ಕೌಟುಂಬಿಕವಾಗಿ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಂತೋಷ್ ಪತ್ನಿ

Public TV
1 Min Read

ಬೆಂಗಳೂರು: ಕೌಟುಂಬಿಕವಾಗಿ ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರ ಪತ್ನಿ ಜಾಹ್ನವಿ ತಿಳಿಸಿದ್ದಾರೆ.

ನಿನ್ನೆ ರಾತ್ರಿ ಪತಿಯನ್ನು ಆಸ್ಪತ್ರೆಗೆ ದಾಖಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗ್ಗಿನಿಂದಲೇ ಅವರು ಸ್ವಲ್ಪ ಬೇಜಾರಾಗಿದ್ದರು. ಸಂಜೆ ಹೊರಗಡೆ ಹೋಗಿದ್ದರು. ಹೀಗೆ ಹೋದವರು ಸಂಜೆ ಸುಮಾರು 7 ಗಂಟೆಗೆ ಮನೆಗೆ ಬಂದರು. ಓದುತ್ತಾ ಇರುತ್ತೀನಿ ಅಂತ ಮನೆಯ ಮೇಲೆ ಹೋಗಿದ್ದರು ಎಂದರು.

ಈ ವೇಳೆ ನಾನು ಊಟಕ್ಕೆ ಏನು ಮಾಡ್ಲಿ ಅಂತ ಕೇಳೋದಕ್ಕೆ ಹೋದೆ. ಆಗ ಅವರು ಸ್ವಲ್ಪ ಬೇಜಾರಲ್ಲಿದ್ದರು. ಅದಾಗಲೇ ಅವರು ಏನು ಮಾತನಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಅವರು ಪ್ರಜ್ಞೆ ಕಳೆದುಕೊಳ್ಳುತ್ತಾ ಇದ್ದರು. ಇದರಿಂದ ಗಾಬರಿಗೊಂಡ ನಾವು ಅವರನ್ನು ಅಲ್ಲಿಂದ ಕರೆದುಕೊಂಡು ಬಂದು ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿದೆವು ಎಂದು ತಿಳಿಸಿದರು.

ರಾಜಕೀಯ ಅಸಮತೋಲನದಿಂದ ಸ್ವಲ್ಪ ಬೇಜಾರಾಗಿದ್ದರು ಅಷ್ಟೆ. ಇನ್ನು ಕೌಟುಂಬಿಕವಾಗಿ ನಾವು ತುಂಬಾನೇ ಚೆನ್ನಾಗಿದ್ದೇವೆ. ಅಂಥದ್ದೇನೂ ಸಮಸ್ಯೆ ನಮ್ಮ ನಡುವೆ ಇಲ್ಲ. ಮುಕ್ತವಾಗಿ ಮಾತಾಡಿಕೊಂಡು ಎಲ್ಲಾ ರೀತಿಯಲ್ಲೂ ನಾವಿಬ್ಬರೂ ಚೆನ್ನಾಗಿದ್ದೇವೆ. ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡ ಕಾರಣ ಸ್ವಲ್ಪ ಅವರಿಗೆ ಪ್ರಜ್ಞೆ ಇಲ್ಲ. ಆದರೆ ಬೆಳಗ್ಗೆ ವೇಳೆ ಸರಿಹೋಗುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಜಾಹ್ನವಿ ಹೇಳಿದ್ದಾರೆ.

ನಿದ್ದೆ ಮಾತ್ರೆ ಸೇವಿಸಿ ಸಂತೋಷ್ ನಿನ್ನೆ ಆತ್ಮಹತ್ಯೆಗೆ ಯತ್ನಿಸಿದ್ದು, ರಾಮಯ್ಯ ಆಸ್ಪತ್ರೆಯ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಸಂತೋಷ್ ಅವರನ್ನು ಭೇಟಿ ಮಾಡಲು ಸಿಎಂ ಯಡಿಯೂರಪ್ಪ ರಾತ್ರಿಯೇ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಪ್ರತಿಕ್ರಿಯೆ ನೀಡಿದ ಸಿಎಂ, ಮದುವೆ ಮನೆಯಲ್ಲಿ ಚೆನ್ನಾಗಿದ್ದರು. ಯಾಕೆ ಏನು ಎನ್ನುವುದು ನನಗೂ ತಿಳಿದಿಲ್ಲ. ಈಗ ನಾನು ಅವರ ಕುಟುಂಬದ ಜೊತೆ ಮಾತನಾಡಲು ಹೋಗುತ್ತಿದ್ದೇನೆ ಎಂದು ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *