ಚಿರು ಮತ್ತೆ ಉದಯಿಸ್ತಿದ್ದಾರೆ – ಅಭಿಮಾನಿಗಳಿಗೆ ಮೇಘನಾರಿಂದ ಗುಡ್‍ನ್ಯೂಸ್

Public TV
2 Min Read

ಬೆಂಗಳೂರು: ಇತ್ತೀಚೆಗಷ್ಟೆ ದಿವಗಂತ ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನಡೆದಿದೆ. ಇದರ ಬೆನ್ನಲ್ಲೆ ನಟಿ ಮೇಘನಾ ಚಿರು ಅಭಿಮಾನಿಗಳಿಗೆ ಗುಡ್‍ನ್ಯೂಸ್ ನೀಡಿದ್ದಾರೆ.

ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ಶಿವಾರ್ಜುನ. ಈ ಸಿನಿಮಾ ಇದೇ ಅಕ್ಟೋಬರ್ 16ರಂದು ಶುಕ್ರವಾರ ಮತ್ತೆ ಬಿಡುಗಡೆಯಾಗುತ್ತಿದೆ. ಈ ಸಿಹಿಸುದ್ದಿಯನ್ನು ಚಿರು ಪತ್ನಿ ಮೇಘನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

“ಚಿರು ಮತ್ತೆ ಉದಯಿಸುತ್ತಿದ್ದಾರೆ, ಅದಕ್ಕೆ ಕಾರಣ ಅಕ್ಟೋಬರ್ 16ರಂದು ಶಿವಾರ್ಜುನ ಸಿನಿಮಾ ಮತ್ತೆ ಬಿಡುಗಡೆಯಾಗುತ್ತಿದೆ” ಎಂದು ಕ್ಯಾಪ್ಶನ್ ಹಾಕಿಕೊಂಡಿದ್ದಾರೆ. ಜೊತೆಗೆ ಸಿನಿಮಾ ಪೋಸ್ಟರನ್ನು ಪೋಸ್ಟ್ ಮಾಡಿದ್ದಾರೆ. ಈ ಸಿನಿಮಾವನ್ನು ಮತ್ತೆ ರಿಲೀಸ್ ಮಾಡಲು ಮತ್ತೊಂದು ಕಾರಣವೂ ಇದೆ. ಅದೇನೆಂದರೆ ಇದೇ ಅ.17ರಂದು ಚಿರಂಜೀವಿ ಹುಟ್ಟುಹಬ್ಬ ಇದೆ. ಈ ಹಿನ್ನೆಲೆಯಲ್ಲಿ ಚಿರುವಿನ ಕೊನೆಯ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

‘ಸಿಂಗ’ ಮತ್ತು ‘ಖಾಕಿ’ಯಲ್ಲಿ ಅಬ್ಬರಿಸಿದ್ದ ಚಿರು ‘ಶಿವಾರ್ಜುನ’ನಾಗಿ ಪ್ರೇಕ್ಷಕರನ್ನು ರಂಜಿಸಿದ್ದರು. ಈ ಸಿನಿಮಾ ಶಿವತೇಜಸ್ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ನಿರ್ಮಾಪಕ ಶಿವಾರ್ಜುನ್ ನಿರ್ಮಿಸಿದ್ದಾರೆ. ಇದೊಂದು ಕಮರ್ಷಿಯಲ್ ಎಂಟರ್ ಟೈನ್ಮೆಂಟ್ ಸಿನಿಮಾವಾಗಿದೆ. ಕಾಮಿಡಿ, ಫ್ಯಾಮಿಲಿ, ಎಮೋಷನ್ ಹೀಗೆ ಎಲ್ಲಾ ಅಂಶಗಳು ಈ ಸಿನಿಮಾದಲ್ಲಿ ಅಡಕವಾಗಿದೆ. ಕಿಶೋರ್, ಸಾಧುಕೋಕಿಲಾ, ನಯನಾ, ಕುರಿ ಪ್ರತಾಪ್ ಸೇರಿದಂತೆ ಕಾಮಿಡಿ ಬಳಗವೇ ಸಿನಿಮಾದಲ್ಲಿದೆ.

ಧ್ರುವ ಸರ್ಜಾ ಹುಟ್ಟುಹಬ್ಬದ ವಿಚಾರವಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿದ್ದ ಮೇಘನಾ, “ನನ್ನ ಕಷ್ಟದ ಸಮಯದಲ್ಲಿ ನೀನು ಹೇಗೆ ನನ್ನ ಜೊತೆಯಲ್ಲಿ ಗಟ್ಟಿಯಾಗಿ ನಿಂತಿದ್ದೆ ಹಾಗೆಯೇ ನಾನು ಕೂಡ ಶಾಶ್ವತವಾಗಿ ನಿನ್ನ ಪಕ್ಕ ನಿಲ್ಲುತ್ತೇನೆ. ಪ್ರಾಮಿಸ್ ಬರ್ತ್ ಡೇ ಬಾಯ್. ಸದಾ ನೀನು ಖುಷಿಯಾಗಿರು ಎಂದು ಆಶೀಸುತ್ತೇನೆ. ನಮ್ಮ ಚಿರು ನಕ್ಕಂತೆ ನೀನು ನಗುತ್ತಿರು. ಹ್ಯಾಪಿಸ್ಟ್ ಬರ್ತ್ ಡೇ ಬಿಲ್ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದರು.

https://www.instagram.com/p/CGFApjZHS0U/?igshid=1kqfuzdu5e83a

ಭಾನುವಾರವಷ್ಟೇ ಧ್ರುವ ಸರ್ಜಾ ಅತ್ತಿಗೆ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಮನೆಯಲ್ಲಿಯೇ ಸರಳವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಕುಟುಂಬದವರು ಮತ್ತು ಕೆಲ ಆಪ್ತರು ಮಾತ್ರ ಸೀಮಂತ ಶಾಸ್ತ್ರಕ್ಕೆ ಆಗಮಿಸಿದ್ದರು. ಜೊತೆಗೆ ಚಿರು ಇಲ್ಲ ಎಂಬ ನೋವು ಮೇಘನಾಗೆ ಕಾಡದಿರಲಿ ಎಂದು ಚಿರು ಅವರ ದೊಡ್ಡ ಫೋಟೋವನ್ನು ಪಕ್ಕದಲ್ಲೇ ಇಟ್ಟು ಸೀಮಂತ ಮಾಡಿದ್ದು ವಿಶೇಷವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *