ಚಪ್ಪಾಳೆ ತಟ್ಟಿ, ದೀಪ ಹಚ್ಚುವುದರಿಂದ ಕೊರೊನಾ ಹೋಗುತ್ತದೆಯೆಂದು ಯಾರೂ ಹೇಳಿಲ್ಲ: ಸುಧಾಕರ್

Public TV
1 Min Read

ಬೆಂಗಳೂರು: ಚಪ್ಪಾಳೆ ತಟ್ಟಿ, ದೀಪ ಹಚ್ಚುವುದರಿಂದ ಕೊರೊನಾ ಹೋಗುತ್ತದೆಯೆಂದು ಯಾರೂ ಹೇಳಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಇಂದು ಶಾಸಕ ಪ್ರಿಯಾಂಕ್ ಖರ್ಗೆ ಸೋಂಕಿತ ಸರ್ಕಾರ ಎಂಬ ಬರೆದಿರುವ ಮಾಸ್ಕ್ ತೊಟ್ಟು ಟ್ವಿಟ್ಟರ್ ನಲ್ಲಿ ಫೋಟೋ ಹಾಕಿದ್ದರು, ಇದನ್ನು ಕುರಿತು ಟ್ವೀಟ್ ಮಾಡಿದ್ದ ಸುಧಾಕರ್ ಕೊರೊನಾ ನಿಯಂತ್ರಣಕ್ಕೆ ಇಂದು ಇಡೀ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಹಸ್ರಾರು ಕೊರೊನಾ ಯೋಧರು ತಮ್ಮ ಜೀವ ಪಣಕ್ಕಿಟ್ಟು, ಅವಿರತ ಶ್ರಮದಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವು ಶಾಸಕರು ‘ಸೋಂಕಿತ ಸರ್ಕಾರ’ ಎಂದು ಕರೆಯುವ ಮೂಲಕ ತಮ್ಮ ‘ಸೋಂಕಿತ ಮನಸ್ಥಿತಿ’ ಪ್ರದರ್ಶಿಸಿರುವುದು ದುರದೃಷ್ಟಕರ ಎಂದಿದ್ದರು.

ಸುಧಾಕರ್ ಟ್ವೀಟ್‍ಗೆ ಉತ್ತರ ಕೊಟ್ಟಿದ್ದ ಖರ್ಗೆ, ನೀವು ತಟ್ಟೆ ಬಡಿಯಲು ಕೇಳಿದ್ದಿರಿ, ನಾವು ಮಾಡಿದೆವು. ನೀವು ದೀಪ ಬೆಳಗಿಸಿ ಎಂದಿರಿ, ನಾವು ಬೆಳಗಿಸಿದೆವು. ನೀವು ಮನೆಯಲ್ಲಿಯೇ ಇರಿ ಎಂದಿರಿ, ನಾವು ಇದ್ದೆವು. ನೀವು ಹೊರಬನ್ನಿ ಎಂದಿರಿ, ನಾವು ಬಂದೆವು. ನೀವು ಹೇಳಿದ ಎಲ್ಲವನ್ನು ನಾವು ಮಾಡಿದೆವು. 21 ದಿನಗಳಲ್ಲಿ ಈ ಯುದ್ಧ ಮುಗಿಯಬೇಕಿತ್ತು ಎಂದು ವ್ಯಂಗ್ಯವಾಡಿದ್ದರು.

ಇದಕ್ಕೆ ಕೆಂಡಾಮಂಡಲವಾದ ಸುಧಾಕರ್ ಎನ್‍ಡಿಎ-1 ಸರ್ಕಾರದ ಅವಧಿಯಲ್ಲಿ ಆರಂಭವಾದ ಬೀದರ್- ಕಲಬುರಗಿ ರೈಲ್ವೆ ಮಾರ್ಗವನ್ನು ಪೂರ್ಣಗೊಳಿಸಲು 16 ವರ್ಷಗಳ ನಂತರ ಎನ್‍ಡಿಎ-2 ಸರ್ಕಾರ ಬರಬೇಕಾಯ್ತು. ಇನ್ನು 21 ದಿನಗಳಲ್ಲಿ ಕೊರೊನಾ ಯುದ್ಧ ಮುಗಿಯಬೇಕು ಎಂಬುದು ಅಜ್ಞಾನದಿಂದ ಕೂಡಿದ ಬಾಲಿಶ ಹೇಳಿಕೆ ಎಂದು ಪ್ರಿಯಾಂಕ್ ಖರ್ಗೆಗೆ ಟಾಂಗ್ ಕೊಟ್ಟಿದ್ದರು.

ಜೊತೆಗೆ ಎನ್ನೊಂದು ಟ್ವೀಟ್ ಮಾಡಿ, ಚಪ್ಪಾಳೆ ತಟ್ಟುವುದರಿಂದ, ದೀಪ ಹಚ್ಚುವುದರಿಂದ ಕೊರೊನಾ ಹೋಗುತ್ತದೆ ಎಂದು ಯಾರೂ ಹೇಳಿಲ್ಲ. ಅದೊಂದು ಸಾಮೂಹಿಕ ಪ್ರಜ್ಞೆ ಬೆಳೆಸುವ, ಅರಿವು ಮೂಡಿಸುವ ಮನೋವೈಜ್ಞಾನಿಕ ಪ್ರಕ್ರಿಯೆ ಆಗಿತ್ತು. ಏಡ್ಸ್, ಪೋಲಿಯೋದಂತಹ ರೋಗಗಳ ಬಗ್ಗೆ ಅರಿವು ಮೂಡಿಸಲು ವರ್ಷಗಳೇ ಬೇಕಾಯ್ತು, ಆದರೆ ಲಾಕ್ಡೌನ್ ಮೂಲಕ ಕೆಲವೇ ದಿನಗಳಲ್ಲಿ ಅರಿವು ಮೂಡಿಸಲಾಯ್ತು ಎಂದರು.

Share This Article
Leave a Comment

Leave a Reply

Your email address will not be published. Required fields are marked *