ಗ್ಯಾಂಗ್‍ರೇಪ್ ಮಾಡಿ, ನಾಲಿಗೆ ಕತ್ತರಿಸಿ ಚಿತ್ರಹಿಂಸೆ – ಚಿಕಿತ್ಸೆ ಫಲಿಸದೆ 20ರ ಯುವತಿ ಸಾವು

Public TV
2 Min Read

– ತಾಯಿ ಜೊತೆ ಹೊಲದಲ್ಲಿದ್ದಾಗ ಎಳೆದೊಯ್ದ ಕಾಮುಕರು

ನವದೆಹಲಿ: ಎರಡು ವಾರಗಳ ಹಿಂದೆ ನಾಲ್ವರು ಕಾಮುಕರು 20 ವರ್ಷದ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ ಚಿತ್ರಹಿಂಸೆ ನೀಡಿದ್ದರು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಂತ್ರಸ್ತೆ ದೆಹಲಿಯಲ್ಲಿ ಸಾವನ್ನಪ್ಪಿದ್ದಾಳೆ.

ಉತ್ತರ ಪ್ರದೇಶದ ಹತ್ರಾಸ್ ಗ್ರಾಮದ ನಿವಾಸಿ 20 ವರ್ಷದ ಯುವತಿ ಮೃತಪಟ್ಟಿದ್ದಾಳೆ. ಆರೋಪಿಗಳು ಸಂತ್ರಸ್ತೆಯ ನಾಲಿಗೆಯನ್ನು ಕತ್ತರಿಸಿ ಭಯಾನಕವಾಗಿ ಹಲ್ಲೆ ಮಾಡಿದ್ದರು. ಹೀಗಾಗಿ ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದ್ದು, ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಸೋಮವಾರ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾಳೆ.

ಈಗಾಗಲೇ ನಾಲ್ವರು ಆರೋಪಿಗಳು ಜೈಲಿನಲ್ಲಿದ್ದಾರೆ. ಯುವತಿ ಮೇಲಿನ ದೌರ್ಜನ್ಯದ ಬಗ್ಗೆ ತಿಳಿದು ಗ್ರಾಮಸ್ಥರು ಪ್ರತಿಭಟನೆ ಮಾಡುವ ಮೂಲಕ ಖಂಡನೆ ವ್ಯಕ್ತಪಡಿಸಿದ್ದರು. ಅಲ್ಲದೇ ಉತ್ತರ ಪ್ರದೇಶ ಪೊಲೀಸರು ಆರಂಭದಲ್ಲಿ ಸಹಾಯ ಮಾಡಲಿಲ್ಲ. ಆದರೆ ಸಾರ್ವಜನಿಕರ ಆಕ್ರೋಶದ ನಂತರ ಪೊಲೀಸರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಎಂದು ಮೃತ ಯುವತಿಯ ಕುಟುಂಬದವರು ಆರೋಪಿಸಿದ್ದಾರೆ.

ಏನಿದು ಪ್ರಕರಣ?
ಸೆಪ್ಟೆಂಬರ್ 14 ರಂದು ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಹತ್ರಾಸ್ ಹಳ್ಳಿಯಲ್ಲಿ ಯುವತಿಯ ಮೇಲೆ ಹಲ್ಲೆ ಮಾಡಲಾಗಿತ್ತು. ತನ್ನ ಕುಟುಂಬದೊಂದಿಗೆ ಹುಲ್ಲು ಕತ್ತರಿಸುತ್ತಿದ್ದ ಸ್ಥಳದಿಂದ ಸಂತ್ರಸ್ತೆಯನ್ನು ಆಕೆಯ ದುಪ್ಪಟ್ಟಾದಿಂದ ಹೊಲಕ್ಕೆ ಎಳೆದುಕೊಂಡು ಹೋಗಲಾಗಿತ್ತು. ಅಲ್ಲದೇ ಆಕೆಯ ಮೇಲೆ ನಾಲ್ವರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ನಂತರ ಸಂತ್ರಸ್ತೆಯ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದರು.

ನನ್ನ ತಾಯಿ, ಸಹೋದರಿ ಮತ್ತು ಹಿರಿಯ ಸಹೋದರ ಹುಲ್ಲು ತರಲು ಹೊಲಕ್ಕೆ ಹೋಗಿದ್ದರು. ಅಂತೆಯೇ ಸಹೋದರ ಹುಲ್ಲು ತೆಗೆದುಕೊಂಡು ಮನೆಗೆ ಹೋಗಿದ್ದರು. ಆದರೆ ನನ್ನ ತಾಯಿ ಮತ್ತು ಸಹೋದರಿ ಹುಲ್ಲನ್ನು ಕಟ್ ಮಾಡುತ್ತಿದ್ದು, ಇಬ್ಬರು ಸ್ವಲ್ಪ ದೂರದಲ್ಲಿದ್ದರು. ಆದರೆ ಹಿಂದಿನಿಂದ ನಾಲ್ಕೈದು ಮಂದಿ ಬಂದು ನನ್ನ ಸಹೋದರಿಯ ದುಪ್ಪಟ್ಟಾವನ್ನು ಅವಳ ಕುತ್ತಿಗೆಗೆ ಸುತ್ತಿ ಬಜ್ರಾ ಮೈದಾನದೊಳಗೆ ಎಳೆದುಕೊಂಡು ಹೋಗಿದ್ದರು ಎಂದು ಸಂತ್ರಸ್ತೆಯ ಮತ್ತೊಬ್ಬ ಸಹೋದರ ತಿಳಿಸಿದ್ದಾರೆ.

ಹೊಲದಲ್ಲಿದ್ದ ತಂಗಿ ಕಾಣದಿದ್ದಾಗ ತಾಯಿ ಹುಡುಕಲು ಶುರು ಮಾಡಿದ್ದರು. ಕೊನೆಗೆ ನನ್ನ ತಂಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಅಲ್ಲದೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ನಾವು ಪೊಲೀಸರು ದೂರು ನೀಡಿದರೂ ಆರಂಭದಲ್ಲಿ ನಮಗೆ ಸಹಾಯ ಮಾಡಲಿಲ್ಲ. ಜೊತೆಗೆ ಶೀಘ್ರವಾಗಿ ಕ್ರಮ ಕೈಗೊಂಡಿಲ್ಲ. ನಾಲ್ಕೈದು ದಿನಗಳ ನಂತರ ಈ ಕುರಿತು ಪ್ರತಿಕ್ರಿಯೆ ನೀಡಿದ್ದರು ಎಂದು ಸಹೋದರ ಆರೋಪಿಸಿದ್ದಾರೆ.

ಉತ್ತರ ಪ್ರದೇಶ ಪೊಲೀಸರು ಕುಟುಂಬದ ಆರೋಪವನ್ನು ನಿರಾಕರಿಸಿದ್ದಾರೆ. “ಇದು ತುಂಬಾ ದುರದೃಷ್ಟಕರ ಘಟನೆಯಾಗಿದೆ. ಆದರೆ ಕುಟುಂಬಕ್ಕೆ ಸಾಧ್ಯವಾದಷ್ಟು ಸಹಾಯ ಮಾಡಿದ್ದೇವೆ. ಅಲ್ಲದೇ ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದು, ಜೈಲಿಗೆ ಕಳುಹಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ವಿಕ್ರಾಂತ್ ವೀರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *