ಚಾಮರಾಜನಗರ ಆಕ್ಸಿಜನ್ ದುರಂತ – ಡಿಸಿ ರೋಹಿಣಿ ಸಿಂಧೂರಿ ಮೊದಲ ಪ್ರತಿಕ್ರಿಯೆ

Public TV
3 Min Read

– 10 ವರ್ಷದ ಸೇವೆಯಲ್ಲಿ ಎಂದೂ ಈ ರೀತಿ ಕೆಲಸ ಮಾಡಿಲ್ಲ
– ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ರೋಹಿಣಿ ಸಿಂಧೂರಿ ಪ್ರಶ್ನೆ
– ಕೆಲಸ ಮಾಡದೇ ನಮ್ಮ ಮೇಲೆ ಆರೋಪ ಮಾಡಿದ್ರೆ ನೋವಾಗುತ್ತೆ

ಮೈಸೂರು: ಚಾಮರಾಜನಗರ ಆಕ್ಸಿಜನ್ ದುರಂತದ ಬಳಿಕ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ 10 ವರ್ಷದ ಸೇವೆಯಲ್ಲಿ ನಾನು ಎಂದು ಈ ರೀತಿ ಕೆಲಸ ಮಾಡಿಲ್ಲ ಎಂದು ತಮ್ಮ ವಿರುದ್ಧ ಕೇಳಿ ಬಂದ ಎಲ್ಲ ಆರೋಪಗಳನ್ನ ತಳ್ಳಿ ಹಾಕಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ರೋಹಿಣಿ ಸಿಂಧೂರಿ, ಚಾಮರಾಜನಗರದಲ್ಲಿ ಆಗಿರುವ ಸಾವುಗಳಿಗೆ ನೋವಾಗಿವೆ. ಇದರ ಬೆನ್ನಲ್ಲೇ ಸಾಕಷ್ಟು ಊಹಾಪೋಹಗಳು ನಡೆಯುತ್ತಿದ್ದರಿಂದ ವೈಯಕ್ತಿಕವಾಗಿ ತುಂಬಾ ನೋವಾಗಿದೆ. ನನ್ನ 10 ವರ್ಷದ ಸೇವೆಯಲ್ಲಿ ಎಂದೂ ಈ ರೀತಿ ಕೆಲಸ ಮಾಡಿಲ್ಲ. ಸರ್ಕಾರ ತನಿಖೆ ಆದೇಶ ಮಾಡಿದ್ದರಿಂದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿಲ್ಲ. ಚಾಮರಾಜನಗರ ಜಿಲ್ಲಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದ್ದರಿಂದ ಕೆಲ ವಿಷಯಗಳಿಗೆ ಸ್ಪಷ್ಟನೆ ನೀಡಬೇಕಿದೆ ಎಂದರು.

