ಚೀನಾಗೆ ಮತ್ತೆ ಹೊಡೆತ – ಮಾರುಕಟ್ಟೆಗೆ ಬರಲಿದೆ 33 ಕೋಟಿ ಸ್ವದೇಶಿ ಹಣತೆ

Public TV
2 Min Read

ನವದೆಹಲಿ: ರಕ್ಷಾ ಬಂಧನದ ಸಮಯದಲ್ಲಿ ಚೀನಾಗೆ ತಿರುಗೇಟು ನೀಡಿದ್ದ ಭಾರತ ಈಗ ದೀಪಾವಳಿ ಸಮಯದಲ್ಲೂ ಆರ್ಥಿಕವಾಗಿ ಹೊಡೆತ ನೀಡಲು ಮುಂದಾಗುತ್ತಿದೆ.

ಈ ವರ್ಷದ ದೀಪಾವಳಿಗೆ 33 ಕೋಟಿ ಪರಿಸರ ಸ್ನೇಹಿ ಹಣತೆ ಮಾರುಕಟ್ಟೆಗೆ ಬರಲಿದೆ. ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭಭಾಯ್ ಕಥಿರಿಯಾ ಈ ವಿಚಾರವನ್ನು ತಿಳಿಸಿದ್ದು, ಮುಂದಿನ ತಿಂಗಳು 33 ಕೋಟಿ ಪರಿಸರ ಸ್ನೇಹಿ ಹಣತೆಗಳು ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಿದ್ದಾರೆ.

ಸ್ವದೇಶಿ ಉತ್ಪನ್ನಗಳ ರಕ್ಷಣೆ ಮತ್ತು ಉತ್ತೇಜನಕ್ಕೆ ಈ ಆಯೋಗವನ್ನು 2019ರಲ್ಲಿ ಸ್ಥಾಪನೆ ಮಾಡಲಾಗಿದೆ. ಈಗ ದೇಶದೆಲ್ಲೆಡೆ ಸಗಣಿಯಿಂದ ತಯಾರಾದ ಉತ್ಪನ್ನಗಳನ್ನು ಉತ್ತೇಜಿಸಲು ಆಯೋಗ ಮುಂದಾಗುತ್ತಿದೆ.

ಚೀನಾದಲ್ಲಿ ತಯಾರಾದ ಹಣತೆಯನ್ನು ಈ ಬಾರಿ ತಿರಸ್ಕರಿಸಿ ಮೇಕ್‌ ಇನ್‌ ಇಂಡಿಯಾ ಅಭಿಯಾನದಲ್ಲಿ ತಯಾರಾಗಿರುವ ಹಣತೆಯನ್ನು ಬಳಸಬೇಕು. ಈ ಮೂಲಕ ದೇಶದ ಗ್ರಾಮೀಣ ಜನರ ಕೆಲಸವನ್ನು ಪ್ರೋತ್ಸಾಹಿಸಬೇಕು ಎಂದು ಜನರಲ್ಲಿ ಆಯೋಗ ಕೇಳಿಕೊಂಡಿದೆ. ಇದನ್ನೂ ಓದಿ: ಈ ವರ್ಷ ಮೇಡ್‌ ಇನ್‌ ಇಂಡಿಯಾ ರಾಖಿ – ಚೀನಾಗೆ 4 ಸಾವಿರ ಕೋಟಿ ನಷ್ಟ

 

ಈಗಾಗಲೇ 15 ರಾಜ್ಯಗಳು ಹಣತೆ ತಯಾರಿಸಲು ಒಪ್ಪಿಕೊಂಡಿವೆ. ಆಯೋಗವೇ ನೇರವಾಗಿ ಹಣತೆಯನ್ನು ತಯಾರು ಮಾಡುವುದಿಲ್ಲ. ಬದಲಾಗಿ ಸ್ವಸಹಾಯ ಗುಂಪುಗಳಿಗೆ ಹಣತೆ ತಯಾರಿಸಲು ತರಬೇತಿ ನೀಡುವ ಕೆಲಸ ಮಾಡುತ್ತಿದೆ.

ಸ್ವದೇಶಿ ಉತ್ಪನ್ನಗಳನ್ನು ತಯಾರಿಸುವ ನಿಟ್ಟಿನಲ್ಲಿ ಕೃಷಿಕರು, ಹೈನುಗಾರರು ಮತ್ತು ಉದ್ಯಮಿಗಳಿಗೆ ಸರಣಿ ವೆಬಿನಾರ್‌ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಎಂದು ರಾಷ್ಟ್ರೀಯ ಕಾಮಧೇನು ಆಯೋಗ ತಿಳಿಸಿದೆ.

ಗಲ್ವಾನ್‌ ಕಣಿವೆಯಲ್ಲಿ ನಡೆದ ಘರ್ಷಣೆಯ ಬಳಿಕ ಭಾರತ ಒಂದೊಂದೆ ನಿರ್ಧಾರದ ಕೈಗೊಳ್ಳುವ ಮೂಲಕ ಚೀನಾಗೆ ಶಾಕ್‌ ನೀಡುತ್ತಿದ್ದು, ಈ ಬಾರಿ ಭಾರೀ ಪ್ರಮಾಣದಲ್ಲಿ ಸ್ಬದೇಶಿ ರಾಖಿಗಳು ತಯಾರಾಗಿತ್ತು.

ಪ್ರತಿ ವರ್ಷ ವರ್ತಕರು ರಕ್ಷಾ ಬಂಧನದಂದು ಚೀನಾದಿಂದ ಆಮದು ಮಾಡಿಕೊಡ ರಾಖಿಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ ಜೂ.10 ರಂದು ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ರಾಖಿ ಹಬ್ಬವನ್ನು ಹಿಂದೂಸ್ಥಾನಿ ರಾಖಿ ಎಂದು ಆಚರಣೆ ಮಾಡಬೇಕೆಂದು ಕರೆ ನೀಡಿತ್ತು.

ಸಿಎಐಟಿಯ ರಾಷ್ಟ್ರೀಯ ಅಧ್ಯಕ್ಷ ಬಿಸಿ ಭಾರ್ತಿಯಾ ಪ್ರತಿಕ್ರಿಯಿಸಿ, ಈ ವರ್ಷ ಒಂದೇ ಒಂದು ರಾಖಿಯನ್ನೂ ಚೀನಾದಿಂದ ಈ ಬಾರಿ ಆಮದು ಮಾಡಿಕೊಂಡಿಲ್ಲ. ಪ್ರತಿ ವರ್ಷ 6 ಸಾವಿರ ಕೋಟಿ ರೂ. ಮೌಲ್ಯದ 50 ಕೋಟಿ ರಾಖಿಗಳು ಮಾರಾಟವಾಗುತ್ತಿತ್ತು. ಇವುಗಳ ಪೈಕಿ 4 ಸಾವಿರ ಕೋಟಿ ಮೌಲ್ಯದ ಚೀನಾ ರಾಖಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು ಎಂದು ತಿಳಿಸಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *