ಹಾಸನ: ಗೊರೂರು ಹೇಮಾವತಿ ಜಲಾಶಯದ ಹಿನ್ನೀರಿನ ಬಳಿ ಕಾರು ಬಿಟ್ಟು ಚಾಲಕ ನಾಪತ್ತೆಯಾಗಿರುವ ಅಪರೂಪದ ಘಟನೆ ನಡೆದಿದೆ.
ಶೆಟ್ಟಿಹಳ್ಳಿ ಸೇತುವೆ ಮೇಲೆ ಕೆಎ-53 ಪಿ-3777 ನೋಂದಣಿ ಸಂಖ್ಯೆಯ ಕಾರು ನಿಂತಿದ್ದು, ಕಳೆದೆರಡು ದಿನಗಳಿಂದ ಚಾಲಕ ಮಾತ್ರ ಕಾಣಿಸುತ್ತಿಲ್ಲ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಅದರಲ್ಲಿದ್ದ ಚಾಲನಾ ಪರವಗಾನಗಿ (ಡಿಎಲ್) ಪರಿಶೀಲಿಸಿದ್ದು, ಈ ವೇಳೆ ಕಾರು ಬೆಂಗಳೂರಿನ ಹೆಬ್ಬಾಳ ಮೂಲದ ಹರೀಶ್ ಅವರದ್ದು ಎಂದು ಗೊತ್ತಾಗಿದೆ. ಕಾರು ನಿಲ್ಲಿಸಿ ಎರಡು ದಿನವಾದರೂ ಮಾಲೀಕ ಮಾತ್ರ ಇತ್ತ ಸುಳಿದಿಲ್ಲ.
ಇಲ್ಲಿಗೆ ಹರೀಶ್ ಅವರೇ ಬಂದಿದ್ದಾರಾ ಅಥವಾ ಯಾರಾದರೂ ತಂದು ನಿಲ್ಲಿಸಿದ್ದಾರಾ? ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹರೀಶ್ ಕನ್ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಒಂದೂವರೆ ತಿಂಗಳ ಹಿಂದೆ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದರು. ಆದರೆ ನಿರೀಕ್ಷೆಗೆ ತಕ್ಕ ಕೆಲಸ ಸಿಕ್ಕಿರಲಿಲ್ಲ. ಇದಕ್ಕೆ ಲಾಕ್ಡೌನ್ ಎಫೆಕ್ಟ್ ಕೂಡ ಕಾರಣ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಕೆಲವು ದಿನಗಳಿಂದ ಹರೀಶ್ ಖಿನ್ನತೆಗೆ ಒಳಗಾಗಿದ್ದರು ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಈ ಬಗ್ಗೆ ಹೆಚ್ಚಿನ ತನಿಖೆಗೆ ಮುಂದಾಗಿರುವ ಗೊರೂರು ಪೊಲೀಸರು ನಾಪತ್ತೆಯಾಗಿರುವ ಹರೀಶ್ಗಾಗಿ ಹುಡುಕಾಟ ನಡೆಸಿದ್ದಾರೆ. ಕಾರು ನಿಲ್ಲಿಸಿ ಎಲ್ಲಿಗೆ ಹೋಗಿರಬಹುದು? ಇಲ್ಲವೇ ಬೇರೆಯವರು ಕಾರು ತಂದು ನಿಲ್ಲಿಸಿದ್ದಾರಾ ಎಂಬ ಕುರಿತು ತನಿಖೆ ಮುಂದುವರಿಸಿದ್ದಾರೆ.