ರೋಹಿಣಿ ಸಿಂಧೂರಿ ಪ್ರಶ್ನೆ: ಚಾಮರಾಜನಗರಕ್ಕೆ ಸ್ಪಂದಿಸಿಲ್ಲ ಅನ್ನೋದು ಸತ್ಯಕ್ಕೆ ದೂರವಾದದ್ದು. ನಾವು ರಿಸ್ಕ್ ತೆಗೆದುಕೊಂಡು 40 ಸಿಲಿಂಡರ್ ಗಳನ್ನು ಚಾಮರಾಜನಗರಕ್ಕೆ ಕಳುಹಿಸಲಾಗಿದೆ. ದಾಖಲಾತಿಗಳ ಪ್ರಕಾರ ರಾತ್ರಿ 11 ಗಂಟೆಗೆ ಕೇಳಿದ್ದಾರೆ. ಅದಕ್ಕೂ ಮುಂಚಿತವಾಗಿ ಕೇಳಿದ್ರೆ ಸಿಲಿಂಡರ್ ಕಳುಹಿಸಲಾಗುತ್ತಿತ್ತು. ಆಸ್ಪತ್ರೆ ಮತ್ತು ಆಕ್ಸಿಜನ್ ರಿಫಿಲ್ಲಿಂಗ್ ಕಂಪನಿಗಳ ನಡುವೆ ಒಪ್ಪಂದ ಆಗಿರುತ್ತದೆ. ಎಲ್ಲ ಆಕ್ಸಿಜನ್ ಕೊರತೆಯಾದ್ರೂ ರಿಫಿಲ್ಲಿಂಗ್ ಘಟಕದಿಂದಲೇ ಪೂರೈಕೆ ಮಾಡಲಾಗುತ್ತದೆ. ಮಾನವೀಯತೆ ದೃಷ್ಟಿಯಿಂದ ಜಿಲ್ಲಾಸ್ಪತ್ರೆಯಲ್ಲಿದ್ದ 40 ಆಕ್ಸಿಜನ್ ಸಿಲಿಂಡರ್ ಗಳನ್ನ ನೀಡಿದ್ದೇವೆ. ಇದೆಲ್ಲ ಆಸ್ಪತ್ರೆಗಳ ದಾಖಲಾತಿಯಲ್ಲಿ ದಾಖಲಾಗಿದೆ. ಹಾಗಾದ್ರೆ ಇದು ಮಾನವೀಯತೆ ಅಲ್ವಾ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ರವಿ ಅವರನ್ನ ರೋಹಿಣಿ ಸಿಂಧೂರಿ ಪ್ರಶ್ನಿಸಿದರು. ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತ – ತಾಳಿ ಉಳಿಸಿಕೊಡಿ ಅಂತ ಅಂಗಲಾಚಿದ ನವ ವಧು

ಭಾವುಕರಾದ ರೋಹಿಣಿ ಸಿಂಧೂರಿ: ನಮಗೂ ಲಿಕ್ವಿಡ್ ಆಕ್ಸಿಜನ್ ಬಳ್ಳಾರಿಯಿಂದ ಬರುತ್ತೆ. ಝೀರೋ ಟ್ರಾಫಿಕ್ ಮಾಡಿಸಿ ಬಳ್ಳಾರಿಯಿಂದ ಇಲ್ಲಿಗೆ ಆಕ್ಸಿಜನ್ ತೆಗೆದುಕೊಂಡು ಬರುತ್ತಿದ್ದೇವೆ. ಇಲ್ಲಿ ಏನಾದ್ರೂ ಆದ್ರೆ ಬಳ್ಳಾರಿಯವರ ಮೇಲೆ ಆರೋಪ ಮಾಡೋಕೆ ಆಗುತ್ತಾ? ನಾವು ಜನರ ಪ್ರಾಣ ಉಳಿಸಲು 24/7 ಕೆಲಸ ಮಾಡುತ್ತಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಈ ರೀತಿ ಆಗಿದ್ದರೆ ಯಾರನ್ನಾದರೂ ಹೇಗಾದರೂ ಸಂಪರ್ಕಿಸಿ ಆಕ್ಸಿಜನ್ ಪಡೆಯುತ್ತಿದ್ದೇವು. ಅವರು ಆ ಕೆಲಸ ಮಾಡದೇ ನಮ್ಮ ಮೇಲೆ ಆರೋಪ ಮಾಡಿದ್ರೆ ನೋವಾಗುತ್ತೆ ಎಂದು ರೋಹಿಣಿ ಸಿಂಧೂರಿ ಭಾವುಕರಾದ್ರು.

