ಪೋಷಕರು ಮೊಬೈಲ್ ಕಸಿದುಕೊಂಡಿದ್ದಕ್ಕೆ ಬಾಲಕ ಆತ್ಮಹತ್ಯೆ

Public TV
1 Min Read

– ಲಾಕ್‍ಡೌನ್ ವೇಳೆ ಗೇಮ್ ವ್ಯಸನಿಯಾಗಿದ್ದ ಬಾಲಕ

ಚೆನ್ನೈ: ಮೊಬೈಲ್‍ನಲ್ಲಿ ಹೆಚ್ಚು ಗೇಮ್ ಆಡಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ 16 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಯಾವಾಗಲೂ ಗೇಮ್ ಆಡುವುದಕ್ಕೆ ಪೋಷಕರು ಮೊಬೈಲ್ ಕಸಿದುಕೊಂಡಿದ್ದು, ಇದರಿಂದ ಅಸಮಾಧಾನಗೊಂಡ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಂಬಾಕುಲಂನ ಗಾಂಡಿ 2ನೇ ರಸ್ತೆಯ ನಿವಾಸಿಯಾಗಿದ್ದ ಬಾಲಕ ಮೊಬೈಲ್ ಗೇಮಿಂಗ್ ವ್ಯಸನಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಲಾಕ್‍ಡೌನ್ ಸಮಯದಲ್ಲಿ ಬಾಲಕ ಗೇಮ್ ಆಡುವುದರಲ್ಲೇ ಸಮಯ ಕಳೆದಿದ್ದು, ಇದರಿಂದಾಗಿ ಗೇಮ್ ವ್ಯಸನಿಯಾಗಿದ್ದಾನೆ. ಪೋಷಕರು ಎಷ್ಟೇ ಹೇಳಿದರು ಕೇಳದೆ ಯಾವಾಗಲೂ ಗೇಮ್ ಆಡುತ್ತಿದ್ದ. ಹೀಗಾಗಿ ಇತ್ತೀಚೆಗೆ ಪೋಷಕರು ಮೊಬೈಲ್ ಕಸಿದುಕೊಂಡಿದ್ದರು. ಇದರಿಂದಾಗಿ ಬಾಲಕ ತೀರಾ ಅಸಮಾಧಾನಗೊಂಡಿದ್ದ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವಿವರಿಸಿದ್ದಾರೆ.

ಪೋಷಕರು ಮರಳಿ ಮನೆಗೆ ಬಂದಾಗ ಬಾಲಕನ ಮೃತದೇಹ ಕಂಡು ಆಘಾತಕ್ಕೊಳಗಾಗಿದ್ದಾರೆ. ಬಳಿಕ ಪುದೂರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚೆಗೆ ತಮಿಳುನಾಡಿನಲ್ಲಿ ಇಂತಹದ್ದೇ ಪ್ರಕರಣ ನಡೆದಿತ್ತು. ಆನ್‍ಲೈನ್ ತರಗತಿಗೆ ಹಾಜರಾಗುವ ಬದಲು 13 ವರ್ಷದ ಬಾಲಕಿ ಸಿನಿಮಾ ನೋಡುವುದರಲ್ಲಿ ಕಾಲ ಕಳೆಯುತ್ತಿದ್ದಳು. ಇದನ್ನು ಕಂಡ ಪೋಷಕರು ಬಾಲಕಿಯಿಂದ ಮೊಬೈಲ್ ಕಸಿದುಕೊಂಡಿದ್ದರು. ಇದರಿಂದ ಕೋಪಿತಳಾದ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಾಲಕಿ 8ನೇ ತರಗತಿಯ ಸರ್ಕಾರಿ ಶಾಲೆ ವಿದ್ಯಾರ್ಥಿನಿಯಾಗಿದ್ದಳು.

Share This Article
Leave a Comment

Leave a Reply

Your email address will not be published. Required fields are marked *