ಘಟಪ್ರಭಾ ನದಿಗೆ ಕಾರ್ಖಾನೆ ತ್ಯಾಜ್ಯ- ಮೀನುಗಳು ಮಾರಣ ಹೋಮ

Public TV
1 Min Read

ಬಾಗಲಕೋಟೆ: ಸಕ್ಕರೆ ಕಾರ್ಖಾನೆ ತ್ಯಾಜ್ಯವನ್ನು ಘಟಪ್ರಭಾ ನದಿಗೆ ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಮೀನುಗಳ ಮಾರಣ ಹೋಮವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಬಳಿಯ ಘಟಪ್ರಭಾ ನದಿದಡದಲ್ಲಿ ಮೀನುಗಳು ಸತ್ತು ತೇಲಾಡುತ್ತಿವೆ. ಕಾರ್ಖಾನೆ ತ್ಯಾಜ್ಯದಲ್ಲಿರುವ ಕೆಮಿಕಲ್ಸ್ ನದಿಗೆ ಹರಿಬಿಟ್ಟಿರುವುದರಿಂದ ಮೀನುಗಳು ರಾಶಿ ರಾಶಿ ಸತ್ತು ಬೀಳುತ್ತಿವೆ. ಇದನ್ನೂಓದಿ: ಚಾರ್ಮಾಡಿ ಘಾಟಿಯಲ್ಲಿ ಉಕ್ಕಿ ಹರಿಯುತ್ತಿರುವ ಜಲಪಾತ- ಜಾರುವ ಬಂಡೆ ಮೇಲೆ ಪ್ರವಾಸಿಗರ ಹುಚ್ಚಾಟ

ಘಟಪ್ರಭಾ ನದಿದಡದಲ್ಲಿ 8 ಸಕ್ಕರೆ ಕಾರ್ಖಾನೆಗಳಿವೆ. ಕಾರ್ಖಾನೆಗಳ ಮೊಲ್ಯಾಸಿಸ್ ನೇರವಾಗಿ ನದಿಗೆ ಹರಿಬಿಡುತ್ತಿರುವುದರಿಂದ ಮೀನುಗಳ ಮಾರಣ ಹೋಮವಾಗಿದೆ. ಪ್ರತೀವರ್ಷ ಇದೇ ರೀತಿ ಜಲಚರ ಪ್ರಾಣಿಗಳು ಸತ್ತು ಬೀಳುತ್ತಿವೆ. ಸಕ್ಕರೆ ಕಾರ್ಖಾನೆಯ ತ್ಯಾಜ್ಯ ನದಿಗೆ ಹರಿಬಿಡಬಾರದು ಎಂದು ಸ್ಥಳೀಯರು ಹಲವು ಬಾರಿ ಒತ್ತಾಯಿಸಿದ್ದರು, ಆದರೆ ಕಾರ್ಖಾನೆಯವರು ಮಾತ್ರ ನದಿಗೆ ಹರಿಬಿಡುತ್ತಿದ್ದಾರೆ. ಇದನ್ನೂಓದಿ: ಪುಕ್ಕಟೆ ಕೊತ್ತಂಬರಿ ಸೊಪ್ಪಿಗಾಗಿ ಮುಗಿ ಬಿದ್ದ ಜನ

ಕಳೆದ ವಾರ ಬೆಳಗಾವಿ , ಮಹಾರಾಷ್ಟ್ರದಲ್ಲಿ ಭಾರೀ ಮಳೆ ಆದ ಹಿನ್ನೆಲೆಯಲ್ಲಿ ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡಲಾಗಿತ್ತು. ಇದರೊಂದಿಗೆ ಅಪಾರ ಪ್ರಮಾಣದಲ್ಲಿ ಮೀನು ಸಂಪತ್ತು ಹರಿದು ಬಂದಿದೆ. ಮೀನುಗಾರರು ಮೀನು ಹಿಡಿದು ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ ಇದೀಗ ಕಾರ್ಖಾನೆ ತ್ಯಾಜ್ಯ ಮೀನುಗಳನ್ನೇ ಬಲಿ ಪಡೆದಿದೆ. ನದಿ ದಡದಲ್ಲಿ ಸತ್ತು ಬಿದ್ದಿರುವ ಮೀನುಗಳು ದುರ್ನಾತ ಬೀರುತ್ತಿದೆ. ನದಿಗೆ ಕಾರ್ಖಾನೆ ತ್ಯಾಜ್ಯಾ ಹರಿಬಿಡದಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಮೀನುಗಾರರು, ಸ್ಥಳೀಯರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *