ಚಾರ್ಮಾಡಿ ಘಾಟಿಯಲ್ಲಿ ಮೂರು ಗಂಟೆ ಟ್ರಾಫಿಕ್ ಜಾಮ್- ಸಂಜೆ 7ರ ಬಳಿಕ ಯಾರೂ ಬರಬೇಡಿ

Public TV
1 Min Read

ಚಿಕ್ಕಮಗಳೂರು: ಸಂಜೆ ಏಳು ಗಂಟೆಯ ನಂತರ ಚಾರ್ಮಾಡಿ ಘಾಟ್ ಮೂಲಕ ಮಂಗಳೂರು-ಧರ್ಮಸ್ಥಳಕ್ಕೆ ತೆರಳಲು ಯಾರೂ ಬರಬೇಡಿ. ಬಂದರೆ ಇಡೀ ರಾತ್ರಿ ಚಾರ್ಮಾಡಿ ಘಾಟಿಯ ಚಳಿಯಲ್ಲಿ ನಡುಗಬೇಕು. ಜೊತೆಗೆ, ಬೆಳಗ್ಗೆ ಗಾಡಿಗಳು ಹೊರಟಾಗಲೂ ಮೂರ್ನಾಲ್ಕು ಗಂಟೆ ಚಾರ್ಮಾಡಿ ಘಾಟಿಯಲ್ಲಿ ನಿಲ್ಲಬೇಕಾಗುತ್ತದೆ. ಅಷ್ಟೊಂದು ಟ್ರಾಫಿಕ್ ಜಾಮ್ ಚಾರ್ಮಾಡಿ ಘಾಟಿಯಲ್ಲಿ ಸಂಭವಿಸಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ಮಳೆ ಅಬ್ಬರ ಜೋರಿದೆ. ಇಂದು-ನಿನ್ನೆ ಮಳೆ ಪ್ರಮಾಣ ತಗ್ಗಿದ್ದರೂ ಚಾರ್ಮಾಡಿಯ ದಟ್ಟ ಕಾನನದಲ್ಲಿ ವರುಣನ ಅಬ್ಬರ ನಿಂತಿಲ್ಲ. ಹೀಗಾಗಿ ಕಳೆದ ಎರಡ್ಮೂರು ವರ್ಷದಿಂದ ಪ್ರತಿ ವರ್ಷ ಚಾರ್ಮಾಡಿಯಲ್ಲಿ ಭೂ ಕುಸಿತ ಸಾಮಾನ್ಯವಾಗಿತ್ತು. ದುರಸ್ಥಿಗೆ ತಿಂಗಳುಗಳೇ ಬೇಕಾಗಿತ್ತು. ಹಾಗಾಗಿ ಜಿಲ್ಲಾಡಳಿತ ಮುಂಜಾಗೃತ ಕ್ರಮವಾಗಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಬಾರದೆಂದು ಚಾರ್ಮಾಡಿಯಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್ ಜರ್ನಿಗೆ ಸಂಪೂರ್ಣ ಬ್ರೇಕ್ ಹಾಕಿತ್ತು. ಆದರೂ ಗೊತ್ತಿದ್ದೋ, ಗೊತ್ತಿಲ್ಲದೆಯೋ ಬರುವ ಪ್ರವಾಸಿಗರು-ಪ್ರಯಾಣಿಕರಿಗೆ ಬಣಕಲ್ ಪೊಲೀಸರು ಯಾರನ್ನೂ ಬಿಡದೆ ಚಳಿಯಲ್ಲಿ ನಡುಗಿಸಿದ್ದರು. ನಿನ್ನೆ ರಾತ್ರಿ ಸಹ ಸುಮಾರು 200 ವಾಹನಗಳು ಚಾರ್ಮಾಡಿ ಘಾಟಿ ಆರಂಭದ ಕೊಟ್ಟಿಗೆಹಾರದಲ್ಲಿ ಪರೇಡ್ ನಡೆಸಿದ್ದವು. ದಮ್ಮಯ್ಯ ಅಂದರೂ ಪೊಲೀಸರು ಬಿಟ್ಟಿರಲಿಲ್ಲ.

ಇಂದು ಬೆಳಗ್ಗೆ 6 ಗಂಟೆಗೆ ವಾಹನಗಳನ್ನ ಬಿಡುತ್ತಿದ್ದಂತೆ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಬರುವ ಹಾಗೂ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಹೋಗುವ ನೂರಾರು ವಾಹನಗಳಿಂದ ಚಾರ್ಮಾಡಿಯಲ್ಲಿ ಸುಮಾರು ಮೂರು ಗಂಟೆ ಟ್ರಾಫಿಕ್ ಜಾಮ್ ಆಗಿತ್ತು. ಪ್ರವಾಸಿಗರು-ಪ್ರಯಾಣಿಕರು ಇಡೀ ರಾತ್ರಿ ಚಾರ್ಮಾಡಿಯ ರಣಚಳಿಯಲ್ಲಿ ನಡುಗಿದ್ದಲ್ಲದೆ. ಬೆಳಗ್ಗೆ ಕೂಡ ಚಳಿಯಲ್ಲಿ ನಡುಗುತ್ತಾ ಮೂರ್ನಾಲ್ಕು ಗಂಟೆ ನಿಂತಲ್ಲೇ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ಪ್ರಯಾಣಿಕರು-ಪ್ರವಾಸಿಗರು ಬರೋದಾದರೆ ಸಂಜೆ ಏಳು ಗಂಟೆ ಒಳಗೆ ಬಂದು ಮಂಗಳೂರು ಸೇರಿಬೇಡಿ. ಏಳು ಗಂಟೆಯ ನಂತರ ಬಂದು ಕೊಟ್ಟಿಗೆಹಾರದಲ್ಲಿ ಪರಿತಪ್ಪಿಸಬೇಡಿ. ಕೊಟ್ಟಿಗೆಹಾರದಲ್ಲಿ ತಂಗಲು ಸಮರ್ಪಕ ಲಾಡ್ಜ್ ಸೌಲಭ್ಯವೂ ಇಲ್ಲ. ಅತ್ತ ಪೊಲೀಸರು ಬಿಡೋದು ಇಲ್ಲ. ಹೀಗಾಗಿ ಸಂಜೆ ಏಳು ಗಂಟೆಯ ನಂತರ ಬರಬೇಡಿ. ಬಂದು ಉಳಿಯಲು ಜಾಗವಿಲ್ಲದೆ ಮಲೆನಾಡ ಚಳಿಯಲ್ಲಿ ನಡುಗಬೇಡಿ ಎಂದು ಮಳೆಯಲ್ಲಿ ನೆನೆದು, ಚಳಿಯಲ್ಲಿ ನಡುಗುತ್ತಾ ರಸ್ತೆಯಲ್ಲಿ ಕಾಲ ಕಳೆದಿರುವ ಪ್ರಯಾಣಿಕರು-ಪ್ರವಾಸಿಗರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *