ಗದಗನಲ್ಲಿ ಭಾರೀ ಮಳೆ- ಸಿಡಿಲಿಗೆ ಮೂವರು ಬಲಿ, ನಾಲ್ವರಿಗೆ ಗಾಯ

Public TV
1 Min Read

ಗದಗ: ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗಿದ್ದು, ಸಿಡಿಲಿಗೆ ಮೂವರು ಬಲಿಯಾಗಿದ್ದಾರೆ. ಇನ್ನೂ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಬಳಿ ಘಟನೆ ನಡೆದಿದ್ದು, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರಿಗೆ ಸಿಡಿಲು ಬಡಿದು 3 ಜನ ಸಾವನ್ನಪ್ಪಿದು, ನಾಲ್ವರಿಗೆ ಗಾಯಗಳಾಗಿವೆ. ರೈತರಾದ ಮಾರುತಿ ಗೋಗಣ್ಣವರ್(44), ಶರಣಪ್ಪ ಅಡವಿ (35) ಹಾಗೂ ಕುಮಾರ್ ಮಾದರ್ (23) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದ ನಾಲ್ವರಿಗೆ ಗಾಯಗಳಾಗಿದ್ದು, ಶಿರಹಟ್ಟಿ ತಾಲೂಕು ಆಸ್ಪತ್ರೆ ಹಾಗೂ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತ ಮೂವರಲ್ಲಿ ಇಬ್ಬರು ಕಡಕೋಳ ಗ್ರಾಮದವರಾಗಿದ್ದು, ಓರ್ವ ರೈತ ಶಿರಹಟ್ಟಿ ನಿವಾಸಿ ಎನ್ನಲಾಗುತ್ತಿದೆ. ಮಳೆ, ಗಾಳಿ ಜೋರಾದ ಕಾರಣ ಜಮೀನಿನಲ್ಲಿದ್ದ ಹುಣಸೆ ಮರದ ಕೆಳಗೆ ಆಸರೆ ಪಡೆದಿದ್ದರು. ಈ ವೇಳೆ ಹುಣಸೆ ಮರಕ್ಕೆ ಸಿಡಿಲು ಬಡಿದಿದೆ. ಹೀಗಾಗಿ ಮೂವರೂ ಸಾವನ್ನಪ್ಪಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ಸಿಪಿಐ ವಿಕಾಸ್ ಲಮಾಣಿ ಹಾಗೂ ಕಂದಾಯ ನಿರೀಕ್ಷರು ಭೇಟಿ ನೀಡಿದ್ದಾರೆ. ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಮಹಾಂತೇಶ ಹಣಗಿ ಅವರ ಮನೆ ಮುಂದಿನ ತೆಂಗಿನ ಮರಕ್ಕೆ ಸಿಡಿಲು ಬಡಿದು ಧಗ ಧಗಿಸಿದೆ. ಸಿಡಿಲಿನ ಶಬ್ದ ಕೇಳಿ ಸ್ಥಳೀಯರು ಕೆಲಕಾಲ ಆತಂಕಕ್ಕೊಳಗಾಗಿದ್ದರು. ಜಿಲ್ಲೆಯ ಅನೇಕ ಕಡೆಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಅನಾಹುತಗಳು ಸಂಭವಿಸಿವೆ.

Share This Article
Leave a Comment

Leave a Reply

Your email address will not be published. Required fields are marked *