ಕಳೆದ 10 ದಿನಗಳಿಂದ ನಮ್ಮಲ್ಲಿ ಆಕ್ಸಿಜನ್ ಕೊರತೆ ಇದೆ ಅಂತ ಹೇಳಿದ್ದೇವೆ. ರೆಮ್‍ಡೆಸಿವರ್ ಕಾಳಸಂತೆಯಲ್ಲಿ ಮಾರಾಟ ಆಗುತ್ತಿರೋದು ಪತ್ತೆ ಹಚ್ಚಲಾಗಿದೆ. ಕೇವಲ ವೈದ್ಯಕೀಯ ಬಳಕೆಗಾಗಿ ಆಕ್ಸಿಜನ್ ನೀಡಬೇಕೆಂದು ಸರ್ಕಾರ ಸುತ್ತೋಲೆ ಸಹ ಹೊರಡಿಸಿದೆ. ಆದ್ರೆ ರೀಫಿಲ್ಲಿಂಗ್ ಘಟಕಗಳು ಕೈಗಾರಿಕೆಗಳಿಗೂ ನೀಡುತ್ತಿದ್ದಾರೆ. ಕೆಲ ಆಸ್ಪತ್ರೆಗಳು ಹೆಚ್ಚು ಹೆಚ್ಚು ಆಕ್ಸಿಜನ್ ಸಿಲಿಂಡರ್ ಗಳನ್ನ ಸ್ಟಾಕ್ ಮಾಡಿಕೊಳ್ಳುತ್ತಿರುವ ಆರೋಪಗಳು ಕೇಳಿ ಬಂದಿದೆ. ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಆಕ್ಸಿಜನ್ ಯಾರಿಗೆ ಕೊಡಬೇಕು? ಯಾರಿಗೆ ಕೊಡಬಾರದು ಅಂತ ಹೇಳೋದು ನಮ್ಮ ಪರಿಧಿಯಲ್ಲಿರಲ್ಲ. ಅದು ಆಸ್ಪತ್ರೆ ಮತ್ತು ಘಟಕಗಳ ನಡುವಿನ ಒಪ್ಪಂದ ಇರುತ್ತೆ. ಆದ್ರೂ ಘಟಕಗಳಿಗೆ ವೈದ್ಯಕೀಯ ಬಳಕೆಗೆ ಮಾತ್ರ ಆಕ್ಸಿಜನ್ ನೀಡುವಂತೆ ಹೇಳಿದ್ದೇವೆ ಎಂದರು. ಇದನ್ನೂ ಓದಿ: ಸತ್ತಿರೋದು 24 ಅಲ್ಲ, 34 ರಿಂದ 35 – ಸುಳ್ಳು ಹೇಳ್ತಿದೆಯಾ ಸರ್ಕಾರ? – ಕಾಂಗ್ರೆಸ್ ಶಾಸಕರ ಸುದ್ದಿಗೋಷ್ಠಿ ತಡೆದ ಅಧಿಕಾರಿಗಳು

ಆಸ್ಪತ್ರೆಗಳು ಮುಂಚಿತವಾಗಿಯೇ ತಮಗೆ ಎಷ್ಟು ಆಕ್ಸಿಜನ್ ಬೇಕು ಅನ್ನೋದು ತಿಳಿದುಕೊಂಡು ಪೂರೈಕೆ ಮಾಡುವಂತೆ ಹೇಳೋದು ಅವರ ಜವಾಬ್ದಾರಿ. ಇಂತಹ ಸಂದರ್ಭದಲ್ಲಿ ಆರೋಪ ಮಾಡೋದು, ಪ್ರೆಸ್ ಮೀಟ್ ಮಾಡೋದರಿಂದ ಜನಕ್ಕೆ ತಪ್ಪು ಅಭಿಪ್ರಾಯ ಹೋಗುತ್ತದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿಗಳ ವಿರುದ್ಧ ಬೇಸರ ಹೊರ ಹಾಕಿದರು. ಇದನ್ನೂ ಓದಿ: ದುರಂತದ ನಡುವೆ ವಿಚಿತ್ರ ಘಟನೆ – ಬದುಕಿದ್ರೂ ಸತ್ತಿದ್ದಾರೆ ಅಂತ ಸುಳ್ಳು ಮಾಹಿತಿ-ವೆಂಟಿಲೇಟರ್‌ನಲ್ಲಿದ್ದ ಅಮ್ಮನ ಕಂಡು ನಿಟ್ಟುಸಿರು ಬಿಟ್ಟ ಪುತ್ರ

Share This Article
Leave a Comment

Leave a Reply

Your email address will not be published. Required fields are marked *