ಮಡಿಕೇರಿ: ಕೊಡಗಿನ ಪವಿತ್ರ ತೀರ್ಥ ಕ್ಷೇತ್ರ ತಲಕಾವೇರಿಯ ಗಜಗಿರಿಬೆಟ್ಟ ಕುಸಿದು ಬೆಟ್ಟದ ಮಣ್ಣಿನಲ್ಲಿ ಕಣ್ಮರೆಯಾಗಿದ್ದ ಶಾಂತಾ ಆಚಾರ್ ಮತ್ತು ಶ್ರೀನಿವಾಸ್ ಪಡಿಲ್ಲಾಯ ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದ ಪರಿಹಾರವನ್ನು ಸರ್ಕಾರ ಬಿಡುಗಡೆ ಮಾಡಿದೆ.
ತಲಕಾವೇರಿಯ ಪ್ರಧಾನ ಅರ್ಚಕರಾಗಿದ್ದ ನಾರಾಯಣ್ ಆಚಾರ್ ಅವರ ಪತ್ನಿ ಶಾಂತಾ ಆಚಾರ್ ಕೂಡ ಆಗಸ್ಟ್ ಐದರಂದು ಸಂಭವಿಸಿದ್ದ ಭೀಕರ ಭೂಕುಸಿತದಲ್ಲಿ ಕಣ್ಮರೆಯಾಗಿದ್ದರು. ಬಳಿಕ ಸತತ 12 ದಿನಗಳ ಕಾಲ ಕಾರ್ಯಚರಣೆ ನಡೆಸಿದರೂ ಶಾಂತಾ ಆಚಾರ್ ಅವರು ಪತ್ತೆಯಾಗಿರಲಿಲ್ಲ. ಜೊತೆಗೆ ಸಹಾಯಕ ಅರ್ಚಕರಾಗಿದ್ದ ಮಂಗಳೂರಿನ ಶ್ರೀನಿವಾಸ್ ಪಡಿಲ್ಲಾಯ ಕೂಡ ಕಣ್ಮರೆಯಾಗಿದ್ದರು. ಕೊನೆಗೂ ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ಮತ್ತು ಪೊಲೀಸ್ ಇಲಾಖೆಯ ತಂಡಗಳು ಜಿಲ್ಲಾಡಳಿತದ ನಿರ್ದೇಶನದಂತೆ ಕಾರ್ಯಚರಣೆ ನಿಲ್ಲಿಸಿದ್ದವು.
ಕೊನೆಗೆ ನಾಪತ್ತೆಯಾಗಿದ್ದ ನಾರಾಯಣ್ ಆಚಾರ್ ಅವರ ಪತ್ನಿ ಶಾಂತಾ ಆಚಾರ್ ಮತ್ತು ಶ್ರೀನಿವಾಸ್ ಪಡಿಲ್ಲಾಯ ಇಬ್ಬರು ಭೂಕುಸಿತದಲ್ಲಿ ನಾಪತ್ತೆಯಾಗಿರುವುದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ ಸರ್ಕಾರ ಇಬ್ಬರಿಗೂ ಪ್ರಾಕೃತಿಕ ವಿಕೋಪದಲ್ಲಿ ಮೃತಪಟ್ಟವರೆಂದು ಪರಿಹಾರ ಘೋಷಿಸಿತ್ತು.
ಇದೀಗ ಪರಿಹಾರದ ಹಣ ಬಿಡುಗಡೆಯಾಗಿದ್ದು, ನಾಳೆ ಶಾಸಕರ ನಿರ್ದೇಶನದಂತೆ ನಾರಾಯಣ ಆಚಾರ್ ಅವರ ಮಕ್ಕಳಾದ ಶಾಂತಾ ಆಚಾರ್ ಮತ್ತು ನಮಿತಾ ಆಚಾರ್ ಗೆ ಪರಿಹಾರದ ಹಣ ನೀಡಲಾಗುವುದು ಎಂದು ತಹಶೀಲ್ದಾರ್ ಹೇಳಿದ್ದಾರೆ. ಅಲ್ಲದೆ ಶ್ರೀನಿವಾಸ್ ಪಡಿಲ್ಲಾಯ ಅವರ ಪೋಷಕರಿಗೂ ಪರಿಹಾರದ ಹಣವನ್ನು ನೀಡುವುದಾಗಿ ಮಡಿಕೇರಿ ತಹಶೀಲ್ದಾರ್ ಮಹೇಶ್ ಹೇಳಿದ್ದಾರೆ.