ಗಂಗಾವತಿಯಲ್ಲಿ ಮೌಲ್ವಿಗೆ ಸೋಂಕು- ಹೆಚ್ಚಿದ ಆತಂಕ

Public TV
1 Min Read

ಕೊಪ್ಪಳ: ಆಂಧ್ರದಿಂದ ಮರಳಿದ ಮೌಲ್ವಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಆತಂಕ ಮನೆ ಮಾಡಿದೆ.

ಈ ಕುರಿತು ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಮಾಹಿತಿ ನೀಡಿದ್ದು, ಜಿಲ್ಲೆಯ ಗಂಗಾವತಿಯಲ್ಲಿ ಆಂಧ್ರದ ಆಧೋನಿ ಮೂಲದ 32 ವರ್ಷದ ಮೌಲ್ವಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈತ ನಗರದ ಹೃದಯ ಭಾಗದಲ್ಲಿರುವ ಜಾಮೀಯಾ ಮಸೀದಿಯಲ್ಲಿ ಮೌಲ್ವಿಯಾಗಿದ್ದು, ಕಳೆದ ಮೂರು ದಿನಗಳ ಹಿಂದೆ ಗಂಗಾವತಿಗೆ ಆಗಮಿಸಿ ಜಾಮೀಯಾ ಮಸೀದಿಯಲ್ಲಿ ದಿನಕ್ಕೆ ಐದು ಬಾರಿ ನಮಾಜ್ ಮಾಡಿಸಿದ್ದಾರೆ. ರೋಗ ಲಕ್ಷಣ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪರೀಕ್ಷೆ ಮಾಡಿಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎಂದು ವಿವರಿಸಿದ್ದಾರೆ.

ಕೊರೊನಾ ಪಾಸಿಟಿವ್ ಬರುತ್ತಿದಂತೆ ಗಂಗಾವತಿ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ನಗರಸಭೆ ಅಧಿಕಾರಿಗಳು, ಸೋಂಕಿತ ಮೌಲ್ವಿಯನ್ನು ಕೊಪ್ಪಳದ ಕೋವಿಡ್-19 ಆಸ್ಪತ್ರೆಗೆ ರವಾನಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮೌಲ್ವಿ ವಾಸವಿದ್ದ ಮನೆ ಮತ್ತು ಮಸೀದಿ ಸುತ್ತಲಿನ ಪ್ರದೇಶವನ್ನು ಸೀಲ್‍ಡೌನ್ ಮಾಡಿದ್ದಾರೆ. ಅಲ್ಲದೆ ಮಸೀದಿ ಬಳಿ ಇರುವ ಡೇಲಿ ಮಾರ್ಕೆಟ್ ಕೂಡ ಬಂದ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಆತ ವಾಸವಿದ್ದ ಮನೆ, ಮಸೀದಿ ಹಾಗೂ ಸುತ್ತಲಿನ ಪ್ರದೇಶವನ್ನು ನಗರಸಭೆ ಸಿಬ್ಬಂದಿ ಸ್ಯಾನಿಟೈಸ್ ಮಾಡಿದ್ದಾರೆ. ಅಲ್ಲದೆ ಆ ಪ್ರದೇಶದಿಂದ ಯಾರೂ ಹೊರ ಬಾರದಂತೆ ಎಚ್ಚರಿಕೆ ನೀಡಲಾಗಿದೆ. ಭಯಾನಕ ವಿಚಾರವೆಂದರೆ ಮೌಲ್ವಿ ನಗರಕ್ಕೆ ಆಗಮಿಸುತ್ತಿದ್ದಂತೆ ಮಾರ್ಕೆಟ್‍ಗೆ ತೆರಳಿ ಹಣ್ಣು ಹಂಪಲು, ತರಕಾರಿ ಖರೀದಿಸಿದ್ದಾರೆ. ಅದಲ್ಲದೆ ಹೋಟೆಲ್ ಗಳಿಗೆ ಹೋಗಿ ತಿನಿಸುಗಳನ್ನು ಪಾರ್ಸಲ್ ತಂದಿದ್ದಾರೆ. ಹೀಗಾಗಿ ಈತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಮಸೀದಿಯಲ್ಲಿ ಪ್ರಾರ್ಥನೆ ಮಾಡಿದವರನ್ನೆಲ್ಲ ಕ್ವಾರಂಟೈನ್ ಮಾಡಲಾಗುತ್ತಿದೆ. ಸೀಲ್ ಡೌನ್ ಮಾಡಿದ ಪ್ರದೇಶದ ನಜ ಭಯಭೀತರಾಗಿದ್ದು, ನಗರಸಭೆ ಸಿಬ್ಬಂದಿ ಹಾಗೂ ವಾರ್ಡ್ ಸದಸ್ಯರು ಜನರಿಗೆ ತಿಳಿ ಹೇಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *