಹೆ ನೀಡಿದರು.
ನಂತರ ರಾಜ್ಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ರಣತಂತ್ರವೇನಿಲ್ಲ. ಜನರಿಗೆ ಸುಳ್ಳು ಭರವಸೆ, ತೊಂದರೆ, ಜನರ ಬದುಕು ಅಸಹನೀಯ ಮಾಡಿರುವುದು, ಬೆಲೆ ಏರಿಕೆ ಬಗ್ಗೆ ಜನರಿಗೆ ಮನವರಿಕೆ ಮಾಡುವ ಮೂಲಕ ಜಾಗೃತಿಯಿಂದ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಬಿಜೆಪಿ ಹೇಳಿದಂತೆ ಕಾಂಗ್ರೆಸ್ ಮನೆಯೊಂದು 3 ಬಾಗಿಲು ಅಲ್ಲಾ. ಕಾಂಗ್ರೆಸ್ ಒಂದೇ ಬಾಗಿಲು, ಒಬ್ಬಳೇ ಅಧಿನಾಯಕಿ, ಒಂದೇ ಪಕ್ಷ, ಒಂದೇ ತತ್ವ ಸಿದ್ಧಾಂತ. ಕಾಂಗ್ರೆಸ್ 2, 3, 4 ಅಂತ ಏನಾದರೂ ಅಂದುಕೊಳ್ಳಿ, ಇದು ಬಿಜೆಪಿ ಸೃಷ್ಟಿ ಹೊರತು ಮತ್ತೆನಲ್ಲ ಎಂದರು.
ಕೊರೊನಾ ನಡುವೆಯೂ ದೇಶದ 100 ಜನ ಶ್ರೀಮಂತರ ಆದಾಯ ಶೇ.35ರಷ್ಟು ಹೆಚ್ಚಾಗಿದ್ದು, ಮೋದಿಯ ಕೊಡುಗೆ. ಭ್ರಷ್ಟರನ್ನು ಮಟ್ಟಹಾಕುವ, ಲಗಾಮು ಹಾಕುವ ಕೆಲಸ ಮೊದಲು ಆಗಲಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.