ಚೀನಾ-ಭಾರತ ಸಂಘರ್ಷ: ಹುತಾತ್ಮರಾದ 20 ಯೋಧರ ಸ್ಮಾರಕ ಗಲ್ವಾನ್ ವ್ಯಾಲಿಯಲ್ಲೇ ನಿರ್ಮಾಣ

Public TV
2 Min Read

ಲಡಾಖ್: ಚೀನಾ-ಭಾರತದ ಸಂಘರ್ಷದ ವೇಳೆ ಹುತಾತ್ಮರಾದ 20 ವೀರ ಯೋಧರ ನೆನಪಿಗಾಗಿ ಅಂತರಾಷ್ಟ್ರೀಯ ಗಡಿಯ ಹತ್ತಿರವೇ ಸ್ಮಾರಕ ನಿಮಾರ್ಣ ಮಾಡಲಾಗಿದೆ.

ಗಲ್ವಾನ್ ವ್ಯಾಲಿಯಲ್ಲಿ ಭಾರತ-ಚೀನಾ ಸಂಘರ್ಷದ ವೇಳೆ ಯೋಧರು ಹುತಾತ್ಮರಾಗಿ ಸುಮಾರು ನಾಲ್ಕು ತಿಂಗಳು ಕಳೆದಿದ್ದು, ಇದೀಗ ಸೇನೆಯಿಂದ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಸಂಘರ್ಷದ ವೇಳೆ ವೀರ ಮರಣ ಅಪ್ಪಿದ ಕೆಚ್ಚೆದೆಯ 20 ಸೈನಿಕ ನೆನಪಿಗಾಗಿ ಅಂತರಾಷ್ಟ್ರೀಯ ಗಡಿಯ ಬಳಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಚೈನೀಸ್ ಪೀಪಲ್ಸ್ ಲಿಬರೇಶನ್ ಆರ್ಮಿ ವಿರುದ್ಧ ಸೆಣಸಾಟದಲ್ಲಿ ಗಲ್ವಾನ್ ವ್ಯಾಲಿ ಬಳಿ ಜೂನ್ 15-16ರ ರಾತ್ರಿ ನಡೆದ ಸಂಘರ್ಷದ ವೇಳೆ ಯೋಧರು ಹುತಾತ್ಮರಾಗಿದ್ದಾರೆ. ವೈ-ಜಂಕ್ಷನ್ ಬಳಿಯ ಅಬ್ಸರ್ವೇಶನ್ ಪೋಸ್ಟ್ ಬಳಿ ಅತಿಕ್ರಮಿಸುತ್ತಿದ್ದ ಚೀನಿ ಸೈನಿಕರನ್ನು ಹೊರಹಾಕುವ ಸಂದರ್ಭದಲ್ಲಿ ಘರ್ಷಣೆ ನಡೆದಿತ್ತು. ಈ ವೇಳೆ 20 ಯೋಧರು ಹುತಾತ್ಮರಾಗಿದ್ದರು.

ಲಡಾಖ್‍ನ ಡರ್ಬುಕ್, ಶ್ಯೋಕ್ ಮತ್ತು ದೌಲತ್ ಬೇಗ್ ಓಲ್ಡಿ ಸಂಪರ್ಕಿಸುವ ಕಾರ್ಯತಂತ್ರದ ರಸ್ತೆಯಲ್ಲಿನ ಕೆಎಂ-120 ಪೋಸ್ಟ್ ಬಳಿಯ ಯುನಿಟ್ ಲೆವೆಲ್ ಬಳಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ. ಎಲ್ಲ 20 ಸೈನಿಕರ ಹೆಸರು ಹಾಗೂ ಜೂನ್ 15ರ ಕಾರ್ಯಾಚರಣೆಯ ವಿವರಗಳನ್ನು ಈ ಸ್ಮಾರಕ ಒಳಗೊಂಡಿದೆ.

ಭಾರತ-ಚೀನಾದ ಸೈನಿಕರ ನಡುವೆ ಜೂನ್ 15ರ ರಾತ್ರಿ ಲಡಾಖ್‍ನ ಗಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ನಮ್ಮ ಸೇನೆಯ 20 ಯೋಧರು ಹುತಾತ್ಮರಾಗಿದ್ದರು. ಈ ಯೋಧರಲ್ಲಿ ಗರಿಷ್ಠ 13 ಮಂದಿ ಬಿಹಾರದ ಎರಡು ವಿಭಿನ್ನ ರೆಜಿಮೆಂಟ್‍ಗಳಿಂದ ಬಂದವರಾಗಿದ್ದರು. ಹುತಾತ್ಮ ಕರ್ನಲ್ ಸಂತೋಷ್ ಬಾಬು ಅವರು ಕೂಡ ಬಿಹಾರ್ ರೆಜಿಮೆಂಟ್‍ನವರಾಗಿದ್ದರು.

ಹುತಾತ್ಮ ಯೋಧರು
ಕರ್ನಲ್ ಬಿ. ಸಂತೋಷ್ ಬಾಬು, ಹವಾಲ್ದಾರ್ ಸುನಿಲ್ ಕುಮಾರ್, ಕಾನ್ಸ್‌ಟೇಬಲ್‌ ಕುಂದನ್ ಕುಮಾರ್, ಕಾನ್ಸ್‍ಟೇಬಲ್ ಅಮನ್ ಕುಮಾರ್, ದೀಪಕ್ ಕುಮಾರ್, ಕಾನ್ಸ್‍ಟೇಬಲ್ ಚಂದನ್ ಕುಮಾರ್, ಕಾನ್ಸ್‌ಟೇಬಲ್‌ ಗಣೇಶ ಕುಂಜಮ್, ಕಾನ್ಸ್‌ಟೇಬಲ್ ಗಣೇಶ ರಾಮ್, ಕಾನ್ಸ್‌ಟೇಬಲ್ ಕೆ.ಕೆ. ಓಜಾ, ಕಾನ್ಸ್‍ಟೇಬಲ್ ರಾಜೇಶ್ ಒರಾನ್, ಸಿಪಾಯಿ ಸಿ.ಕೆ.ಪ್ರಧಾನ್, ನಾಯಬ್ ಸುಬೇದಾರ್ ನಂದುರಾಮ್, ಕಾನ್ಸ್‌ಟೇಬಲ್ ಗುರ್ತೇಜ್ ಸಿಂಗ್, ಸಿಪಾಯಿ ಅಂಕುಷ್, ಕಾನ್ಸ್‌ಟೇಬಲ್ ಗುರ್ವಿಂದರ್ ಸಿಂಗ್, ನಾಯಬ್ ಸುಬೇದಾರ್ ಸತ್ನಮ್ ಸಿಂಗ್, ನಾಯಬ್ ಸುಬೇದಾರ್ ಮಂದೀಪ್ ಸಿಂಗ್, ಕಾನ್ಸ್‍ಟೇಬಲ್ ಜೈಕಿಶೋರ್ ಸಿಂಗ್, ಹವಾಲ್ದಾರ್ ಬಿಪುಲ್ ರಾಯ್, ಹವಾಲ್ದಾರ್ ಕೆ.ಪಳನಿ ಹುತಾತ್ಮ ಯೋಧರಾಗಿದ್ದಾರೆ. ಇವರೆಲ್ಲರ ಹೆಸರು ಹಾಗೂ ಘಟನೆಯ ಮಾಹಿತಿಯನ್ನು ಸ್ಮಾರಕದ ಮೇಲೆ ಕೆತ್ತಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *