ನಾಳೆ ಮಾಧುಸ್ವಾಮಿ, ಆನಂದ್‌ ಸಿಂಗ್‌ ರಾಜೀನಾಮೆ?

Public TV
1 Min Read

ಬೆಂಗಳೂರು: ಮೈತ್ರಿ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಖಾತೆ ಕಿತ್ತಾಟ ಮುಂದುವರಿದಿದೆ. ಈಗ ಕ್ಯಾಬಿನೆಟ್‌ನಲ್ಲಿ ಪ್ರಭಾವಿಗಳಾಗಿರುವ ಮಾಧುಸ್ವಾಮಿ ಮತ್ತು ಆನಂದ್‌ ಸಿಂಗ್‌ ರಾಜೀನಾಮೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

9 ದಿನದಲ್ಲಿ ಮೂರನೇ ಬಾರಿ ನಡೆದಿರುವ ಖಾತೆಗಳ ಪುನರ್ ಹಂಚಿಕೆಯಲ್ಲಿ ಸಚಿವರಾದ ಮಾಧುಸ್ವಾಮಿ ಮತ್ತು ಆನಂದ್ ಸಿಂಗ್ ಅವರ ಖಾತೆ ಮತ್ತೆ ಬದಲಾಗಿದೆ. ಅದರಲ್ಲೂ ಸಚಿವ ಮಾಧುಸ್ವಾಮಿಯ ಖಾತೆಗಳಲ್ಲಿ ಸತತ ಮೂರನೇ ಬಾರಿ ಬದಲಾವಣೆಯಾಗಿದೆ.

ಕಾನೂನು ಮತ್ತು ಸಣ್ಣ ನೀರಾವರಿ ಸಚಿವರಾಗಿದ್ದ ಸಚಿವ ಮಾಧುಸ್ವಾಮಿಗೆ ಮೊದಲ ಬಾರಿ ಖಾತೆ ಹಂಚಿಕೆ ವೇಳೆ, ಎರಡನ್ನು ಹಿಂಪಡೆದು ವೈದ್ಯಕೀಯ ಶಿಕ್ಷಣ ಖಾತೆ ನೀಡಲಾಗಿತ್ತು. ಈಗ ವೈದ್ಯಕೀಯ ಶಿಕ್ಷಣ ಖಾತೆಯನ್ನು ವಾಪಸ್ ಪಡೆದು, ಆನಂದ್ ಸಿಂಗ್ ಬಳಿಯಿದ್ದ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ನೀಡಲಾಗಿದೆ.

ಸಿಎಂ ಬಿಎಸ್‌ವೈ ಅವರ ಈ ನಿರ್ಧಾರದಿಂದ ಮಾಧುಸ್ವಾಮಿ ಮತ್ತು ಆನಂದ್ ಸಿಂಗ್ ಇಬ್ಬರು ತೀವ್ರವಾಗಿ ಅಸಮಾಧಾನಗೊಂಡಿದ್ದು, ಇಬ್ಬರು ನಾಳೆ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ. ಪದೇ ಪದೇ ನನ್ನ ಖಾತೆಯೇ ಯಾಕೆ ಬದಲಾಗ್ತಿದೆ? ವೈದ್ಯಕೀಯ ಶಿಕ್ಷಣ ಖಾತೆ ಬೇಡ ಎಂದು ನಾನು ಹೇಳಿರಲಿಲ್ಲ. ಆದರೂ ವೈದ್ಯಕೀಯ ಶಿಕ್ಷಣ ಖಾತೆ ವಾಪಸ್ ಪಡೆದಿದ್ದು ಯಾಕೆ ಎಂದು ಪ್ರಶ್ನಿಸಿ ಇವತ್ತು ನಾನು ಏನೂ ಮಾತಾಡಲ್ಲ, ನಾಳೆ ಮಾತನಾಡುತ್ತೇನೆ ದು ಮಾಧುಸ್ವಾಮಿ ಹೇಳಿದ್ದಾರೆ. ಈ ಬೆನ್ನಲ್ಲೇ, ಮಾಧುಸ್ವಾಮಿ ಮನವೊಲಿಕೆಗೆ ಸಿಎಂ ಪ್ರಯತ್ನಿಸಿದ್ದು, ಫಲ ಕೊಟ್ಟಂತೆ ಕಾಣುತ್ತಿಲ್ಲ.

ಸಚಿವ ಆನಂದ್ ಸಿಂಗ್ ಕೂಡ ಇದೇ ಹಾದಿ ಹಿಡಿದಂತೆ ಕಾಣುತ್ತಿದೆ. ನನ್ನ ಕ್ಷೇತ್ರದ ಜನ ನಾನು ಯಾವುದೇ ಪಕ್ಷಕ್ಕೆ ಹೋದ್ರೂ ಆಯ್ಕೆ ಮಾಡ್ತಾರೆ. ಇದಕ್ಕಿಂತ ದೊಡ್ಡ ಸಚಿವ ಸ್ಥಾನ ಬೇಕಿಲ್ಲ ಎಂದಿದ್ದಾರೆ. ನಾಳೆ ಸಿಎಂ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.

ಈ ಮಧ್ಯೆ ಖಾತೆ ಹಂಚಿಕೆಯಲ್ಲಿ ಸಣ್ಣ ಪುಟ್ಟ ಗೊಂದಲ ಇರುವುದು ನಿಜ. ಶೀಘ್ರವೇ ಇದನ್ನು ಸಿಎಂ ಬಗೆಹರಿಸ್ತಾರೆ ಎಂದು ಸಚಿವ ಅಶೋಕ್ ಉಡುಪಿಯಲ್ಲಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *