ಗೂಂಡಾಗಳ ಜೊತೆ ಪೊಲೀಸರು ಶಾಮೀಲು ಆಗಿದ್ದೀರಾ ಹೇಗೆ?- ಸಚಿವ ಈಶ್ವರಪ್ಪ

Public TV
1 Min Read

ಶಿವಮೊಗ್ಗ: ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಅಪರಾಧ ಪ್ರಕರಗಳು ನಡೆಯುತ್ತಿದ್ದರೂ ಪೊಲೀಸರು ಸುಮ್ಮನಿದ್ದಾರೆ ಎಂದರೆ ನೀವುಗಳು ಏನಾದರೂ ಗೂಂಡಾಗಳ ಜೊತೆ ಕೈ ಜೋಡಿಸಿದ್ದೀರಾ ಎಂದು ಪ್ರಶ್ನಿಸುವ ಮೂಲಕ ಸಭೆಯಲ್ಲಿ ಪೊಲೀಸರಿಗೆ ಸಖತ್ ಕ್ಲಾಸ್ ತೆಗೆದುಕೊಂಡರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಸಚಿವರು ಜಿಲ್ಲೆಯಲ್ಲಿ ಗಾಂಜಾ, ಹುಕ್ಕಾ ಸೇವನೆ, ಕೊಲೆ ಹಾಗೂ ಕಳ್ಳತನ ಪ್ರಕರಣ ಹೆಚ್ಚಾಗಿದೆ. ಹೀಗಿದ್ದರೂ ನೀವು ಏಕೆ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ನಿಮ್ಮಿಂದ ಅಪರಾಧ ತಡೆಯಲು ಸಾಧ್ಯವಾಗುತ್ತಾ ಇಲ್ಲವಾ ಹೇಳಿ. ನಿಮ್ಮಿಂದ ಅಪರಾಧ ತಡೆಯಲು ಸಾಧ್ಯವಿಲ್ಲ ಎಂದಾದರೆ ಈ ಇಲಾಖೆ ಏಕೆ ಬೇಕು? ನೀವು ಏಕೆ ಬೇಕು? ನಿಮ್ಮಿಂದ ಅಪರಾಧ ಪ್ರಕರಣ ತಡೆಗಟ್ಟಲು ಸಾಧ್ಯವಿಲ್ಲ ಎಂದಾದರೆ ಹೇಳಿ ಸಿಎಂ ಬಳಿ ಮಾತನಾಡಿ ನಿಮ್ಮನ್ನು ಎಲ್ಲರನ್ನು ಜಿಲ್ಲೆಯಿಂದ ಹೊರಗೆ ಕಳುಹಿಸುತ್ತೇನೆ ಎಂದು ಗುಡುಗಿದರು.

ಅಪರಾಧ ತಡೆಗಟ್ಟಲು ಯಾರಾದಾದರೂ ಪ್ರಭಾವ ಇದೆಯಾ? ಅಥವಾ ಗೂಂಡಾಗಳ ಜೊತೆ ನೀವೆನಾದರೂ ಶಾಮೀಲ್ ಆಗಿದ್ದೀರಾ ಎಂದು ಪ್ರಶ್ನಿಸಿದರು. ನಾನು ಒಂದೇ ಒಂದು ಪ್ರಕರಣಕ್ಕೆ ನಿಮಗೆ ಪೋನ್ ಮಾಡಿಲ್ಲ. ಹಾಗೇನಾದರೂ ಇದ್ದರೆ ಹೇಳಿ ನಾನು ರಾಜಕಾರಣವನ್ನೇ ಬಿಟ್ಟು ಬಿಡ್ತೀನಿ ಎಂದರು.

ನಿಜವಾಗಿಯೂ ಆರೋಪಿಗಳು ಯಾರೂ ಅಂತಾ ನಿಮಗೆ ಗೊತ್ತಿಲ್ಲವಾ. ನಿಮಗೆ ಗೊತ್ತಿದ್ದರೂ ಏಕೆ ಸುಮ್ಮನಿದ್ದೀರಾ, ಇಷ್ಟೊಂದು ಜನ ಅಧಿಕಾರಿಗಳು ಇದ್ದರೂ ನೀವೆಲ್ಲಾ ಏನು ಮಾಡುತ್ತಿದ್ದೀರಿ. ನಿಮಗೆ ಎರಡು ತಿಂಗಳು ಸಮಯ ಅಷ್ಟೇ. ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ಗಾಂಜಾ ಹುಡುಕಿದರೂ ಸಿಗಲ್ಲ ಎನ್ನುವ ಮಟ್ಟಿಗೆ ಕಾರ್ಯಾಚರಣೆ ನಡೆಸಬೇಕು. ಗೂಂಡಾಗಳನ್ನು ಮಟ್ಟ ಹಾಕಬೇಕು ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *