ಗಸ್ತಿನಲ್ಲಿದ್ದ ಯೋಧರ ಮೇಲೆ ಉಗ್ರರ ಗುಂಡಿನ ದಾಳಿ – ಓರ್ವ ಸೈನಿಕ ಹುತಾತ್ಮ

Public TV
1 Min Read

– ಮೂವರು ಸೈನಿಕರು ಗಂಭೀರ, ಓರ್ವ ನಾಗರಿಕ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಗಸ್ತು ತೀರುಗುತ್ತಿದ್ದ ಯೋಧರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಕೇಂದ್ರ ರಿಸರ್ವ್ ಪೊಲೀಸ್ ಪಡೆ (ಸಿ.ಆರ್.ಪಿ.ಎಫ್) ಜವಾನ್ ಮತ್ತು ಓರ್ವ ನಾಗರಿಕ ಸಾವನ್ನಪ್ಪಿದ್ದಾರೆ. ಜೊತೆಗೆ ಮೂವರು ಸಿ.ಆರ್.ಪಿ.ಎಫ್ ಸೈನಿಕರು ಗಾಯಗೊಂಡಿದ್ದಾರೆ.

ಶ್ರೀನಗರದಿಂದ 50 ಕಿ.ಮೀ ದೂರದಲ್ಲಿರುವ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ ಪಟ್ಟಣದಲ್ಲಿ ಸಿ.ಆರ್.ಪಿ.ಎಫ್ ಯೋಧರು ಗಸ್ತಿನಲ್ಲಿದ್ದರು. ಈ ವೇಳೆ ಯೋಧರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ಯೋಧರು ಪ್ರತಿ ದಾಳಿ ಮಾಡಿದ್ದಾರೆ. ಆದರೆ ಉಗ್ರರು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ದಾಳಿಯಲ್ಲಿ ನಾಲ್ಕು ಸಿ.ಆರ್.ಪಿ.ಎಫ್ ಸೈನಿಕರು ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ ಆದರೆ ಅವರಲ್ಲಿ ಓರ್ವ ಯೋಧ ತೀವ್ರವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಿಸದೇ ಹುತಾತ್ಮರಾಗಿದ್ದಾರೆ. ಈ ವೇಳೆ ಸ್ಥಳದಲ್ಲಿ ಕಾರಿನಲ್ಲಿ ಕುಳಿತ್ತಿದ್ದ ಓರ್ವ ಹಿರಿಯ ನಾಗರಿಕ ಸಾವನ್ನಪ್ಪಿದ್ದಾರೆ. ಇವರ ಜೊತೆ ಕಾರಿನಲ್ಲಿ ಅವರ ಮೊಮ್ಮಗನು ಇದ್ದು ಆತನಿಗೆ ಚಿಕ್ಕಪುಟ್ಟ ಗಾಯಗಳಾಗಿ ಬದುಕುಳಿದಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಕಾಶ್ಮೀರದ ಡಿಜಿಪಿ ದಿಲ್ಭಾಗ್ ಸಿಂಗ್ ಇಂದು ನಡೆದ ಭಯೋತ್ಪಾದಕರ ದಾಳಿಯಲ್ಲಿ ಮೂರು ವರ್ಷದ ಓರ್ವ ಬಾಲಕನನ್ನು ಕಾಪಾಡಲಾಗಿದೆ. ಆದರೆ ನಮ್ಮ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಈಗ ಸ್ಥಳಕ್ಕೆ ಹೆಚ್ಚಿನ ಸೈನಿಕರು ಮತ್ತು ಪೊಲೀಸರನ್ನು ಕಳುಹಿಸಲಾಗಿದೆ. ಭಯೋತ್ಪಾದಕರು ತಪ್ಪಿಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *